ಧಾರವಾಡ : ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಜರುಗಿದ ರಾಷ್ಟ್ರೀಯ ಲೋಕ್ ಅದಾಲತ್ನ್ನು ಲೋಕ ಅದಾಲತ್ ಮೂಲಕ 28,799 ಪ್ರಕರಣಗಳನ್ನು ರಾಜಿ ಸಂಧಾನ ಮಾಡಿ, 9 ಕೋಟಿ 8 ಲಕ್ಷ ರೂ.ಗಳಿಗೂ ಅಧಿಕ ಮೊತ್ತ ವಸೂಲಿ ಮಾಡಲಾಗಿದೆ.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಕೆ.ಜಿ.ಶಾಂತಿ ಅವರ ಮಾರ್ಗದರ್ಶನದಲ್ಲಿ ಧಾರವಾಡದಲ್ಲಿ 16 , ಹುಬ್ಬಳ್ಳಿಯಲ್ಲಿ 19 , ಕುಂದಗೋಳ 01, ನವಲಗುಂದ ಮತ್ತು ಕಲಘಟಗಿಯಲ್ಲಿ ತಲಾ 02 ಪೀಠಗಳು ಸೇರಿ ಒಟ್ಟು 40 ಪೀಠಗಳನ್ನು ಸ್ಥಾಪಿಸಲಾಗಿತ್ತು.
ವಿವಿಧ ರೀತಿಯ ಹಾಗೂ ವಿವಿಧ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಬಾಕಿ ಇದ್ದ ರಾಜೀ ಆಗಬಹುದಾದಂತಹ ಸುಮಾರು 10,747 ಪ್ರಕರಣಗಳಲ್ಲಿ 6,900 ಪ್ರಕರಣಗಳು ಹಾಗೂ 21,899 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಸೇರಿ ಒಟ್ಟು 28,799 ರಾಜೀ ಸಂಧಾನ ಮಾಡಿಸಿ ಒಟ್ಟು ರೂ.9,08,46,822/- ಮೊತ್ತವನ್ನು ವಸೂಲು ಮಾಡಲಾಗಿರುತ್ತದೆ.
ಧಾರವಾಡದ ಕೌಟುಂಬಿಕ ನ್ಯಾಯಾಲಯದ ಪೀಠಾಧೀಶೆ ಎಸ್. ನಾಗಶ್ರೀ ಮತ್ತು ಸಂಧಾನಕಾರರಾದ ಎಮ್.ಎಲ್. ದೇಸಾಯಿ ರವರನ್ನೊಳಗೊಂಡ ಲೋಕ್ ಅದಾಲತ್ ಪೀಠವು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಕೆ.ಜಿ.ಶಾಂತಿ ಮತ್ತು 2ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಸಿ. ಸದಾನಂದಸ್ವಾಮಿ ಅವರು ಭಾಗವಹಿಸಿ, ಸುಮಾರು 3 ಜೋಡಿ ಸತಿ-ಪತಿಗಳನ್ನು ಒಂದಾಗಿಸಿದ್ದಾರೆ.
ಹುಬ್ಬಳ್ಳಿಯ ಪ್ರಧಾನ ಕೌಟುಂಬಿಕ ನ್ಯಾಯಾಲಯದ ಪೀಠದಲ್ಲಿ 2 ಜೋಡಿ ಸತಿ-ಪತಿಗಳನ್ನು ಒಂದುಗೂಡಿಸಲು ಯಶಸ್ವಿಯಾಗಿದ್ದಾರೆ.
ಹುಬ್ಬಳ್ಳಿಯ 1ನೇ ಅಧಿಕ ಕೌಟುಂಬಿಕ ನ್ಯಾಯಾಲಯದ ಪೀಠದಲ್ಲಿ 12 ಜೋಡಿ ಸತಿ-ಪತಿಗಳನ್ನು ಒಂದು ಮಾಡಲಾಗಿದೆ.
ಧಾರವಾಡದ ಪ್ರಧಾನ ಸಿವಿಲ್ ಮತ್ತು ಜೆ.ಎಮ್.ಎಫ್.ಸಿ. ನ್ಯಾಯಾಧೀಶ ಗಿರೀಶ ಆರ್.ಬಿ. ಮತ್ತು ಸಂಧಾನಕಾರ ಬಸವರಾಜ ತಲವಾಯಿ ಇವರನ್ನೊಳಗೊಂಡ ಲೋಕ್ ಅದಾಲತ್ ಪೀಠದಲ್ಲಿ ಸುಮಾರು 84 ವರ್ಷದ ಹಿರಿಯ ನಾಗರಿಕರು ಉತ್ಸಾಹದಿಂದ ಭಾಗವಹಿಸಿ ತಮ್ಮ ವ್ಯಾಜ್ಯವನ್ನು ಇತ್ಯರ್ಥಪಡಿಸಿಕೊಂಡರು.
ಜಿಲ್ಲೆಯಲ್ಲಿ ಒಟ್ಟು 18 ಕೌಟುಂಬಿಕ ಪ್ರಕರಣಗಳಲ್ಲಿ ದಂಪತಿಗಳನ್ನು ಒಂದು ಗೂಡಿಸಿದ್ದು , 166 ವಿಭಾಗದ ದಾವೆಗಳು, 384 ಚೆಕ್ ಬೌನ್ಸ್ ಪ್ರಕರಣಗಳು, 4 ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿಯ ಪ್ರಕರಣಗಳನ್ನು ರಾಜಿ ಸಂಧಾನ ಮಾಡಿಸುವಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಯಶಸ್ವಿಯಾಗಿದೆ ಸದಸ್ಯ ಕಾರ್ಯದರ್ಶಿ ಸಿ.ಎಂ.ಪುಷ್ಪಲತ ತಿಳಿಸಿದ್ದಾರೆ.