ಹಾಸನ:ಲೋಕಸಭಾ ಚುನಾವಣೆ ನಾಮಪತ್ರಗಳನ್ನು ಹಿಂಪಡೆಯಲು ಕಡೆಯ ದಿನವಾದ ಇಂದು ಭಾರತೀಯ ಡಾ|| ಬಿ.ಆರ್. ಅಂಬೇಡ್ಕರ್ ಜನತಾ ಪಕ್ಷದ ಅಭ್ಯರ್ಥಿ ಹೆಚ್.ಪಿ. ಮಂಜುನಾಥ್ ತಮ್ಮ ನಾಮಪತ್ರ ಹಿಂಪಡೆದಿದ್ದು 6 ಮಂದಿ ಸ್ಪರ್ಧಾ ಕಣದಲ್ಲಿ ಉಳಿದಿದ್ದಾರೆ.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಅಕ್ರಂ ಪಾಷ ಅವರು ಮಾ.29 ರಂದು ಮಧ್ಯಾಹ್ನ 3 ಗಂಟೆ ನಂತರ ವೀಕ್ಷಕರಾದ ಮಂಜಿತ್ ಸಿಂಗ್ ಬ್ರಾರ್ ಹಾಗೂ ಶಶಿಭೂಷಣ್ ಕುಮಾರ್ ಅವರ ಉಪಸ್ಥಿತಿಯಲ್ಲಿ ಅಭ್ಯರ್ಥಿಗಳು ಮತ್ತು ಅವರ ಪ್ರತಿನಿಧಿಗಳ ಸಭೆ ನಡೆಸಿ ಅಂತಿಮ ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳಿಗೆ ಚಿಹ್ನೆಗಳನ್ನು ಹಂಚಿಕೆ ಮಾಡಿದರು.
ಮಾನ್ಯತೆ ಪಡೆದ ಪಕ್ಷಗಳ ಅಭ್ಯರ್ಥಿಗಳಿಗೆ ಆಯಾಯ ಪಕ್ಷದ ಚಿಹ್ನೆಗಳು, ಲಭ್ಯವಿದ್ದು ಉಳಿದವರಿಗೆ ಅವರ ಆಯ್ಕೆಗಳಂತೆ ಚಿಹ್ನೆ ನೀಡಲಾಗಿದೆ. ಅದರಲ್ಲಿ ಜಾತ್ಯಾತೀತ ಜನತಾದಳದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರಿಗೆ ತೆನೆ ಹೊತ್ತ ಮಹಿಳೆ, ಭಾರತೀಯ ಜನತಾಪಕ್ಷದ ಅಭ್ಯರ್ಥಿ ಎ. ಮಂಜು ಅವರಿಗೆ ಕಮಲ, ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ವಿನೋದ್ ರಾಜ್ಗೆ ಆನೆ ಚಿಹ್ನೆ ದೊರೆತಿವೆ. ಅದೇ ರೀತಿ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಚಂದ್ರೇಗೌಡರಿಗೆ ಚುನಾವಣಾ ಆಯೋಗದ ರಾಜಾದ್ಯಂತ ನಿಗದಿ ಪಡಿಸಿರುವ ಆಟೋ ಚಿಹ್ನೆ ದೊರೆತಿದೆ.
ಪಕ್ಷೇತರ ಅಭ್ಯರ್ಥಿಗಳಾದ ಮಹೇಶ್ ಅವರಿಗೆ ರೋಡ್ರೋಲರ್ ಚಿಹ್ನೆಯನ್ನು ಮತ್ತು ಆರ್.ಜಿ. ಸತೀಶ್ ಅವರಿಗೆ ಡಿಶ್ ಆ್ಯಂಟನಾ ಮತ್ತು ಜಿಲ್ಲಾ ಚುನಾವಣಾಧಿಕಾರಿ ಅಕ್ರಂ ಪಾಷ ಹಂಚಿಕೆ ಮಾಡಿದ್ದಾರೆ.
ಹಾಸನ ಲೋಕಸಭಾ ಕ್ಷೇತ್ರದ ಅಂತಿಮ ಮತದಾರರ ಪಟ್ಟಿ ಸಿದ್ದವಾಗಿದ್ದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಅಕ್ರಂ ಪಾಷ ಅವರು ಅಭ್ಯರ್ಥಿಗಳಿಗೆ ಹಾಗೂ ಅವರ ಏಜೆಂಟ್ಗಳೀಗೆ ಹಸ್ತಾಂತರಿಸಿದರು.
ಚುನಾವಣಾ ವೀಕ್ಷಕರ ಸಮ್ಮುಖದಲ್ಲಿ ಈ ಅಂತಿಮ ಮತದಾರರ ಪಟ್ಟಿ ಮತ್ತು ಅಭ್ಯರ್ಥಿಗಳ ಗುರುತಿನ ಚೀಟಿಗಳನ್ನು ವಿವರಣೆ ಮಾಡಿದ ಅವರು ಬೂತ್ವಾರು ಏಜೆಂಟರ್ಗಳಿಗೆ ಕೇವಲ ಈ ಅಂತಿಮ ಮತದಾರರ ಪಟ್ಟಿಯ ಪ್ರತಿಗಳನ್ನು ಮಾತ್ರ ನೀಡಬೇಕು. ಹಳೆಯ ಪಟ್ಟಿಯನ್ನು ಬಳಸಿದಲ್ಲಿ ಮತದಾನದ ದಿನ ಅನಗತ್ಯ ಗೊಂದಲಗಳು ಸೃಷ್ಠಿಯಾಗಲಿದ್ದು ಈ ಬಗ್ಗೆ ಅಭ್ಯರ್ಥಿಗಳು ಗಮನ ಹರಿಸಿ ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ತಿಳಿಸಿದರು.
ಸಹಾಯಕ ಚುನಾವಣಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ಎಂ.ಎಲ್ ವೈಶಾಲಿ, ಚುನಾವಣಾ ತಹಶೀಲ್ದಾರರುಗಳಾದ ಶಿವ ಶಂಕರಪ್ಪ, ನಾಗಭೂಷಣ್, ಚುನಾವಣಾ ಶಿರಸ್ತೆದಾರ್ ಸಿದ್ದರಾಜು ಅವರು ಈ ಸಂದರ್ಭದಲ್ಲಿ ಹಾಜರಿದ್ದರು.