ತಿರುವನಂತಪುರ: ಕಳೆದ ವಾರ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ನಡೆಸಿದ ದಾಳಿಯನ್ನು ಖಂಡಿಸಿ ನಡೆದ ಪ್ರತಿಭಟನೆ ಸಂದರ್ಭ ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಗೆ ಉಂಟು ಮಾಡಿದ ಹಾನಿಯ ವೆಚ್ಚವನ್ನು ಭರಿಸಲು 5.20 ಕೋಟಿ ರೂ. ಠೇವಣಿ ಇರಿಸುವಂತೆ ಕೇರಳ ಉಚ್ಚ ನ್ಯಾಯಾಲಯ ಗುರುವಾರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾಕ್ಕೆ ನಿರ್ದೇಶಿಸಿದೆ.
ಭಯೋತ್ಪಾದನೆ ಚಟುವಟಿಕೆಯ ಆರೋಪದಲ್ಲಿ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ ಅಡಿ ಕೇಂದ್ರ ಸರಕಾರ ಪಾಪ್ಯುಲರ್ ಫ್ರಂಟ್ ಆಫ್ 0 7 ಇಂಡಿಯಾವನ್ನು 5 ವರ್ಷಗಳಿಗೆ ನಿಷೇಧ ವಿಧಿಸಿದ ಒಂದು ದಿನದ ಬಳಿಕ ಕೇರಳ ಹೈಕೋರ್ಟ್ನ ಈ ಆದೇಶ ಹೊರ ಬಿದ್ದಿದೆ. ಕಳೆದ ವಾರ ಕರೆ ನೀಡಲಾಗಿದ್ದ ಪ್ರತಿಭಟನೆ ಸಂದರ್ಭ ಪಾಪ್ಯುಲರ್ ಫ್ರೆಂಟ್ ಆಫ್ ಇಂಡಿಯಾವನ್ನು ಬೆಂಬಲಿಸಿದ ಪ್ರತಿಭಟನಕಾರರು ಕೋಝಿಕ್ಕೋಡ್, ವಯನಾಡ್, ತಿರುವನಂತಪುರ, ಆಲಪ್ಪುಳ, ಪಂದಳಂ, ಕೊಲ್ಲಂ, ತ್ರಿಶೂರು ಹಾಗೂ ಕಣ್ಣೂರಿನಲ್ಲಿ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ)ಯ ಬಸ್ಗಳ ಕಿಟಕಿಗಳಿಗೆ ಹಾನಿ ಉಂಟು ಮಾಡಿದ್ದರು. ಕೋಝಿಕ್ಕೋಡ್ನಲ್ಲಿ ಬಸ್ ಚಾಲಕನಿಗೆ ಗಾಯವಾಗಿತ್ತು.
ಹಿಂಸಾತ್ಮಕ ಪ್ರತಿಭಟನೆ ಹಿನ್ನೆಲೆಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ನಾಯಕರ ವಿರುದ್ಧ ಕೇರಳ ಉಚ್ಚ ನ್ಯಾಯಾಲಯ ಸೆಪ್ಟೆಂಬರ್ 23ರಂದು ನ್ಯಾಯಾಂಗ ನಿಂದನೆ ಕಲಾಪವನ್ನು ಆರಂಭಿಸಿದೆ. ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮಂಗಳವಾರ ಉಚ್ಚ ನ್ಯಾಯಾಲ ಯ ವನ್ನು ಸಂಪರ್ಕಿಸಿ ಪ್ರತಿಭಟನೆ ಸಂದರ್ಭ ಸಂಸ್ಥೆಗೆ ಉಂಟಾದ ಹಾನಿಗೆ ಪರಿಹಾರವಾಗಿ 5.06 ಕೋಟಿ ರೂಪಾಯಿ ನೀಡುವಂತೆ ಕೋರಿತ್ತು.
ಈ ಮನವಿಯನ್ನು ನ್ಯಾಯಮೂರ್ತಿಗಳಾದ ಎ.ಕೆ. ಜಯ ಶಂಕರನ್ ನಂಬಿಯಾರ್ ಹಾಗೂ ಮುಹಮ್ಮದ್ ನಿಯಾಸ್ ಸಿ.ಪಿ. ಅವರನ್ನು ಒಳಗೊಂಡ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಬೆಂಬಲಿಗರಿಂದ ಪ್ರಜೆಗಳಿಗೆ ಗಾಯಗಳಾಗಲು ಹಾಗೂ ಸಾರ್ವಜನಿಕ, ಖಾಸಗಿ ಸೊತ್ತುಗಳಿಗೆ ಹಾನಿ ಉಂಟಾಗಲು ಪಿಎಫ್ಐ ಹಾಗೂ ಅದರ ಪ್ರಧಾನ ಕಾರ್ಯದರ್ಶಿ ಸಂಪೂರ್ಣವಾಗಿ ಹಾಗೂ ನೇರ ಹೊಣೆ ಎಂದು ಅಭಿಪ್ರಾಯಿಸಿತು.