ಭಟ್ಕಳ: ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಸಂಘವು(ಬಿ.ಎಸ್.ಎನ್.ಡಿ.ಪಿ.) ರಾಜ್ಯದಲ್ಲಿರುವ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯವಾದುದು ಎಂದು ರಾಜ್ಯ ಕಾಸ್ಕಾರ್ಡ ಬ್ಯಾಂಕ್ ಉಪಾಧ್ಯಕ್ಷ ಈಶ್ವರ ನಾಯ್ಕ ಮುರುಡೇಶ್ವರ ಹೇಳಿದರು.
ಅವರು ಪಟ್ಟಣದ ಆಸರಕೇರಿಯ ನಾಮಧಾರಿ ಸಬಾಭವನದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 166 ನೇ ಜಯಂತ್ಯುತ್ಸವ ಕಾರ್ಯಕ್ರಮದ ಅಂಗವಾಗಿ ಬಿ.ಎಸ್.ಎನ್.ಡಿ.ಪಿ. ಸಂಘದ ವತಿಯಿಂದ ರಾಜ್ಯಮಟ್ಟದ
"ಪರಿವರ್ತನಾಶ್ರೀ" ಪ್ರಶಸ್ತಿ ಪಡೆದು ಮಾತನಾಡುತ್ತಿದ್ದರು.
ಬಡಕುಟುಂಬದಿಂದ ಬಂದು ಹಂತ ಹಂತವಾಗಿ ನನ್ನ ಕೆಲಸದಲ್ಲಿ ನಿಷ್ಟೆ ತೋರಿ ಈ ಹಂತಕ್ಕೆ ಬಂದಿದ್ದೇನೆ ಇದಕ್ಕೆ ಗುರುಹಿರಿಯರ ಆಶೀರ್ವಾದವೇ ಕಾರಣ. ನನ್ನನ್ನು ರಾಜ್ಯಮಟ್ಟದ ಸಾಧಕರನ್ನಾಗಿ ಗುರುತಿಸಿದ ಬಿ.ಎಸ್.ಎನ್.ಡಿ.ಪಿ.ಸಂಘಟನೆಗೆ ನಾನು ಆಬಾರಿಯಾಗಿದ್ದೇನೆ.
ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಆದರ್ಶಗಳನ್ನು ರಾಜ್ಯದೆಲ್ಲಡೆ ಪಸರಿಸುತ್ತಿರುವ ಎಸ್.ಎನ್.ಡಿ.ಪಿ. ಕಾರ್ಯಕ್ಕೆ ನನ್ನಿಂದಾಗುವ ಸಹಾಯ ಮಾಡಲು ಸಿದ್ದನಿದ್ದೇನೆ ಎಂದರು.
ಕಾರ್ಯಕ್ರಮ ಉದ್ಘಾಟನೆ ನೆರೆವೇರಿಸಿದ ಭಟ್ಕಳ ನಿಶ್ಛಲಮಕ್ಕಿ ತಿರುಮಲ ವೆಂಕಟರಮಣ ದೇವಸ್ಥಾನದ ಅಧ್ಯಕ್ಷ ಎಂ. ಆರ್. ನಾಯ್ಕ ಮಾತನಾಡಿ, ಶಿಕ್ಷಣದಿಂದಲೇ ಸಮಾಜದ ಅಭಿವೃದ್ದಿ ಎನ್ನುವ ಮಾತನ್ನು ನಾರಾಯಣ ಗುರುಗಳು ಅಂದು ಸಾರಿದ್ದು ಸಮಾಜದ ಎಲ್ಲರೂ ಉತ್ತಮ ಶಿಕ್ಷಣವಂತರಾಗಿ ಒಗ್ಗಟು ತೋರಿದಾಗಲೇ ಸಮೃದ್ದ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ರಾಜ್ಯ ಎಸ್.ಎನ್.ಡಿ.ಪಿ.ಯ ಅಧ್ಯಕ್ಷ ಸೈದಪ್ಪ ಗುತ್ತೇದಾರ ಮಾತನಾಡಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನಮ್ಮ ಸಂಘಟನೆಯ ವತಿಯಿಂದ ಜನಜಾಗ್ರತಿ ಮೂಡಿಸಿ ಸಮಾಜದಲ್ಲಿ ಒಗ್ಗಟ್ಟನ್ನು ತೋರುವ ಕೆಲಸ ಮಾಡುತ್ತಿದೆ . ನಾರಾಯಣ ಗುರುಗಳ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಂಡು ಮುಂದಿನ ಪೀಳಿಗೆಗೆ ಮಾದರಿಯಾಗಬೇಕು ಎಂದರಲ್ಲದೇ ಉ.ಕ.ಜಿಲ್ಲೆಯಲ್ಲಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳ ನೇತೃತ್ವದಲ್ಲಿ ಸಮಾಜದಲ್ಲಿ ಧಾರ್ಮಿಕ ಜಾಗೃತೆ ಮೂಡುತ್ತಿದ್ದು ಇದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಲ್ಲಾ ನಾಮಧಾರಿ ಆರ್ಯ ಈಡಿಗ ಸಂಘದ ಅಧ್ಯಕ್ಷ ಮಂಜುನಾಥ ನಾಯ್ಕ, ಎಸ್.ಎನ್.ಡಿ.ಪಿ.ಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಂತರಾಜು, ಮಾವಳ್ಳಿ ನಾಮಧಾರಿ ಅಬಿವೃದ್ದಿ ಸಂಘದ ಅಧ್ಯಕ್ಷ ಸುಬ್ರಾಯ ನಾಯ್ಕ ಮಾತನಾಡಿದರು.
ವೇದಿಕೆಯಲ್ಲಿ ಎಸ್.ಎನ್.ಡಿ.ಪಿ.ಯ ಉಪಾಧ್ಯಕ್ಷ ಪ್ರಕಾಶ ಕೊಟ್ಯಾನ್, ರಾಜ್ಯ ಸಂಚಾಲಯ ಶ್ರೀನಿವಾಸ ನಾಯ್ಕ, ಜಿಲ್ಲಾಧ್ಯಕ್ಷ ಜಗದೀಶ ನಾಯ್ಕ,ಶಿರಸಿ, ಕಾರ್ಯದರ್ಶಿ, ಶ್ರೀಧರ ನಾಯ್ಕ ಜಿಲ್ಲಾ ಕಾರ್ಯದರ್ಶಿ ಸಂತೋಷ ನಾಯ್ಕ ಉಪಸ್ಥಿತರಿದ್ದರು.
ಕುಮಾರಿ ನೇಹಾ ನಾಯ್ಕ ಪ್ರಾರ್ಥನೆ ಹಾಡಿದರು. ಮನಮೋಹನ ನಾಯ್ಕ ಸ್ವಾಗತಿಸಿದರು. ಶಿಕ್ಷಕ ನಾರಾಯಣ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಪಾಂಡುರಂಗ ನಾಯ್ಕ ವಂದಿಸಿದರು.