ಲೋಕಸಭಾ ಚುನಾವಣೆ ಹಿನ್ನೆಲೆ; 20 ರಾಜ್ಯಗಳಲ್ಲಿ ರೈತರ ಕಿಸಾನ್ ಮಹಾಪಂಚಾಯತ್
ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆಯಲ್ಲಿ ರೈತರು ಯಾವ ಪಕ್ಷವನ್ನು ಬೆಂಬಲಿಸಬೇಕು ಎನ್ನುವ ತೀರ್ಮಾನ ಕೈಗೊಳ್ಳಲು 20 ರಾಜ್ಯಗಳಲ್ಲಿ ಕಿಸಾನ್ ಮಹಾಪಂಚಾಯತ್ ಸಮಾವೇಶ ನಡೆಸಲು ತೀರ್ಮಾನಿಸಲಾಯಿತು ಎಂದು ರೈತ ಮುಖಂಡ ಜಗಜಿತ್ ಸಿಂಗ್ ದಲೈವಾಲಾ ತಿಳಿಸಿದ್ದಾರೆ.
ದಿಲ್ಲಿಯಲ್ಲಿ ರೈತರ ರಾಷ್ಟ್ರೀಯ ಸಂಘಟನೆಯ ಎರಡು ದಿನಗಳ ಸಭೆಯಲ್ಲಿ ನಡೆದ ಚರ್ಚೆಯ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದಅವರು, 20 ರಾಜ್ಯ ಗಳ ಮಹಾ ಪಂಚಾಯತ್ ಸಮಾವೇಶದ ಬಳಿಕ 2024ರ ಫೆ.26ರಂದು 10 ಲಕ್ಷ ರೈತರ ದಿಲ್ಲಿ ಚಲೋ ರ್ಯಾಲಿ ನಡೆಸಿ ಅಂತಿಮ ಘೋಷಣೆಯನ್ನು ಪ್ರಕಟಿಸ ಲಾಗುವುದು ಎಂದು ಹೇಳಿದ್ದಾರೆ. 2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷ ರೈತರ ಒತ್ತಾಯವನ್ನು ಪ್ರಾಮಾಣಿಕವಾಗಿ ಒಪ್ಪು ತ್ತದೆಯೋ ಅಂತಹ ಪಕ್ಷವನ್ನು ಬೆಂಬಲಿಸಲು ರೈತರಿಗೆ ಕರೆ ನೀಡಲಾಗುವುದು. ದೇಶದಾದ್ಯಂತ ರೈತರ ಕೃಷಿ ಸಾಲ ಮನ್ನಾ ಮಾಡಬೇಕು, ರೈತರು ಸಾಲ ಮಾಡಿ ಬೆಳೆ ಬೆಳೆಯಲು ಹೂಡಿಕೆ ಮಾಡಿದ್ದಾರೆ, ಅತಿವೃಷ್ಟಿ ಅನಾವೃಷ್ಟಿ ಬರಗಾಲಕ್ಕೆ ಸಿಲುಕಿ ಸಂಕಷ್ಟದಲ್ಲಿರುವ ಕಾರಣ ಸಾಲಮನ್ನಾ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.
ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿ ಮಾಡಿ ರೈತರಿಗೆ ಖಾತರಿ ಆದಾಯ ಸಿಗುವಂತೆ ಮಾಡಬೇಕು. ಎಲ್ಲ ಕೃಷಿ ಉತ್ಪನ್ನ ಬೆಳೆಗಳಿಗೆ ಕಡ್ಡಾಯವಾಗಿ ಬೆಳೆ ವಿಮೆಯನ್ನು ಜಾರಿಗೊಳಿಸಿ ಅತಿವೃಷ್ಟಿ ಬರಗಾಲಕ್ಕೆ ತುತ್ತಾದಾಗ, ಸಂಪೂರ್ಣ ನಷ್ಟ ಬೆಳೆ ವಿಮೆ ಪರಿಹಾರ ಸಿಗುವಂತಾಗಬೇಕು ಎಂದು ಜಗಜಿತ್ ಸಿಂಗ್ ಹೇಳಿದ್ದಾರೆ.
ದೇಶದ 140 ಕೋಟಿ ಜನರಿಗೆ ಆಹಾರ ಉತ್ಪಾದಿಸಲು 60 ವರ್ಷ ಸತತ ಕಾಯಕ ಮಾಡಿ ಸೇವೆ ಸಲ್ಲಿಸಿದ ರೈತರಿಗೆ ತಿಂಗಳಿಗೆ ಕನಿಷ್ಠ 5 ಸಾವಿರ ರೂ. ಪಿಂಚಣಿ ನೀಡುವ ಯೋಜನೆ ಜಾರಿಗೆ ತರಬೇಕು. ಕೃಷಿಪಂಪ್ ಸೇಟ್ಗಳನ್ನು ವಿದ್ಯುತ್ ಖಾಸಗೀಕರಣ ವ್ಯಾಪ್ತಿಗೆ ತರಲು, ವಿದ್ಯುತ್ ಖಾಸಗೀಕರಣ ನೀತಿಯನ್ನು ಕೇಂದ್ರ ಸರಕಾರ ಜಾರಿ ಮಾಡುವುದನ್ನು ಕೈ ಬಿಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕೃಷಿ ಭೂಮಿಯನ್ನು ಅನ್ಯ ಉದ್ದೇಶಗಳಿಗೆ ವಶಪಡಿಸಿಕೊಳ್ಳುವುದನ್ನು ನಿಲ್ಲಿಸಬೇಕು, ಅವಶ್ಯಕತೆ ಇದ್ದ ಸಂದರ್ಭದಲ್ಲಿ ರೈತನ ಅನುಮತಿ ಯನ್ನು ಕಡ್ಡಾಯಗೊಳಿಸಬೇಕು. ದೇಶದಾದ್ಯಂತ ರೈತರ ಮೇಲಿನ ಮೊಕದ್ದಮೆ ಗಳನ್ನು ವಾಪಸ್ ಪಡೆಯಬೇಕು ಎಂದು ಅವರು ಹೇಳಿದ್ದಾರೆ. ಈ ಮೇಲಿನ ಒತ್ತಾಯಗಳ ಬಗ್ಗೆ ಚರ್ಚಿಸಿ ದೇಶದಾದ್ಯಂತ ಕಿಸಾನ್ ಮಹಾ ಪಂಚಾಯತ್ ನಡೆಸಿ ಎಲ್ಲ ರೈತ ಸಂಘಟನೆಗಳ ಮುಖಂಡರ ಸಹಕಾರದೊಂದಿಗೆ ಅಂತಿಮ ನಿರ್ಧಾರ ಪ್ರಕಟಿಸಲಾಗುವುದು ಎಂದು ಸಂಯುಕ್ತ ಕಿಸಾನ್ ಮೋರ್ಚಾ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ಪಂಜಾಬ್ ರಾಜ್ಯದ ಜಗಜಿತ್ ಸಿಂಗ್ ದಲೈವಾಲಾ, ಮಧ್ಯಪ್ರದೇಶದ ಶಿವಕುಮಾರ್ ಕಕ್ಕ, ಹರ್ಯಾಣದ ಅಭಿಮನ್ಯುಕೊಹರ್, ಕೇರಳದ ಕೆ.ವಿ.ಬಿಜು, ಗುಜರಾತ್ ನ ಜೆ.ಕೆ.ಪಟೇಲ್, ಬಿಹಾರದ ವರುಣ್ ಕುಮಾರ್, ಉತ್ತರ ಪ್ರದೇಶ, ಒಡಿಶಾ, ಹಿಮಾಚಲ ಪ್ರದೇಶ ಮುಂತಾದ ರಾಜ್ಯಗಳ ರೈತ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು ಎಂದು ಪ್ರಕಟನೆ ತಿಳಿಸಿದೆ.