ಭಟ್ಕಳ: ಮಾ.10 ರಂದು ಭಟ್ಕಳ ತಾಲೂಕಿನ ಕಟಗಾರಕೊಪ್ಪ ಪಂಚಾಯತ್ ವ್ಯಾಪ್ತಿಯ ಬೆಟ್ಕೂರಿಗೆ ಪಿಕ್ನಿಕ್ ಗೆ ತೆರಳಿದ ಇಲ್ಲಿನ ಹನಿಫಾದ್ನ ಇಬ್ಬರು ಯುವಕರನ್ನು ಕಡವೆ ಬೇಟೆಯ ಸುಳ್ಳಾರೋಪದಲ್ಲಿ ಕಚೇರಿಗೆ ಕರೆಸಿಕೊಂಡು ಅಮಾನುಷವಾಗಿ ಹಲ್ಲೆಗೈದು ಅವರು ಕಿಡ್ನಿ ವೈಫಲ್ಯಕ್ಕೆ ಕಾರಣರಾದ ಅರಣ್ಯಾಧಿಕಾರಿಗಳನ್ನು ಅಮಾನತ್ತುಗೊಳಿಸಬೇಕೆಂದು ಆಗ್ರಹಿಸಿ ನಾಗರೀಕ ವೇದಿಕೆಯ ಕಾರ್ಯಕರ್ತರು ಸೋಮವಾರ ಇಲ್ಲಿನ ಸಹಾಯಕ ಆಯುಕ್ತರ ಮೂಲಕ ರಾಜ್ಯಪಾಲರಿಗೆ ಮನವಿಯನ್ನು ಅರ್ಪಿಸಿದರು.
ಹೆಬಳೆ ಪಂಚಾಯತ್ ವ್ಯಾಪ್ತಿಯ ಹನಿಫಾಬಾದ್ ನಿವಾಸಿಯಾಗಿರುವ ಉಮೈರ್ ಸಯ್ಯದ್ ರುಕ್ನುದ್ದೀನ್ ಹಾಗೂ ಮುಸ್ಬಾ ಸ್ಟ್ರೀಟ್ ನಿವಾಸಿ ಅರ್ಫಾತ್ ಗುಟ್ಟಿಗಾರ ಎಂಬುವವರು ಪಿಕ್ನಿಕ್ ಗೆ ತೆರಳಿದ ಸಂದರ್ಭದಲ್ಲಿ ಅವರ ಬೈಕ್ ಅಡ್ಡಗಟ್ಟಿ ನಿಲ್ಲಿಸಿದ ಎ.ಸಿ.ಎಫ್ ಬಾಲಚಂದ್ರ, ವಲಯ ಅರಣ್ಯಾಧಿಕಾರಿ ಶಂಕರ ಗೌಡ ಎಂಬುವವರು ಕಡವೆ ಮಾಂಸ ಸಾಗಾಟ ಹಾಗೂ ಕಡವೆ ಬೇಟೆ ಮಾಡಿದ್ದಾರೆಂದು ಆರೋಪಿಸಿ ಮಾರಾಣಾಂತಿಕ ಹಲ್ಲೆಗೈದು ಗೂಂಡಾವರ್ತನೆ ಮಾಡಿದ್ದನ್ನು ನಾಗರೀಕವೇದಿಕೆ ಬಲವಾಗಿ ಖಂಡಿಸುತ್ತದೆ ಎಂದು ಮನವಿಯಲ್ಲಿ ತಿಳಿಸಿದೆ. ಅರಣ್ಯಾಧಿಕಾರಿಗಳು ಕಾನೂನುಬಾಹಿರ ರೀತಿಯಲ್ಲಿ ವರ್ತಿಸಿದ್ದಲ್ಲದೆ ಸಂಶಯದ ಆಧಾರದಲ್ಲಿ ಯುವಕರ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದ್ದು ಇದರ ಪರಿಣಾಮ ಯುವಕರ ಎರಡೂ ಕಿಡ್ನಿಗಳು ಫೇಲ್ ಆಗಿವೆ. ಕುಟುಂಬ ಆಧಾರವಾಗಿದ್ದ ಯುವಕರ ಬದುಕನ್ನು ಸರ್ವನಾಶಗೊಳಿಸಿದ ಅರಣಾಧಿಕಾರಿಗಳು ಮಾನವಹಕ್ಕುಗಳ ಉಲ್ಲಂಘಕರಾಗಿದ್ದು ಕೂಡಲೇ ಇವರನ್ನು ಸೇವೆಯಿಂದ ವಜಾಗೊಳೀಸಬೇಕು, ಹಲ್ಲೆಗೊಳಗಾದ ಕಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಮತ್ತು ಯುಕವರಿಗೆ ಸೂಕ್ತ ಚಿಕತ್ಸೆಯನ್ನು ಸರ್ಕಾರ ಒದಗಿಸಿಕೊಡಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ನಾಗರೀಕ ವೇದಿಕೆಯ ಗೌರವಾಧ್ಯಕ್ಷ ದತ್ತಾತ್ರಯ ನಾಯ್ಕ, ಅಧ್ಯಕ್ಷ ದೇವಯ್ಯ ನಾಯ್ಕ, ಪಾಸ್ಕರ್ ಗೋಮ್ಸ್, ಕಾರ್ಯದರ್ಶಿ ಶ್ರೀಧರ್ ನಾಯ್ಕ, ಈರಾ ನಾಯ್ಕ, ಮಂಜುನಾಯ್ಕ ಮುಂತಾದವರು ಉಪಸ್ಥಿತರಿದ್ದರು. ಮನವಿ ಪತ್ರದ ಪ್ರತಿಯನ್ನು ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷರಿಗೂ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.