ಭಟ್ಕಳ ಮೂಲದ ಎರಡು ಜನರಲ್ಲಿ ಕೋವಿಡ್-19 ಪತ್ತೆ: ಜಿಲ್ಲಾಧಿಕಾರಿ ಡಾ.ಕೆ ಹರೀಶಕುಮಾರ್
ಕಾರವಾರ: ದುಬೈನಿಂದ ಬಂದಿರುವಂತಹ ಭಟ್ಕಳ್ ಮೂಲದ ಇಬ್ಬರು ವ್ಯಕ್ತಿಗಳಲ್ಲಿ ಕೋವಿಡ್-19 ವೈರಾಣು ಇರುವುದು ದೃಡಪಟ್ಟಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ ಹರೀಶಕುಮಾರ್ ಅವರು ಹೇಳಿದರು.
ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ಗೊಷ್ಠಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, 40 ವರ್ಷದ ಭಟ್ಕಳ್ ಮೂಲದ ವ್ಯಕ್ತಿಯು ದುಬೈನಿಂದ ಮಾ.21 ರಂದು ಮಂಗಳೂರಿನಲ್ಲಿ ವಿಮಾನದ ಮೂಲಕ ಬೆಳಿಗ್ಗೆ 6:30 ಕ್ಕೆ ಬಂದು ತಮ್ಮ ಸಂಭಂಧಿಯೋರ್ವನೊಂದಿಗೆ ಸ್ವಂತ ಕಾರಿನಲ್ಲಿ ಭಟ್ಕಳ್ ಗೆ ಬಂದ ಅವರು ಮಧ್ಯಾಹ್ನದ ಹೊತ್ತಿಗೆ ಸ್ವಯಂ ಪ್ರೇರಿತರಾಗಿ ಭಟ್ಕಳ್ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದರು. ಆಗ ಅವರಲ್ಲಿ ಕೊರೋನಾ ಲಕ್ಷಣಗಳು ಕಂಡುಬಂದಿದ್ದರಿಂದ ಆ ವ್ಯಕ್ತಿಯ ಗಂಟಲಿನ ದ್ರವವನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಪರೀಕ್ಷೀಸಲೆಂದು ಕಳುಹಿಸಲಾಗಿದ್ದು, ಮಾ.23 ಸೋಮವಾರ ರಾತ್ರಿ ವರದಿ ಬಂದಿದ್ದು, ಸೊಂಕು ಇರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಮಾಧ್ಯಮದವರಿಗೆ ತಿಳಿಸಿದರು.
ಇನ್ನೋರ್ವ ವ್ಯಕ್ತಿಯು 65 ವರ್ಷ ವಯಸ್ಸಿನವನಾಗಿದ್ದು, ಭಟ್ಕಳ್ ಮೂಲದವನಾಗಿರುತ್ತಾನೆ. ದುಬೈನಿಂದ ಮಾ.19 ಕ್ಕೆ ಮುಂಬೈಗೆ ಬಂದಿಳಿದು ಅಲ್ಲಿಂದ ಮಂಗಳೂರು ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಸಿ ಮಾ.20 ಕ್ಕೆ ಭಟ್ಕಳ್ ಬಂಧಿರುತ್ತಾನೆ. ನಂತರ ಭಟ್ಕಳ್ ರೈಲು ನಿಲ್ದಾಣದಿಂದ ಆಟೋರಿಕ್ಷಾದಲ್ಲಿ ಮಗನ ಜೊತೆಗೆ ಮನೆಗೆ ಬಂದಿಳಿದಿರುತ್ತಾನೆ. ಮಾ.21 ರಂದು ಆರೋಗ್ಯ ಇಲಾಖೆ ಸಿಬ್ಬಂದಿ ತಪಾಸಣೆ ನಡೆಸಿದ ಸಂದರ್ಭದಲ್ಲಿ ಯಾವುದೇ ಲಕ್ಷಣಗಳು ಕಂಡುಬಂದಿರಲಿಲ್ಲಾ. ಎರಡು ದಿನದ ಬಳಿಕ ಜ್ವರ ಸೇರಿದಂತೆ ಸೊಂಕಿನ ಇತರ ಲಕ್ಷಣಗಳು ಕಂಡುಬಂದ ಹಿನ್ನಲೆಯಲ್ಲಿ ಅವರನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಭಟ್ಕಳ ತಾಲೂಕಾ ಆಸ್ಪತ್ರೆಗೆ ದಾಖಲಿಸಿದ್ದರು. ಈ ವ್ಯಕ್ತಿಯ ಗಂಟಲಿನ ದ್ರವವನ್ನು ಕೂಡಾ ಪರೀಕ್ಷೆಗೆ ಕಳುಹಿಸಿದ್ದೂ, ಇವರ ವರದಿಯು ಕೂಡಾ ಸೋಮವಾರ ರಾತ್ರಿ ಬಂದಿದ್ದು, ಸೊಂಕು ಇರುವುದು ಖಚಿತವಾಗಿದೆ ಎಂದೂ ತಿಳಿಸಿದರು.
ಈ ಇಬ್ಬರು ವ್ಯಕ್ತಿಗಳ ಸಂಪರ್ಕದಲ್ಲಿದ್ದವರನ್ನು ಜಿಲ್ಲಾಡಳಿತವು ಪತ್ತೆ ಹಚ್ಚುತ್ತಿದ್ದು, ಭಟ್ಕಳ ಪಟ್ಟಣವನ್ನು ಕ್ಲಸ್ಟರ್ ಎಂದೂ ಪರಿಗಣಿಸಲಾಗಿದೆ. ಅಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ ರೋಶನ್ ಅವರು ಈಗಾಗಲೇ ಬೀಡುಬಿಟ್ಟಿದ್ದಾರೆ. ಭಟ್ಕಳ್ ಪಟ್ಟಣವನ್ನು ಈಗಾಗಲೇ ಲಾಕ್ ಡೌನ್ ಮಾಡಲಾಗಿದ್ದು, ಜೀವನಾವಶ್ಯಕ ಚಟುವಟಿಕೆಗಳನ್ನು ಹೊರತು ಪಡಿಸಿ ಉಳಿದೆಲ್ಲಾ ವ್ಯಾಪಾರ ವಹಿವಾಟುಗಳನ್ನು ನಿಷೇಧಿಸಲಾಗಿದೆ. ಅಗತ್ಯ ಬಿದ್ದಲ್ಲಿ ಮನೆ ಮನೆಗೆ ತೆರಳಿ ಅತ್ಯಗತ್ಯ ವಸ್ತುಗಳನ್ನು ಜಿಲ್ಲಾಡಳಿತದಿಂದಲೇ ಪೂರೈಸುವ ಕಾರ್ಯ ಮಾಡಲಾಗುವುದು ಎಂದರೂ. ಈ ಸಂದರ್ಭದಲ್ಲಿ ಜಿಲ್ಲಾ ಪೂಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಹಾಜರಿದ್ದರು.