ಹೊಸದಿಲ್ಲಿ: ಗೋವುಗಳನ್ನು ಪಾಲನೆ ಮಾಡುವ ಹೆಸರಿನಲ್ಲಿ ಅವುಗಳನ್ನು ಕಸಾಯಿಖಾನೆಗೆ ಮಾರಾಟ ಮಾಡುವ ಇಸ್ಕಾನ್ (ಇಂಟರ್ ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್ನೆಸ್) ದೇಶದ “ಅತಿ ದೊಡ್ಡ ಮೋಸಗಾರ” ಎಂದು ಬಿಜೆಪಿಯ ಸಂಸದೆ ಮೇನಕಾ ಗಾಂಧಿ ಮಾಡಿದ ಗಂಭೀರ ಆರೋಪದ ವೀಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಮಂಗಳವಾರ ವೈರಲ್ ಆಗಿದೆ.
ವೀಡಿಯೊದಲ್ಲಿ ಕೇಂದ್ರದ ಮಾಜಿ ಸಚಿವೆ ಹಾಗೂ ಪ್ರಾಣಿ ಹಕ್ಕುಗಳ ಹೋರಾಟಗಾರ್ತಿ ಮೇನಕಾ ಗಾಂಧಿ ಆಂಧ್ರಪ್ರದೇಶದ ಅನಂತಪುರ ನಗರದಲ್ಲಿರುವ ಇಸ್ಲಾನ್ನ ಗೋಶಾಲೆಗೆ ಭೇಟಿ ನೀಡಿರುವುದನ್ನು ನೆನಪಿಸಿಕೊಂಡಿದ್ದಾರೆ. ಈ ಸಂದರ್ಭ ಅಲ್ಲಿ ಒಂದೇ ಒಂದು ವಯಸ್ಸಾದ ಗೋವು ಇರಲಿಲ್ಲ. ಕರುಗಳು ಕೂಡ ಇರಲಿಲ್ಲ.
ಹಾಲು ಕೊಡುವ ಗೋವುಗಳನ್ನು ಮಾತ್ರ ಇರಿಸಲಾಗಿದೆ. ಇದರಿಂದ ಗೋವುಗಳನ್ನು ಮಾರಾಟ ಮಾಡುತ್ತಿರುವುದು ಸ್ಪಷ್ಟವಾಗುತ್ತದೆ ಎಂದು ಅವರು ಹೇಳಿದ್ದಾರೆ. “ಇಸ್ಕಾನ್ ತನ್ನ ಎಲ್ಲ ಗೋವುಗಳನ್ನು ಕಸಾಯಿಖಾನೆಗೆ ಮಾರಾಟ ಮಾಡುತ್ತಿದೆ. ಕಸಾಯಿ ಖಾನೆಗಳಿಗೆ ಇಸ್ಕಾನ್ ಮಾರಿರುವಷ್ಟು ಗೋವುಗಳನ್ನು ಇತರ ಯಾರೂ ಮಾರಾಟ ಮಾಡಿಲ್ಲ. ಆದರೆ, ಅವರು ರಸ್ತೆಯಲ್ಲಿ ಹರೇ ರಾಮ್ ಹರೇ ಕೃಷ್ಣ ಎಂದು ಹಾಡುತ್ತಾರೆ. ತಮ್ಮ ಸಂಪೂರ್ಣ ಜೀವನ ಹಾಲನ್ನು ಅವಲಂಬಿಸಿದೆ ಎಂದು ಹೇಳುತ್ತಾರೆ' ಎಂದು ಅವರು ಹೇಳಿದ್ದಾರೆ.
ಮೇನಕಾ ಗಾಂಧಿ ಅವರ ಆರೋಪಗಳನ್ನು ಅಲ್ಲಗಳೆದಿರುವ ಇಸ್ಕಾನ್ ನ ರಾಷ್ಟ್ರೀಯ ವಕ್ತಾರ ಯುಧಿಷ್ಠಿರ್ ಗೋವಿಂದ ದಾಸ್, "ಇಸ್ಕಾನ್ ಗೋವುಗಳು ಹಾಗೂ ಗೂಳಿಗಳ ಸಂರಕ್ಷಣೆಗಾಗಿ ಭಾರತ ಮಾತ್ರವಲ್ಲದೆ, ವಿಶ್ವದಾದ್ಯಂತ ಕೆಲಸ ಮಾಡುತ್ತಿದೆ. ಹಸುಗಳು ಮತ್ತು ಎತ್ತುಗಳು ಇಸ್ಕಾನ್ನ ಗೋಶಾಲೆಯಲ್ಲಿ ಬದುಕಿರುವ ವರೆಗೂ ಇರುತ್ತವೆ. ನಾವು ಒಂದೇ ಒಂದು ಹಸು, ಎತ್ತು ಅಥವಾ ಕರುವನ್ನು ಕಸಾಯಿಖಾನೆಗೆ ಮಾರಾಟ ಮಾಡುವುದಿಲ್ಲ'' ಎಂದು 'ಎಕ್ಸ್'ನಲ್ಲಿ ಹೇಳಿದ್ದಾರೆ.
ಅನಂತಪುರ ಗೋಶಾಲೆಯ ಕುರಿತು ಪಶುವೈದ್ಯರ ಪತ್ರ ಹಾಗೂ ಸ್ಥಳೀಯ ಸಂಸದ, ಶಾಸಕರ ಅಂದಾಜು ಮೌಲ್ಯಮಾಪನವನ್ನು ಅವರು ಹಂಚಿಕೊಂಡಿದ್ದಾರೆ. ಮೇನಕಾ ಗಾಂಧಿ ಅವರು ಅನಂತಪುರದ ಗೋಶಾಲೆಗೆ ಭೇಟಿ ನೀಡಿರುವ ಬಗ್ಗೆ ಯಾವೊಬ್ಬ ಕಾರ್ಮಿಕ ಕೂಡ ಹೇಳಿಲ್ಲ ಎಂದು ದಾಸ್ ಹೇಳಿದ್ದಾರೆ.