ಪೊಲೀಸ್ ವೃತ್ತಿ ಪೂರ್ವ ಜನ್ಮದ ಪುಣ್ಯ : ನಿವೃತ್ತ ಡಿವೈಎಸ್ಪಿ ಎ.ಬಿ. ಹರಪನಹಳ್ಳಿ
ಧಾರವಾಡ:ಬೇರೆ ಇಲಾಖೆಗಳ ಸೇವೆಗಳಿಗಿಂತ ಆಪತ್ಕಾಲದಲ್ಲಿ ಸಾರ್ವಜನಿಕರಿಗೆ ತಕ್ಷಣಕ್ಕೆ ನೆರವಿಗೆ ಬರುವ, ರಕ್ಷಣೆ ಒದಗಿಸಿ, ನ್ಯಾಯದ ಬಲ ನೀಡುವ ಪೊಲೀಸ್ ವೃತ್ತಿಯು ಪೂರ್ವಜನ್ಮದ ಪುಣ್ಯವಾಗಿದೆ ಎಂದು ನಿವೃತ್ತ ಪೊಲೀಸ್ ಉಪಅಧೀಕ್ಷಕರಾದ ಎ.ಬಿ. ಹರಪನಹಳ್ಳಿ ಹೇಳಿದರು.
ಅವರು ಇಂದು ಧಾರವಾಡ ಜಿಲ್ಲಾ ಪೊಲೀಸ್ ಇಲಾಖೆಯಿಂದ ಪೊಲೀಸ್ ಪರೇಡ್ ಮೈದಾನದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆ ನಿಮಿತ್ಯ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಪೊಲೀಸ್ ಇಲಾಖೆಯು ನಿರಂತರ ೨೪ ಗಂಟೆ ಸೇವೆ ಒದಗಿಸುತ್ತದೆ. ಇತರ ಇಲಾಖೆಗಳಿಗೆ ಹೋಲಿಸಿದರೆ ಪೊಲೀಸ್ ಇಲಾಖೆ ಕಾರ್ಯಶೈಲಿಯ ವಿಭಿನ್ನ ಮತ್ತು ವಿಶಿಷ್ಟವಾಗಿದೆ. ಇಲ್ಲಿ ಸಾರ್ವಜನಿಕ ಸೇವೆಗೆ ಪ್ರಥಮ ಆದ್ಯತೆ ಇರುತ್ತದೆ. ಇಲಾಖೆಯಲ್ಲಿ ಸೇವೆ ಸಲ್ಲಿಸುವವರು ಕೆಲವು ಸಂದರ್ಭದಲ್ಲಿ ತಮ್ಮ ವೈಯಕ್ತಿಕ ಜೀವನವನ್ನು ಮರೆತು ಕರ್ತವ್ಯ ನಿರ್ವಹಿಸಬೇಕಾಗುತ್ತದೆ ಎಂದು ಅವರು ಹೇಳಿದರು.
ಪೊಲೀಸ್ ಕರ್ತವ್ಯ ಸವಾಲಿನ ಕೆಲಸವಾಗಿದೆ. ಪೊಲೀಸ್ ಪೇದೆಗಳೇ ಇಲಾಖೆಯ ಬೆನ್ನೆಲುಬು. ಅವರು ಸದಾ ಸಾರ್ವಜನಿಕರ ಒಡನಾಟದಲ್ಲಿರುತ್ತಾರೆ. ಪೊಲೀಸ್ ಪೇದೆಗಳು ಇಲಾಖೆಯ ಜನಪ್ರಿಯತೆ ಹೆಚ್ಚಿಸುತ್ತಾರೆ ಮತ್ತು ಸಾರ್ವಜನಿಕವಾಗಿ ವರ್ಚಸ್ಸು ವೃದ್ಧಿಸುತ್ತಾರೆ. ಇಲಾಖೆಗೆ ಉತ್ತಮ ಹೆಸರು, ಶ್ರೆಯಸ್ಸು ತರಲು ಪ್ರಾಮಾಣಿಕ ಕರ್ತವ್ಯ ನಿಷ್ಠೆ ಮೆರೆಯಬೇಕು ಎಂದು ಎ.ಬಿ. ಹರಪನಹಳ್ಳಿ ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ ಜಿ. ಅವರು ಪೊಲೀಸ್ ಕಲ್ಯಾಣ ಚಟುವಟಿಕೆಗಳ ಕುರಿತು ಪ್ರಗತಿ ವರದಿ ಮಂಡಿಸಿದರು. ಧಾರವಾಡ ಗ್ರಾಮೀಣ ಡಿವೈಎಸ್ಪಿ ರಾಮನಗೌಡ ಹಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಪರೇಡ್ ಕಮಾಂಡರ್ ಆರ್.ಪಿ.ಐ ಕೆ.ಎ. ಗಾಂಜಿ ನೇತೃತ್ವದಲ್ಲಿ ಎ.ಆರ್.ಎಸ್.ಐ.ಎಸ್.ಎ. ಜಾಗೀರದಾರ, ಕಲಘಟಗಿ ಠಾಣೆ ಪಿಎಸ್ಐ ಆನಂದ ಡೋಣಿ, ಆರ್.ಎಸ್.ಐ ರಾಜು ಗುಡವಟ್ಟಿ, ವ್ಹಿ.ಎನ್. ರಾಣೆ, ಧಾರವಾಡ ಗ್ರಾಮೀಣ ಠಾಣೆ ಎಎಸ್ಐ ಶಿವಾನಂದ ಕಣವಿ, ಅಣ್ಣಿಗೇರಿ ಠಾಣೆ ಪಿಎಸ್ಐ ಮಹಾದೇವ ಯಲಿಗಾರ ನಾಯಕತ್ವದ ವಿವಿಧ ತಂಡಗಳು ಪಥಸಂಚಲನ ನಡೆಸಿ, ಗೌರವ ವಂದನೆ ಸಲ್ಲಿಸಿದರು.
ಧಾರವಾಡ ಜಿಲ್ಲಾ ಪೊಲೀಸ್ ವಾದ್ಯಮೇಳವು ಕಮಾಂಡರ್ ಐಪಿ ಡಿಸೋಜಾ ನೇತೃತ್ವದಲ್ಲಿ ಸುಶ್ರಾವ್ಯವಾಗಿ ಹಿನ್ನಲೆ ಸಂಗೀತವನ್ನು ನುಡಿಸಿತು. ಪೊಲೀಸ್ ಮಕ್ಕಳ ವಸತಿ ಶಾಲೆಯ ಶಿಕ್ಷಕ ಡಾ.ಎ.ಸಿ. ಅಲ್ಲಯ್ಯನಮಠ ಹಾಗೂ ಮಾಯಾರಾಮನ್ ಕಾರ್ಯಕ್ರಮ ನಿರೂಪಿಸಿದರು. ಡಿ.ಸಿ.ಆರ್.ಬಿ.ಯ ಪ್ರಭಾರ ಡಿವೈಎಸ್ಪಿ ಗುರು ಬಿ. ಮತ್ತೂರ ಅವರು ವಂದಿಸಿದರು.
ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು, ನಿವೃತ್ತ ಪೊಲೀಸ್ ಅಧಿಕಾರಿಗಳು, ಪೊಲೀಸ್ ಕುಟುಂಬ ವರ್ಗದವರು, ಸಾರ್ವಜನಿಕರು ಭಾಗವಹಿಸಿದ್ದರು.