15 ಸರಕಾರಿ ಅಧಿಕಾರಿಗಳ ನಿವಾಸ ಸಹಿತ 62 ಕಡೆಗಳಲ್ಲಿ ಲೋಕಾಯುಕ್ತ ದಾಳಿ; 31.50 ಕೋಟಿ ರೂ.ಮೌಲ್ಯದ ಆಸ್ತಿ ಪತ್ತೆ
ಬೆಂಗಳೂರು: ನಿಗದಿತ ಆದಾಯಕ್ಕಿಂತ ಅಧಿಕ ಮೊತ್ತದ ಆಸ್ತಿ ಸಂಪಾದನೆ ಆರೋಪ ಕೇಳಿಬಂದ ಬೆನ್ನಲ್ಲೇ ರಾಜಧಾನಿ ಬೆಂಗಳೂರು ಸೇರಿದಂತೆ 15 ಸರಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ ಒಟ್ಟು 62 ಸ್ಥಳಗಳಲ್ಲಿ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, 31.50 ಕೋಟಿ ರೂ.ಮೌಲ್ಯದ ಚರ-ಸ್ಥಿರಾಸ್ತಿ, ನಗದು ಜಪ್ತಿ ಮಾಡಿದ್ದಾರೆ.
ಬುಧವಾರ ಮುಂಜಾನೆ ಬೆಂಗಳೂರು ನಗರ, ಬೆಂ.ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಮಡಿಕೇರಿ, ತುಮಕೂರು, ವಿಜಯಪುರ, ಬಾಗಲಕೋಟೆ, ರಾಯಚೂರು, ಬೆಳಗಾವಿ, ಕೋಲಾರ, ಯಾದಗಿರಿ, ಕಲಬುರಗಿಯಲ್ಲಿ ಲೋಕಾಯುಕ್ತ ಪೊಲೀಸ್ 15 ಸರಕಾರಿ ಅಧಿಕಾರಿಗಳಿಗೆ ಸಂಬಂಧಿಸಿದಂತೆ ದಾಳಿ ನಡೆಸಿ ಶೋಧ ಕಾರ್ಯಾಚರಣೆ ಕೈಗೊಂಡರು.
* ಬೆಂಗಳೂರಿನ ಕೆ.ಆರ್.ಪುರಂ ತಾಲೂಕಿನ ತಹಶೀಲ್ದಾರ್ ಎಸ್.ಅಜಿತ್ ಕುಮಾರ್ ರೈ ಅವರ ಕಚೇರಿ ಸೇರಿದಂತೆ 11 ಸ್ಥಳಗಳಲ್ಲಿ ಶೋಧ ನಡೆಸಿದಾಗ 40 ಲಕ್ಷ ರೂ. ನಗದು ಸೇರಿದಂತೆ ಅಂದಾಜು 1.90 ಕೋಟಿ ರೂ.ಮೌಲ್ಯದ ಆಸ್ತಿ ಪತ್ತೆಯಾಗಿದೆ. ಜತೆಗೆ, ದುಬಾರಿ ಬೆಲೆಯ ಕಾರು, ಹತ್ತಾರು ಎಕರೆ ಭೂಮಿಯ ದಾಖಲೆಪತ್ರಗಳು ಪತ್ತೆಯಾಗಿದ್ದು, ತನಿಖೆ ಮುಂದುವರಿಸಲಾಗಿದೆ.
* ಬಾಗಲಕೋಟೆಯ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಚೇತನಾ ಅವರಿಗೆ ಸಂಬಂಧಿಸಿದ ಎರಡು ಸ್ಥಳಗಳಲ್ಲಿ ಶೋಧ ನಡೆಸಲಾಗಿದ್ದು, 32 ಲಕ್ಷ ನಗದು ಸೇರಿದಂತೆ ಅಂದಾಜು 1.45 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ.
* ಬಾಗಲಕೋಟೆಯ ಬಿಳಗಿ ತಾ.ಪಂಚಾಯಿತಿ ಕೃಷಿ ಅಧಿಕಾರಿ ಕೃಷ್ಣ ರಾಮಪ್ಪ ಶಿರೂರು ಅವರಿಗೆ ಸೇರಿದ 4 ಸ್ಥಳಗಳಲ್ಲಿ ಶೋಧ ನಡೆಸಲಾಗಿದ್ದು, ಅಂದಾಜು 71.88 ಲಕ್ಷ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ.
* ಮುದ್ದೇಬಿಹಾಳದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಜಿನ್ನಪ್ಪ ಪದ್ಮಣ್ಣ ಶೆಟ್ಟಿಗೆ ಸೇರಿದ 3 ಸ್ಥಳಗಳಲ್ಲಿ ಶೋಧ ನಡೆಸಲಾಗಿದ್ದು, ಅಂದಾಜು 1.42 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ.
* ಬಸವನ ಬಾಗೇವಾಡಿ ಪಿಡಬ್ಲ್ಯುಡಿ ಉಪವಿಭಾಗದ ಕಿರಿಯ ಅಭಿಯಂತರ ಭೀಮನಗೌಡಗೆ ಸೇರಿದ 2 ಸ್ಥಳಗಳಲ್ಲಿ ಶೋಧ ನಡೆಸಲಾಗಿದ್ದು, ಅಂದಾಜು 1.90 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ.
* ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮಡಿಕೇರಿ ಉಪವಿಭಾಗಎಫ್ಡಿಎ ಪಿ.ಎಂ.ಅಬ್ದುಲ್ ಬಶೀರ್ಗೆ ಸೇರಿದ 3 ಸ್ಥಳಗಳಲ್ಲಿ ಶೋಧ ನಡೆಸಲಾಗಿದ್ದು, ನಗದು 14 ಲಕ್ಷ ರೂ. ಸೇರಿದಂತೆ ಅಂದಾಜು 1.14 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ.
* ಸಿಂಧನೂರು ನಗರ ಮತ್ತು ಗ್ರಾಮಾಂತರ ಯೋಜನೆ ಸದಸ್ಯ ಕಾರ್ಯದರ್ಶಿ ಶರಣಪ್ಪಗೆ ಸೇರಿದ 4 ಸ್ಥಳಗಳಲ್ಲಿ ಶೋಧ ನಡೆಸಲಾಗಿದ್ದು, 14 ಲಕ್ಷ ರೂ. ನಗದು ಸೇರಿದಂತೆ ಅಂದಾಜು 2.03 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ.
* ತುಮಕೂರಿನ ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್.ರವಿಗೆ ಸೇರಿದ 6 ಕಡೆಗಳಲ್ಲಿ ಶೋಧ ನಡೆಸಲಾಗಿದ್ದು, ಅಂದಾಜು 4.27 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ.
* ಹಗರಿಬೊಮ್ಮನಹಳ್ಳಿ ಜೆಸ್ಕಾಂ ವಿಭಾಗದ ಇಇ ಶೇಖರ್ಗೆ ಸೇರಿದ 4 ಸ್ಥಳಗಳಲ್ಲಿ ಶೋಧ ನಡೆಸಲಾಗಿದ್ದು, ಅಂದಾಜು 3 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ.ಈ ಸಂಬಂಧ ತನಿಖೆ ಮುಂದುವರಿಸಲಾಗಿದೆ
* ಗೌರಿಬಿದನೂರಿನ ಅಬಕಾರಿ ನಿರೀಕ್ಷಕ ವಿ.ರಮೇಶ್ಗೆ ಸೇರಿದ 5 ಸ್ಥಳಗಳಲ್ಲಿ ಶೋಧ ನಡೆಸಲಾಗಿದ್ದು, ಅಂದಾಜು 2.44 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ.
* ರಾಯಚೂರಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಇಇ ವಿಶ್ವನಾಥ ರೆಡ್ಡಿಗೆ ಸೇರಿದ 2 ಸ್ಥಳಗಳಲ್ಲಿ ಶೋಧ ನಡೆಸಲಾಗಿದ್ದು, ಅಂದಾಜು 1.27 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ.
* ಸಿರಾ ತಾಲೂಕಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ-ವಿಭಾಗದ ಎಈ ಕೆ.ಬಿ.ಪುಟ್ಟರಾಜು ನಿವಾಸ ಹಾಗೂ 4 ಕಡೆಗಳಲ್ಲಿ ಶೋಧ ನಡೆಸಲಾಗಿದ್ದು, ಅಂದಾಜು 1.04 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ.
*ಕೋಲಾರದ ಕೆಆರ್ ಐಡಿಎಲ್ ಎ.ಇ. ಕೋದಂಡ ರಾಮಯ್ಯ ನಿವಾಸ ಸೇರಿ 6 ಸ್ಥಳಗಳಲ್ಲಿ ಶೋಧ ನಡೆಸಲಾಗಿದ್ದು, ಪತ್ತೆಯಾದ ಆಸ್ತಿಗಳ ಅಂದಾಜು ಮೌಲ್ಯ 2.47 ಕೋಟಿ ರೂ.
* ಅದೇ ರೀತಿ, ಚಿಕ್ಕಮಗಳೂರು ಜಿಲ್ಲೆಯ ನಿರ್ಮಿತಿ ಕೇಂದ್ರ ಯೋಜನಾ ವ್ಯವಸ್ಥಾಪಕ ಗಂಗಾಧರ್ ವೈ ನಿವಾಸ ಸೇರಿದಂತೆ 4 ಕಡೆಗಳಲ್ಲಿ ಶೋಧ ನಡೆಸಲಾಗಿದ್ದು, ಅಂದಾಜು 3.75 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ.
ಪ್ರಕರಣ ಸಂಬಂಧ ತನಿಖೆ ಮುಂದುವರೆಸಲಾಗಿದೆ ಎಂದು ಲೋಕಾಯುಕ್ತ ಪ್ರಕಟನೆ ತಿಳಿಸಿದೆ.