ಹೊಸದಿಲ್ಲಿ: ಇಲ್ಲಿನ ನಿಝಾಮುದ್ದೀನ್ ಪ್ರದೇಶದಲ್ಲಿ ನಡೆದಿದ್ದ ತಬ್ಲೀಗಿ ಜಮಾಅತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 29 ವಿದೇಶಿ ಪ್ರಜೆಗಳ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್ ಗಳಡಿ, ಸಾಂಕ್ರಾಮಿಕ ರೋಗಗಳ ಕಾಯ್ದೆ, ಮಹಾರಾಷ್ಟ್ರ ಪೊಲೀಸ್ ಕಾಯ್ದೆ, ವಿಪತ್ತು ನಿರ್ವಹಣಾ ಕಾಯ್ದೆಯಡಿ ದಾಖಲಾಗಿದ್ದ ಎಫ್ ಐಆರ್ ಗಳನ್ನು ಬಾಂಬೆ ಹೈಕೋರ್ಟ್ ರದ್ದುಗೊಳಿಸಿದೆ.
ತೀರ್ಪು ನೀಡುವ ಸಂದರ್ಭ ಮಾಧ್ಯಮಗಳನ್ನು ಹೈಕೋರ್ಟ್ ಕಟು ಶಬ್ಧಗಳಿಂದ ಟೀಕಿಸಿತು.
“ಮರ್ಕಝ್ ದಿಲ್ಲಿಗೆ ಬಂದಿದ್ದ ವಿದೇಶಿಯರ ವಿರುದ್ಧ ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ದೊಡ್ಡ ಅಪಪ್ರಚಾರ ನಡೆದಿದೆ. ಭಾರತದಲ್ಲಿ ಕೊರೋನ ಹರಡಲು ಇವರೇ ಕಾರಣ ಎನ್ನುವ ಚಿತ್ರಣವನ್ನು ಈ ಮಾಧ್ಯಮಗಳು ಪ್ರಸಾರ ಮಾಡಿವೆ” ಎಂದು ಕೋರ್ಟ್ ಹೇಳಿತು.
“ಧಾರ್ಮಿಕ ಚಟುವಟಿಕೆಯ ವಿರುದ್ಧದ ಅಪಪ್ರಚಾರ ಅನಗತ್ಯವಾಗಿತ್ತು” ಎಂದು ಜಸ್ಟಿಸ್ ಟಿವಿ ನಲವಾಡೆ ಮತ್ತು ಜಸ್ಟಿಸ್ ಎಂ.ಜಿ. ಸೇವ್ಲಿಕಾರ್ ಅವರಿದ್ದ ವಿಭಾಗೀಯ ಪೀಠ ಹೇಳಿತು.
ತಬ್ಲೀಗಿ ಜಮಾಅತ್ ನ ಚಟುವಟಿಕೆಗಳು 50 ವರ್ಷಗಳಿಂದಲೂ ನಡೆಯುತ್ತಿದೆ. ನಿಝಾಮುದ್ದೀನ್ ಮರ್ಕಝ್ ಕಾರ್ಯಕ್ರಮದಲ್ಲಿ ಈ ವಿದೇಶಿಗರು ಭಾಗವಹಿಸುವ ಬಗ್ಗೆ ಮತ್ತು ವೀಸಾಗಳನ್ನು ನೀಡುವ ಬಗ್ಗೆ ಕೇಂದ್ರ ಸರಕಾರಕ್ಕೆ ಅರಿವಿತ್ತು ಎಂದು ಕೋರ್ಟ್ ಹೇಳಿದೆ.
“ಈ ಪ್ರಕರಣದಲ್ಲಿ ತಬ್ಲೀಗಿ ಜಮಾಅತ್ ಸದಸ್ಯರನ್ನು ಬಲಿಪಶುಗಳನ್ನಾಗಿ ಮಾಡಲಾಯಿತು. ಆರೋಗ್ಯ ಬಿಕ್ಕಟ್ಟಿನ ನಡುವೆ ದೇಶ ಇರುವಾಗ ರಾಜಕೀಯ ಸರಕಾರವೊಂದು ಬಲಿಪಶುವನ್ನು ಹುಡುಕಲು ಯತ್ನಿಸುತ್ತಿತ್ತು” ಎಂದು ಕೋರ್ಟ್ ಆಕ್ರೋಶ ವ್ಯಕ್ತಪಡಿಸಿತು.