ಬೆಂಗಳೂರು:ಕೊರೊನಾ ಹಾವಳಿ ತಣ್ಣಗಾಯಿತು ಎಂದು ನಿಟ್ಟುಸಿರು ಬಿಡುತ್ತಿರುವ ಸಂದರ್ಭದಲ್ಲೇ ಬೆಂಗಳೂರು ಹಾಗೂ ಗಡಿ ಜಿಲ್ಲೆಗಳಲ್ಲಿ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುವ ಮೂಲಕ ಜನ ಜೀವನ ಬೆಚ್ಚಿ ಬೀಳುವಂತೆ ಮಾಡಿದೆ. ರಾಜ್ಯದ ಗಡಿ ಜಿಲ್ಲೆಗಳು ಮತ್ತು ಬೆಂಗಳೂರಿನ ಬಹುತೇಕ ಕಡೆ ಕಂಟೈನ್ಮೆಂಟ್ ಜೋನ್ಗಳನ್ನು ಘೋಷಣೆ ಮಾಡಲಾಗಿದೆ.
ಈಗಾಗಲೇ ಕೊರೊನಾ ಪತ್ತೆಯಾಗಿದ್ದ ಬೆಂಗಳೂರಿನ ಮಂಜುಶ್ರೀ ನರ್ಸಿಂಗ್ ಹೋಂ, ಬೀಳೆಕಹಳ್ಳಿ, ಬೆಳ್ಳಂದೂರು ಖಾಸಗಿ ಅಪಾರ್ಟ್ಮೆಂಟ್ಗಳು ಕಂಟೈನ್ಮೆಂಟ್ ಜೋನ್ಗಳಾಗಿ ಘೋಷಣೆಯಾಗಿದ್ದವು. ಹೊಸದಾಗಿ ಈಗ ಸಂಭ್ರಮ ಹಾಗೂ ಅಗ್ರಗಾಮಿ ಕಾಲೇಜುಗಳಲ್ಲೂ ಸೋಂಕಿನ ಪ್ರಕರಣಗಳು ಪತ್ತೆಯಾಗಿರುವುದರಿಂದ ಆತಂಕ ಸೃಷ್ಟಿಯಾಗಿದೆ. ಈ ಐದು ಕ್ಲಸ್ಟರ್ಗಳಲ್ಲಿ ಸುಮಾರು 150ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿರುವುದು ಬಿಬಿಎಂಪಿಗೆ ಹೊಸ ತಲೆನೋವು ತಂದಿಟ್ಟಿದೆ.
ಜತೆಗೆ ನೆರೆಯ ರಾಜ್ಯಗಳ ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ರಾಯಚೂರು, ಕಲಬುರಗಿ, ಬೀದರ್, ಕೋಲಾರ, ಬೆಂಗಳೂರು, ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ಹೈದರಾಬಾದ್ನಿಂದ ಬಂದಿದ್ದ 7 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಹೀಗಾಗಿ ಅವರು ನೆಲೆಸಿದ್ದ ಅಪಾರ್ಟ್ಮೆಂಟನ್ನು ಕಂಟೈನ್ಮೆಂಟ್ ಜೋನ್ ಎಂದು ಘೋಷಿಸಲಾಗಿದೆ. ಇಲ್ಲಿನ 170 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ.
ಯಲಹಂಕದ ಸಂಭ್ರಮ ಕಾಲೇಜಿನ ಎಂಬಿಎ ಬ್ಲಾಕನ್ನು ಕಂಟೈನ್ಮೆಂಟ್ ಜೋನ್ ಎಂದು ಘೋಷಣೆ ಮಾಡಲಾಗಿದ್ದು, ನಿನ್ನೆ ಇಲ್ಲಿ 10 ಮಂದಿಗೆ ಸೋಂಕಿರುವುದು ಪತ್ತೆಯಾಗಿತ್ತು, ಇಂದು ಹೊಸದಾಗಿ 5 ಮಂದಿಗೆ ಸೋಂಕು ದೃಢಪಟ್ಟಿದ್ದು, ಒಟ್ಟು 15 ಮಂದಿಯನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ. ಸಂಭ್ರಮ ಕಾಲೇಜಿನಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರಿಗೆ ಮಾತ್ರ ಪ್ರವೇಶ ನೀಡಲಾಗಿದ್ದು, ಉಳಿದಂತೆ ಸಾರ್ವಜನಿಕ ಪ್ರವೇಶವನ್ನು ನಿರ್ಬಂಸಲಾಗಿದೆ