ಮಣಿಪುರ ಬಿಕ್ಕಟ್ಟಿನ ಹೊಣೆಯನ್ನು ಮೋದಿ, ಅಮಿತ್ ಶಾ ವಹಿಸಬೇಕು; ಎನ್ಜಿಒ ಸಮೂಹ 'ವಿಕಲ್ಪ ಸಂಗಮ್' ಆಗ್ರಹ
ಹೊಸದಿಲ್ಲಿ: 200ಕ್ಕೂ ಅಧಿಕ ಮಂದಿಯ ಸಾವಿಗೆ ಕಾರಣವಾದ ಮಣಿಪುರ ಬಿಕ್ಕಟ್ಟಿನ ನೈತಿಕ ಹೊಣೆಗಾರಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಹಿಸಿಕೊಳ್ಳಬೇಕೆಂದು ಸರಕಾರೇತರ ಸಂಘಟನೆಗಳ (ಎನ್ಜಿಒ) ಸಮೂಹ 'ವಿಕಲ್ಪ ಸಂಗಮ್' ಗುರುವಾರ ಆಗ್ರಹಿಸಿದೆ.
ಮಣಿಪುರ ಬಿಕ್ಕಟ್ಟಿನ ಬಗ್ಗೆ ಪ್ರಧಾನಿಯವರ ನಿರ್ಲಕ್ಷ್ಯವು ಅಸ್ವೀಕಾರಾರ್ಹ ಎಂದು ಹೇಳಿಕೆ ತಿಳಿಸಿದೆ. ಗುಪ್ತಚರ ಏಜೆನ್ಸಿಗಳು ಹಾಗೂ ರಾಜ್ಯ ಸರಕಾರಗಳ ಶಾಮೀಲಾತಿಯೊಂದಿಗೆ ಮಣಿಪುರದ ಪರಿಸ್ಥಿತಿಯು ನಿಯಂತ್ರಣ ಮೀರಿ ಹೋಗುವಂತೆ ಮಾಡಲು ಉದ್ದೇಶಪೂರ್ವಕವಾಗಿ ಅವಕಾಶ ಮಾಡಿಕೊಡಲಾಗಿದೆಯೆಂಬ ಊಹಾಪೋಹಗಳು ಉಂಟಾಗಿವೆಯೆಂದು ವಿಕಲ್ಪ ಸಂಗಮ್ ಹೇಳಿದೆ.
“ರಾ ಹಾಗೂ ಸೇನಾ ಗುಪ್ತಚರ ಇಲಾಖೆ 66 ಸೇರಿದಂತೆ ವಿವಿಧ ಬೇಹುಗಾರಿಕಾ ಸಂಸ್ಥೆಗಳು ಮಣಿಪುರದಲ್ಲಿ ಕಾರ್ಯಾಚರಿಸುತ್ತಿವೆ. ಈ ಏಜೆನ್ಸಿಗಳಿಗೆ ರಾಜ್ಯದಲ್ಲಿ ಏನು ನಡೆಯಲಿದೆಯೆಂಬುದು ಗೊತ್ತಿರುತ್ತದೆ. ಅವು ಇಚ್ಛಿಸಿದಲ್ಲಿ ಸಮಸ್ಯೆಗಳು ಸೌಹಾರ್ದಯುತವಾಗಿ ಬಗೆಹರಿಸಬಹುದಾಗಿತ್ತು' ಎಂದು ಹೇಳಿಕೆ ತಿಳಿಸಿದೆ.
ಬಿರೇನ್ ಸಿಂಗ್ ನೇತೃತ್ವದ ಸರಕಾರವನ್ನು ಕೂಡಲೇ ವಜಾಗೊಳಿಸಬೇಕು ಹಾಗೂ ಮಣಿಪುರದಲ್ಲಿ ಸರ್ವ ಪಕ್ಷ ಸರಕಾರ ರಚನೆಯಾಗಬೇಕಾಗಿದೆ. ಇಂತಹ ಪರಿಸ್ಥಿತಿ ನಿರ್ಮಾಣವಾಗಿರುವುದಕ್ಕಾಗಿ ಭಾರತ ಸರಕಾರವೂ ಹೊಣೆಗಾರನಾಗಿದೆ ಎಂದು ಹೇಳಿಕೆ ತಿಳಿಸಿದೆ.
ಮೇ ತಿಂಗಳ ಆರಂಭದಿಂದೀಚೆಗೆ ಮಣಿಪುರವು ಕುಕಿ ಹಾಗೂ ಮೈತೈ ಸಮುದಾಯಗಳ ನಡುವೆ ಜನಾಂಗೀಯ ಸಂಘರ್ಷಕ್ಕೆ ಸಾಕ್ಷಿಯಾಗಿದೆ. 60 ಸಾವಿರಕ್ಕೂ ಅಧಿಕ ಮಂದಿ ಮಣಿಪುರ ನಾಗರಿಕರು ಮನೆಗಳನ್ನು ತೊರೆದು ಪರಾರಿಯಾಗಿದ್ದಾರೆ. ರಾಜ್ಯದಲ್ಲಿ ಅತ್ಯಾಚಾರ ಹಾಗೂ ಹತ್ಯೆಗಳ ಹಲವಾರು ಪ್ರಕರಣಗಳು ವರದಿಯಾಗಿವೆ. ಭಾರೀ ಸಂಖ್ಯೆಯಲ್ಲಿ ಕೇಂದ್ರೀಯ ಭದ್ರತಾಪಡೆಗಳ ಉಪಸ್ಥಿತಿಯಿರುವ ಹೊರತಾಗಿಯೂ ಗಲಭೆಕೋರ ಗುಂಪುಗಳು ಪೊಲೀಸ್ ಪಡೆಗಳ ಶಸ್ತ್ರಾಗಾರಕ್ಕೆ ಹಾಗೂ ಹಲವಾರು ಮನೆಗಳಿಗೆ ಬೆಂಕಿ ಹಚ್ಚಿರುವುದನ್ನು ವಿಕಲ್ಪ ಹೇಳಿಕೆಯಲ್ಲಿ ಗಮನಸೆಳೆದಿದೆ.