ಬೆಂಗಳೂರು: ತಡವಾಗಿ ಆಗಮಿಸಿದರು ಸದ್ಯ ನೈರುತ್ಯ ಮುಂಗಾರು ಇಡೀ ರಾಜ್ಯವನ್ನು ಆವರಿಸಿದೆ. ಕಾರವಾಳಿ ಸೇರಿದಂತೆ ರಾಜ್ಯ ಹಲವು ಜಿಲ್ಲೆಗಳಲ್ಲಿ ಇಂದು ಮುಂಗಾರು ಮಳೆಯ ಅಬ್ಬರ ಜೋರಾಗಿದೆ. ರಾಜ್ಯದಾದ್ಯಂತ ಹಲವು ಜಿಲ್ಲೆಗಳಲ್ಲಿ ಗುಡುಗು-ಸಿಡಿಲು ಸಮೇತ ಭಾರೀ ಮಳೆಯಾಗಿದೆ.
ಬೆಳಗಾವಿ ಜಿಲ್ಲೆಯ ಈದ್ಗಾ ಮೈದಾನದಲ್ಲಿ ಇಂದು ಮುಸಲ್ಮಾನರು ಮಳೆಗಾಗಿ ಸಾಮೂಹಿಕ ಪ್ರಾರ್ಥನೆ ನಡೆಸಿದರು. ಸಾಮೂಹಿಕ ಪ್ರಾರ್ಥನೆ ವೇಳೆ ಭಾವುಕರಾಗಿ ಅನೇಕ ಸಾರ್ವಜನಿಕರು ಕಣ್ಣೀರಿಟ್ಟರು. ಮುಸ್ಲಿಂ ಧರ್ಮಗುರು ಮುಫ್ತಿ ಅಬ್ದುಲ್ ಅಜೀಜ್ ಖಾಜಿ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಏರ್ಪಡಿಸಲಾಗಿತ್ತು. ಮಳೆಗಾಗಿ ಇಂದಿನಿಂದ ಮುಸಲ್ಮಾನರು ಮೂರು ದಿನಗಳ ಕಾಲ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಬೈತ್ಕೋಲ್ನಲ್ಲಿ ಭಾರೀ ಮಳೆಗೆ ಗುಡ್ಡ ಕುಸಿಯಲು ಆರಂಭವಾಗಿದೆ. ಬೈತ್ಕೋಲ್ ಜನರ ಭಾರೀ ವಿರೋಧದ ನಡುವೆ ಗಡ್ಡವನ್ನು ಕಡೆದು ರಸ್ತೆ ನಿರ್ಮಿಸಿದ್ದ ನೌಕಾನೆಲೆ ನಿರ್ಮಿಸಿದ್ದು, ಪರಿಣಾಮ ಗುಡ್ಡದ ಅಂಚಿನಲ್ಲಿರುವ ಮನೆಗಳಿಗೆ ಭಾರೀ ಆತಂಕ ಎದುರಾಗಿದೆ. ಕಡಿದ ರಸ್ತೆ ಮತ್ತು ಗುಡ್ಡದ ಮೇಲಿಂದ ನೇರವಾಗಿ ಜನವಸತಿ ಪ್ರದೇಶದತ್ತ ಮಳೆ ನೀರು ಇಳಿಯುತ್ತಿದ್ದು, ಮಳೆ ನಿರಂತರವಾದಲ್ಲಿ ಗುಡ್ಡದ ಮಣ್ಣು ಕುಸಿಯುವ ಆತಂಕ ಹೆಚ್ಚಾಗಿದೆ.
ಇದರ ನಡುವೆ ಬರದ ಆತಂಕದಿಂದ ಕಂಗಾಲಾಗಿದ್ದ ಉಡುಪಿ ನಗರದ ಜನತೆ ಮುಂಗಾರು ಮಳೆ ನೆಮ್ಮದಿ ನಿಟ್ಟಿಸಿರು ಬಿಡುವಂತೆ ಮಾಡಿದೆ. ಉಡುಪಿ ನಗರದ ಜೀವನದಿ ಸ್ವರ್ಣಾ ಮತ್ತೆ ದುಂಬಿ ಹರಿಯಲು ಶುರು ಮಾಡಿದ್ದಾಳೆ. ಬಜೆ ಅಣೆಕಟ್ಟಿಗೆ ಸ್ವರ್ಣಾ ಒಳಹರಿವು ಆರಂಭವಾಗಿದ್ದು, ಬಜೆ ಅಣೆಕಟ್ಟಿನಲ್ಲಿ ಸದ್ಯ ಮೂರು ಮೀಟರ್ ನೀರು ಸಂಗ್ರಹವಾಗಿದೆ. ನಾಳೆ ಸಂಜೆ ಹೊತ್ತಿಗೆ ನೀರಿನ ಮಟ್ಟ ಐದು ಮೀಟರ್ ಏರಿಕೆಯಾಗುವ ಸಾಧ್ಯತೆ ಇದೆ.
ನಾಳೆಯಿಂದ ನಗರಸಭಾ ವ್ಯಾಪ್ತಿಯ 35 ವಾರ್ಡ್ ಗಳಿಗೆ ನಿರಂತರ ನೀರು ಸರಬರಾಜು ಮಾಡಲು ಅಧಿಕಾರಿಗಳು ಮುಂದಾಗಿದ್ದು, ಕಳೆದ ಎರಡು ತಿಂಗಳಿನಿಂದ ಅನಿಯಮಿತ ನೀರು ಸರಬರಾಜು ಮಾಡಲಾಗುತ್ತಿತ್ತು. ಮಲೆನಾಡು ಭಾಗದಲ್ಲಿ ಯಥೇಚ್ಚ ಮಳೆ ಹಾಗೂ ಉಡುಪಿ ಜಿಲ್ಲೆಯಾದ್ಯಾಂತ ವ್ಯಾಪಕ ಮಳೆಯಾದ ಹಿನ್ನಲೆ ಶೀರೂರು ಡ್ಯಾಂ ಮೂಲಕ ಬಜೆ ಡ್ಯಾಂ ನತ್ತ ಸ್ವರ್ಣಾ ನದಿ ಹರಿದು ಬರುತ್ತಿದೆ.
ಇತ್ತ ತೊಗರಿ ನಾಡು ಕಲಬುರಗಿಗೆ ನಾಡಿಗೆ ಮುಂಗಾರು ಮಳೆ ಎಂಟ್ರಿ ಕೊಟ್ಟಿದ್ದು, ಜಿಲ್ಲೆಯ ಜೇವರ್ಗಿ ಪಟ್ಟಣದಲ್ಲಿ ಧಾರಕಾರ ಮಳೆ ಶುರುವಾಗಿದೆ. ಮುಂಗಾರು ಮಳೆ ಆರಂಭದಿಂದ ಬಿತ್ತನೆ ಕಾರ್ಯ ಚುರುಕುಗೊಳ್ಳುವ ಸಾಧ್ಯತೆ ಇದೆ.
ಯಾದಗಿರಿ, ರಾಮನಗರ, ಬೆಂಗಳೂರು, ತುಮಕೂರು, ಕಲಬುರಗಿ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಇಂದು ಸಂಜೆ ವೇಳೆ ಮಳೆಯಾಗಿದೆ. ಆದರೆ ಇನ್ನು ಹಲವು ಜಿಲ್ಲೆಗಳಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದು, ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕ್ಷೀಣವಾಗಿದೆ. ಪರಿಣಾಮ ಕೆಆರ್ಎಸ್ ಜಲಾಶಯದಲ್ಲಿ 78 ಅಡಿಗೆ ನೀರಿನಮಟ್ಟ ಕುಸಿದಿದೆ. ಈ ವಾರದಲ್ಲಿ ಮಳೆಯಾಗದಿದ್ದರೆ ಬೆಂಗಳೂರು ಸೇರಿದಂತೆ ಕೆಲ ಜಿಲ್ಲೆಗೆ ಕುಡಿಯುವ ನೀರು ಪೂರೈಕೆ ಬಂದ್ ಆಗುವ ಆತಂಕ ಎದುರಾಗಿದೆ.