ಪಿಎಸ್ಸೈ ನೇಮಕಾತಿ ಅಕ್ರಮ ಪ್ರಕರಣ; ಪ್ರಥಮ ರೆಂಕ ಅಭ್ಯರ್ಥಿ ಸಹಿತ ಎಂಟು ಮಂದಿ ಸೆರೆ
ಬೆಂಗಳೂರು: ಪಿಎಸ್ಸೈ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ಲಿಖಿತ ಪರೀಕ್ಷೆಯಲ್ಲಿ ಮೊದಲನೇ ರೇಂಕ್ ಬಂದಿದ್ದ ಅಭ್ಯರ್ಥಿ ಸೇರಿ ಎಂಟು ಮಂದಿಯನ್ನು ಸಿಐಡಿ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಹೈದರಾಬಾದ್ ಕರ್ನಾಟಕ ಕೋಟಾದಲ್ಲಿ ಪ್ರಥಮ ರೇಂಕ್ ಪಡೆದಿದ್ದ ಜೇವರ್ಗಿಯ ಭಗವಂತರಾಯ ಜೋಗೂರ, ನಾಲ್ಕನೇ ರೇಂಕ್ ಪಡೆದಿದ್ದ, ಪ್ರಸಕ್ತ ರಾಯಚೂರು ಜಿಲ್ಲೆ ದೇವದುರ್ಗದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿರುವ ಕಲ್ಲಪ್ಪ ಸಿದ್ದಪ್ಪ ಅಲ್ಲಾಪುರ, ರವಿರಾಜ, ಪೀರಪ್ಪ ಸಿದ್ದಾಳ, ಶ್ರೀಶೈಲ ಹಚ್ಚಡ, ಹೈ.ಕ. ಕೋಟಾದಲ್ಲಿ 22ನೇ ರೇಂಕ್ ಪಡೆದಿದ್ದ ಅಫಝಲಪುರ ತಾಲೂಕಿನ ಗೌರ(ಬಿ) ಗ್ರಾಮದ ಸಿದ್ದುಗೌಡಶರಣಪ್ಪ ಪಾಟೀಲ, ಸೋಮನಾಥ, ವಿಜಯಕುಮಾರ್ ಗುಡೂರ ಬಂಧಿತರು ಎಂದು ಪೊಲೀಸರು ಗುರುತಿಸಿದ್ದಾರೆ.
ಎಂಟೂ ಅಭ್ಯರ್ಥಿಗಳು ಕಳೆದ ಅ.3ರಂದು ನಡೆದ ಪರೀಕ್ಷೆಯಲ್ಲಿ ಪಾಸಾಗಿದ್ದರು. ಹಗರಣದ ಪ್ರಮುಖ ಕಿಂಗ್ ಪಿನ್ ಆರ್.ಡಿ. ಪಾಟೀಲ ಬ್ಲೂಟೂತ್ ಬಳಸಿ ಇವರನ್ನು ಪಾಸ್ ಮಾಡಿಸಿದ್ದ ಎಂದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಸಿಐಡಿ ಡಿವೈಎಸ್ಪಿಗಳಾದ ಶಂಕರಗೌಡ ಪಾಟೀಲ, ಪ್ರಕಾಶ ರಾಠೋಡ್, ವೀರೇಂದ್ರ ಕುಮಾರ್ ಹಾಗೂ ಡಿಟೆಕ್ಟಿವ್ ವಿಭಾಗದ ಪಿಎಸೈಗಳಾದ ಆನಂದ, ಯಶವಂತ ಹಾಗೂ ಶಿವಪ್ರಸಾದ್ ನೆಲ್ಲೂರ ಅವರನ್ನೊಳಗೊಂಡ ತಂಡವು ಅಭ್ಯರ್ಥಿಗಳನ್ನು ಬಂಧಿಸಿ ನಗರದ ಐವಾನ್ ಇ ಶಾಹಿ ಅತಿಥಿ ಗೃಹದಲ್ಲಿರುವ ಸಿಐಡಿ ಕ್ಯಾಂಪ್ ಕಚೇರಿಯಲ್ಲಿ ವಿಚಾರಣೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.