ಮಣಿಪುರ: ಮಹಿಳೆಯರನ್ನು ನಗ್ನಗೊಳಿಸಿ ಮೆರವಣಿಗೆ, ಸುಪ್ರೀಂನಿಂದ ಸ್ವಯಂಪ್ರೇರಿತ ಪ್ರಕರಣ ದಾಖಲು
ಹೊಸದಿಲ್ಲಿ: ದೇಶವನ್ನು ಆಳುತ್ತಿರುವ ಸರಕಾರದ ಇಬ್ಬರು ಅತ್ಯುನ್ನತ ಕಾನೂನು ಅಧಿಕಾರಿಗಳಾದ ಅಟಾರ್ನಿ ಜನರಲ್ ಮತ್ತು ಸಾಲಿಸಿಟರ್ ಜನರಲ್ ಅವರನ್ನು ಗುರುವಾರ ತನ್ನೆದುರು ಕರೆಸಿಕೊಂಡ ಭಾರತದ ಮುಖ್ಯ ನ್ಯಾಯಾಧೀಶ ಡಿ.ವೈ.ಚಂದ್ರಚೂಡ್ ಅವರು, ಜನಾಂಗೀಯ ಹಿಂಸಾಚಾರದಿಂದ ತತ್ತರಿಸಿರುವ ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಮತ್ತು ಲೈಂಗಿಕ ದೌರ್ಜನ್ಯವನ್ನು ತೋರಿಸಿರುವ ವೀಡಿಯೊದಿಂದ ನ್ಯಾಯಾಲಯವು ತೀವ್ರ ವಿಚಲಿತಗೊಂಡಿದೆ ಎಂದು ತಿಳಿಸಿದರು.
ಸರ್ವೋಚ್ಚ ನ್ಯಾಯಾಲಯದ ಪರವಾಗಿ ಮಾತನಾಡಿದ ನ್ಯಾ.ಚಂದ್ರಚೂಡ್, ಅಪರಾಧಿಗಳನ್ನು ಕಾನೂನು ಕ್ರಮಕ್ಕೊಳ ಪಡಿಸುವಂತೆ ಎಚ್ಚರಿಕೆ ನೀಡಿದರು. ಇಲ್ಲದಿದ್ದರೆ ನ್ಯಾಯಾಂಗವೇ ಕ್ರಮವನ್ನು ತೆಗೆದುಕೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.
ಮಣಿಪುರ ಹಿಂಸಾಚಾರದಲ್ಲಿ ತನ್ನ ವೀಡಿಯೊ ಮಧ್ಯಪ್ರವೇಶವು ಮಾನವೀಯ ವಿಷಯಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಮೊದಲಿನಿಂದಲೂ ಪ್ರತಿಪಾದಿಸಿಕೊಂಡು ಬಂದಿದೆ. ಅದು ತನ್ನನ್ನು ರಾಜ್ಯದಲ್ಲಿ ಶಾಂತಿ ಮರುಸ್ಥಾಪನೆಗೆ ಅನುಕೂಲ ಕಲ್ಪಿಸುವ ವೇದಿಕೆಯನ್ನಾಗಿ ಬಿಂಬಿಸಿಕೊಂಡಿದೆ. ಹಿಂಸಾಚಾರಕ್ಕೆ ಸಿಲುಕಿರುವ ಜನರಿಗೆ ರಕ್ಷಣೆಯನ್ನು ಒದಗಿಸಲು ಅದು ಕೇಂದ್ರ ಮತ್ತು ರಾಜ್ಯ ಸರಕಾರಗಳ ಮೇಲೆ ನಂಬಿಕೆಯಿಟ್ಟಿತ್ತು.
ಬೆಳಗ್ಗೆ ದಿನದ ಕಲಾಪಗಳಿಗಾಗಿ ನ್ಯಾಯಾ ಲಯವು ಸಮಾವೇಶಗೊಂಡ ಬೆನ್ನಿಗೇ ನ್ಯಾ.ಚಂದ್ರಚೂಡ್ ಸರಕಾರವನ್ನು ತರಾಟೆಗೆತ್ತಿ ಕೊಂಡರು. ಅದಾಗಲೇ ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹಾ ಅವರು ಮುಂದಿನ ಸಾಲಿನಲ್ಲಿ ಕಾಯುತ್ತ ಕುಳಿತಿದ್ದರು. ಮಾಧ್ಯಮಗಳಲ್ಲಿ ಕಾಣಿಸಿಕೊಂಡಿರುವ ದೃಶ್ಯಾವಳಿಗಳಿಂದ ನ್ಯಾಯಾಲಯವು ತೀವ್ರ ವಿಚಲಿತಗೊಂಡಿರುವುದರಿಂದ ನಿಮ್ಮನ್ನು ಕರೆಸಿದ್ದೇವೆ ಎಂದು ಪೀಠವು ತಿಳಿಸಿತು.
ಮಹಿಳೆಯರ ಬೆತ್ತಲೆ ಮೆರವಣಿಗೆಯ ವೀಡಿಯೊವನ್ನು ಸ್ವಯಂ ಪ್ರೇರಿತವಾಗಿ ಗಮನಕ್ಕೆ ತೆಗೆದುಕೊಂಡ ನ್ಯಾಯಾಲಯವು, ಈ ದೃಶ್ಯಾವಳಿಗಳು ಸಾರಾಸಗಟು ಸಾಂವಿಧಾನಿಕ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗಳನ್ನು ಸೂಚಿಸಿವೆ. ಹಿಂಸಾಚಾರವನ್ನು ನಡೆಸಲು ಮಹಿಳೆಯನ್ನು ಸಾಧನವಾಗಿ ಬಳಸುವುದು ಸಾಂವಿ ಧಾನಿಕ ಪ್ರಜಾಪ್ರಭುತ್ವದಲ್ಲಿ ಸ್ವೀಕಾರಾರ್ಹವಲ್ಲ ಎಂದು ಹೇಳಿತು.
ನ್ಯಾಯಾಲಯದ ಕಳವಳವನ್ನು ಸರಕಾರಕ್ಕೆ ತಿಳಿಸುವುದಾಗಿ ವೆಂಕಟರಮಣಿ ಮತ್ತು ಮೆಹ್ರಾ ಭರವಸೆ ನೀಡಿದರು. ಮೌಖಿಕ ಭರವಸೆಗಳ ಹೊರತಾಗಿಯೂ ಪೀಠವು ತಾನು ತಕ್ಷಣ ಕ್ರಮವನ್ನು ಬಯಸಿರುವುದಾಗಿ ಮತ್ತು ಇಂತಹ ಕ್ರಮಗಳ ಬಗ್ಗೆ ತನಗೆ ಮಾಹಿತಿ ನೀಡುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಸ್ಪಷ್ಟಪಡಿಸಿತು. ಸರ್ವೋಚ್ಚ ನ್ಯಾಯಾಲಯವು ಸ್ವಯಂಪ್ರೇರಿತ ಪ್ರಕರಣದ ವಿಚಾರಣೆಯನ್ನು ಜು.28ಕ್ಕೆ ನಿಗದಿಗೊಳಿಸಿದೆ.
ಕೊನೆಗೂ ಮೌನ ಮುರಿದ ಪ್ರಧಾನಿ
ಎರಡೂವರೆ ತಿಂಗಳುಗಳಿಂದಲೂ ಮಣಿಪುರ ರಾಜ್ಯವ ಜನಾಂಗೀಯ ಹಿಂಸಾಚಾರದಿಂದ ತತ್ತರಿಸುತ್ತಿದ್ದರೂ ತುಟಿಪಿಟಿಕ್ಕೆನ್ನದ ದೇಶದ ಪ್ರಧಾನಿ ಕೊನೆಗೂ ತನ್ನ ಮೌನವನ್ನು ಮುರಿದಿದ್ದಾರೆ. ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿರುವ ಘಟನೆಯು 140 ಕೋ.ಭಾರತೀಯರು ನಾಚಿಕೆಯಿಂದ ತಲೆ ತಗ್ಗಿಸುವಂತೆ ಮಾಡಿದೆ ಎಂದು ಗುರುವಾರ ಹೇಳಿದ ನರೇಂದ್ರ ಮೋದಿ,ಕಾನೂನು ತನ್ನ ಸಂಪೂರ್ಣ ಶಕ್ತಿಯಿಂದ ಕಾರ್ಯನಿರ್ವಹಿಸುತ್ತದೆ ಮತ್ತು ಯಾವುದೇ ತಪ್ಪಿತಸ್ಥರನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಘೋಷಿಸಿದರು.
ಮುಂಗಾರು ಅಧಿವೇಶನ ಆರಂಭಕ್ಕೆ ಮುನ್ನ ಸಂಸತ್ ಸಂಕೀರ್ಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮೋದಿ, 'ಇಂದು ನಾನು ಪ್ರಜಾಪ್ರಭುತ್ವದ ಈ ದೇಗುಲದ ಬಳಿ ನಿಂತಿರುವಾಗ ನನ್ನ ಹೃದಯ ನೋವು ಮತ್ತು ಸಿಟ್ಟಿನಿಂದ ತುಂಬಿದೆ' ಎಂದು ಹೇಳಿದರು. ಬಿಜೆಪಿ ಆಡಳಿತದ ಮಣಿಪುರದಲ್ಲಿಯ ಜನಾಂಗೀಯ ಹಿಂಸಾಚಾರದ ಕುರಿತು ಮೌನವ್ರತಕ್ಕಾಗಿ ಪ್ರತಿಪಕ್ಷಗಳಿಂದ ಟೀಕೆಗಳ ನಡುವೆಯೇ ಮೋದಿ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ.