ಧಾರವಾಡ : ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶೆ ಪುಷ್ಪಲತ ಸಿ.ಎಮ್. ಬುಧವಾರ ಜಿಲ್ಲಾಸ್ಪತ್ರೆ, ಕೇಂದ್ರಕಾರಾಗೃಹ ಸೇರಿದಂತೆ ವಿವಿಧ ಸ್ಥಳಗಳಿಗೆ ಅನಿರೀಕ್ಷಿತ ಭೇಟಿ ನೀಡಿ, ಕೋವಿಡ್ ನಿಯಮಗಳ ಪಾಲನೆ ಕುರಿತು ಪರಿಶೀಲಿಸಿದರು.
ಧಾರವಾಡ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ, ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡುತ್ತಿರುವ ಕುರಿತು ವಿವಿಧ ಜೈಲ್ ವಾರ್ಡ್ ಗಳಿಗೆ ಭೇಟಿ ನೀಡಿ ತಿಳಿದುಕೊಂಡರು. ಜೈಲು ಅಧೀಕ್ಷಕ ಮರಿಗೌಡ ಅವರು ಮಾಹಿತಿ ನೀಡಿದರು. ನಂತರ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ, ಆಸ್ಪತ್ರೆ ಆವರಣದಲ್ಲಿ ಜನಜಂಗುಳಿ ಸೇರದಂತೆ ಮುಂಜಾಗ್ರತೆ ವಹಿಸಲು ಜಿಲ್ಲಾ ಆಸ್ಪತ್ರೆ ಅಧೀಕ್ಷಕರಿಗೆ ಮತ್ತು ಹಿರಿಯ ವೈದ್ಯರಿಗೆ ಸೂಚಿಸಿದರು.
ಕಿಟೆಲ್ ಕಾಲೇಜು ಮತ್ತು ಹೈಸ್ಕೂಲ್ಗಳಲ್ಲಿನ ಮಕ್ಕಳ ತರಗತಿ ಕೊಠಡಿಗಳು, ಶಾಲಾ ಆವರಣ ಮತ್ತು ಗ್ರಂಥಾಲಯಗಳಿಗೆ ಭೇಟಿ ನೀಡಿ, ಕೋವಿಡ್ ಮಾರ್ಗಸೂಚಿಗಳ ಪಾಲನೆಗೆ ಶಾಲಾ ಆಡಳಿತ ಮಂಡಳಿ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಪಡೆದರು. ತರಗತಿಗಳಿಗೆ ತೆರಳಿ ಮಾತನಾಡಿ, ಮಕ್ಕಳಿಗೆ ಮಾಸ್ಕ್ ಧರಿಸಲು, ಕಡ್ಡಾಯವಾಗಿ ಲಸಿಕೆ ಪಡೆಯಲು ತಿಳಿಸಿದರು.