ಮಡಿಕೇರಿ: 'ಪಾಕಿಸ್ತಾನ್ ಝಿಂದಾಬಾದ್' ಘೋಷಣೆ ಪ್ರಕರಣ; ಓರ್ವ ಪತಕರ್ತನ ಸಹಿತ ಮೂವರ ವಿರುದ್ಧ ಎಫ್ಐಆರ್
ಮಡಿಕೇರಿ: 'ಅಂಬೇಡ್ಕರ್ ಝಿಂದಾಬಾದ್” ಎಂಬ ಘೋಷಣೆ ಯನ್ನು ತಿರುಚಿ 'ಪಾಕಿಸ್ತಾನ್ ಝಿಂದಾಬಾದ್' ಎಂದು ಎಡಿಟ್ ಮಾಡಿ ಕೋಮು ಉದ್ವಿಗ್ನ ವಾತಾವರಣ ಸೃಷ್ಟಿಸಲು ಯತ್ನಿಸಿದ ಆರೋಪದಲ್ಲಿ ಓರ್ವ ಪತ್ರಕರ್ತ ಮೂವರ ವಿರುದ್ಧ ಕೊಡಗಿನ ಶನಿವಾರಸಂತೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ದಿನಪತ್ರಿಕೆಯ ವರದಿ ಗಾರ ಹಾಗೂ ಸೋಮವಾರಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ, ಶನಿವಾರ ಸಂತೆ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಸಂಘಪರಿವಾರದ ಕಾರ್ಯಕರ್ತ ರಘು ಮತ್ತು ಗಿರೀಶ್ ಎಂಬವರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತರಾಗಿ ಐಪಿಸಿ 34, 153 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಂಘಪರಿವಾರ ಕಾರ್ಯಕರ್ತರು ಹಲ್ಲೆ ನಡೆಸಿದ ಘಟನೆಯೊಂದನ್ನು ವಿರೋಧಿಸಿ ಶನಿವಾರಸಂತೆಯ ಮುಸ್ಲಿಮ್ ಮಹಿಳೆಯರು ಪೊಲೀಸ್ ಠಾಣೆಯ ಎದುರು ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಮಹಿಳೆಯರ 'ಅಂಬೇಡ್ಕರ್ ಝಿಂದಾಬಾದ್' ఎంబ ಘೋಷಣೆಯನ್ನು 'ಪಾಕಿಸ್ತಾನ್ ಝಿಂದಾಬಾದ್' ಎಂದು ಆರೋಪಿಗಳು ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಕೋಮು ಗಲಭೆಗೆ ಪ್ರಚೋದನೆ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ತಿರುಚಿದ ವೀಡಿಯೊವನ್ನು ಮುಂದಿಟ್ಟು ಸಂಘಪರಿವಾರ ನ.15ರಂದು ಶನಿವಾರಸಂತೆ ಬಂದ್ ಮಾಡುವಂತೆ ಕರೆ ನೀಡಿತ್ತು. ಪ್ರತಿಭಟನೆಯ ವೇಳೆ ಮುಸ್ಲಿಮ್ ಮಹಿಳೆಯರು ಪಾಕಿಸ್ತಾನ ಪರ ಘೋಷಣೆ ಕೂಗಿಲ್ಲ ಎಂದೂ ಪೊಲೀಸರು ಎಫ್ಐಆರ್ನಲ್ಲಿ ಸ್ಪೆಷ್ಟಪಡಿಸಿದ್ದಾರೆ.