ಇಂಫಾಲ: ಇಲ್ಲಿನ ಘಾರಿ ಪ್ರದೇಶದಲ್ಲಿ ನೂರಾರು ಮಹಿಳೆಯರು ಶನಿವಾರ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ಬಳಿಕ ಮಣಿಪುರದ ಇಂಫಾಲದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ.
ಮಹಿಳಾ ಪ್ರತಿಭಟನಾಕಾರರು ಬೆಳಗ್ಗೆ ಸುಮಾರು 9 ಗಂಟೆಗೆ ರಸ್ತೆ ತಡೆ ನಡೆಸಿ, ಟಯರ್ಗಳನ್ನು ಸುಟ್ಟು, ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಬಳಿಕ ಪರಿಸ್ಥಿತಿ ಉದ್ದಿಗ್ನಗೊಂಡಿತು.
ಈ ಹಿನ್ನೆಲೆಯಲ್ಲಿ ಮಣಿಪುರ ಸಶಸ್ತ್ರ ಪೊಲೀಸ್, ಸೇನಾ ಪಡೆ ಹಾಗೂ ಕ್ಷಿಪ್ರ ಕಾರ್ಯಪಡೆ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದವು. ಅಶ್ರುವಾಯು ಸೆಲ್ಗಳನ್ನು ಸಿಡಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಯಿತು. ನಂತರ ಹಲವು ಪ್ರದೇಶಗಳಲ್ಲಿ ಧ್ವಜ ಮೆರವಣಿಗೆ ನಡೆಸಲಾಯಿತು.
ಇಂಫಾಲದ ಕಣಿವೆಯಲ್ಲಿ ಕೇಂದ್ರೀಕೃತವಾಗಿರುವ ಬಹುಸಂಖ್ಯಾತ ಮೈತೈ ಹಾಗೂ ಗುಡ್ಡಗಾಡು ಜಿಲ್ಲೆಗಳಲ್ಲಿರುವ ಕುಕಿ ಸಮುದಾಯದ ಜನರ ನಡುವೆ ಮೇ 3ರಿಂದ ಮಣಿಪುರದಲ್ಲಿ ಜನಾಂಗೀಯ ಘರ್ಷಣೆ ನಡೆಯುತ್ತಿದೆ.
ಈ ಜನಾಂಗೀಯ ಹಿಂಸಾಚಾರದಲ್ಲಿ ಇದುವರೆಗೆ 160ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. ಪರಿಶಿಷ್ಟ ಜಾತಿ ಸ್ಥಾನಮಾನ ನೀಡಬೇಕೆನ್ನುವ ಮೈತೈ ಸಮುದಾಯದ ವಿರುದ್ಧ ಗುಡ್ಡಗಾಡು ಜಿಲ್ಲೆಗಳಲ್ಲಿ ಮೇ 3ರಂದು ಆಯೋಜಿಸಲಾಗಿದ್ದ 'ಬುಡಕಟ್ಟು ಏಕತಾ ಡ್ಯಾಲಿ' ಸಂದರ್ಭ ಈ ಹಿಂಸಾಚಾರ ಭುಗಿಲೆದ್ದಿತ್ತು.
ಮಣಿಪುರದಲ್ಲಿ ಮೈತೈ ಸಮುದಾಯದ ಜನರು ಸುಮಾರು ಶೇ. 53 ಇದ್ದಾರೆ. ಇವರಲ್ಲಿ ಹೆಚ್ಚಿನವರು ಇಂಫಾಲ ಕಣಿವೆಯಲ್ಲಿ ವಾಸಿಸುತ್ತಿದ್ದಾರೆ. ನಾಗಾ, ಕುಕಿಗಳು ಸೇರಿದಂತೆ ಬುಡಕಟ್ಟು ಜನರು ಶೇ. 40 ಇದ್ದಾರೆ. ಇವರು ಹೆಚ್ಚಾಗಿ ಗುಡ್ಡಗಾಡು ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ.
ರಾಜ್ಯ ಸಹಜ ಸ್ಥಿತಿಗೆ ಮರಳುತ್ತಿರುವ ಸಂದರ್ಭ ಮೈತೈ ಸಮುದಾಯದ ಜನರ ಗುಂಪು ಮೇ 4ರಂದು ಕುಕಿ ಬುಡಕಟ್ಟಿಗೆ ಸೇರಿದ ಇಬ್ಬರು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿದ ವೀಡಿಯೊ ಬುಧವಾರ ವೈರಲ್ ಆಗಿದೆ. ಈ ವೀಡಿಯೊದ ಬಗ್ಗೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.