ಇಂಫಾಲ: ಇಬ್ಬರು ವಿದ್ಯಾರ್ಥಿಗಳ ಹತ್ಯೆ ಕುರಿತಂತೆ ಮಣಿಪುರದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ಗುರುವಾರ ಕೂಡ ಮುಂದುವರಿದಿವೆ. ಉದ್ರಿಕ್ತ ಗುಂಪು ಇಂಫಾಲ ಪಶ್ಚಿಮದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯನ್ನು ಧ್ವಂಸಗೊಳಿಸಿದೆ. ಎರಡು ವಾಹನಗಳಿಗೆ ಬೆಂಕಿ ಹಚ್ಚಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜುಲೈಯಲ್ಲಿ ನಾಪತ್ತೆಯಾದ ಇಬ್ಬರು ವಿದ್ಯಾರ್ಥಿಗಳ ಮೃತದೇಹಗಳ ಫೋಟೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ಇಂಫಾಲದಲ್ಲಿ ಮಂಗಳವಾರ ವಿದ್ಯಾರ್ಥಿಗಳು ಪ್ರತಿಭಟನಾ ಕ್ಯಾಲಿ ನಡೆಸಿದರು. ನಂತರ ಹಿಂಸಾಚಾರ ಭುಗಿಲೆದ್ದಿದೆ. ಹತ್ಯೆಯಾದ ಇಬ್ಬರು ವಿದ್ಯಾರ್ಥಿಗಳನ್ನು ಮೈತೈ ಸಮುದಾಯದ ಹಿಜಾಮ್ ಲಿಂತೋಯಿಂಗಂಬಿ (17) ಹಾಗೂ ಫಿಜಾಮ್ ಹೇಮ್ ಜಿತ್(20) ಎಂದು ಗುರುತಿಸಲಾಗಿದೆ.
ಬುಧವಾರ ರಾತ್ರಿ ಉರಿಪೊಕ್ ಟೈಸ್ಟುಲ್, ಸಾಗೊಲ್ಬಾಂಡ್ ಹಾಗೂ ಟೆರಾ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪ್ರತಿಭಟನಾಕಾರರು ಹಾಗೂ ಭದ್ರತಾ ಪಡೆಗಳ ನಡುವೆ ಘರ್ಷಣೆ ನಡೆದಿದೆ. ಜುಲೈಯಲ್ಲಿ ವಿದ್ಯಾರ್ಥಿಗಳ ನಾಪತ್ತೆ ಕುರಿತಂತೆ ಪ್ರಕರಣ ದಾಖಲಿಸಲಾಗಿತ್ತು. ಈಗ ಪ್ರಕರಣವನ್ನು ಸಿಬಿಐಗೆ ವರ್ಗಾ ಯಿಸಲಾಗಿದೆ. ಸಿಬಿಐ ತಂಡ ಅಪರಾಧ ನಡೆದ ಸ್ಥಳಕ್ಕೆ ಭೇಟಿ ನೀಡಿ ಘಟನೆಯನ್ನು ಮರು ಸೃಷ್ಟಿಸಿದೆ. ವಿಧಿವಿಜ್ಞಾನದ ಪುರಾವೆಗಳನ್ನು ಸಂಗ್ರಹಿಸಿದೆ ಹಾಗೂ ಅದನ್ನು ಕೇಂದ್ರ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದೆ.
ಪ್ರತಿಭಟನಾಕಾರರು ಟಯರ್, ಬಂಡೆ ಹಾಗೂ ಕಬ್ಬಿಣದ ಪೈಪ್ ಗಳನ್ನು ರಸ್ತೆಗೆ ಅಡ್ಡ ಇರಿಸಿ ಸಂಚಾರಕ್ಕೆ ತಡೆ ಒಡ್ಡಿದರು. ಪರಿಸ್ಥಿತಿ ನಿಯಂತ್ರಿಸಲು ಭದ್ರತಾ ಪಡೆಗಳು ಅಶ್ರುವಾಯು ಸೆಲ್ ಗಳನ್ನು ಸಿಡಿಸಿದರು. ಅಂತಿಮವಾಗಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾದರು. ಮಂಗಳವಾರದಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ 65 ಪ್ರತಿಭಟನಾಕಾರರು ಗಾಯಗೊಂಡಿದ್ದು ಪ್ರತಿಭಟನೆ ಹಿಂಸಾತ್ಮಕವಾಗುತ್ತಿದ್ದಂತೆ ಇಂಫಾಲ ಪೂರ್ವ ಹಾಗೂ ಪಶ್ಚಿಮದಲ್ಲಿ ಕರ್ಪೂ ಜಾರಿಗೊಳಿಸಲಾಗಿದೆ.