ಕೊರೋನಾ ಚಿಕಿತ್ಸೆಗಾಗಿ ತನ್ನ ಐದು ಆಸ್ಪತ್ರೆಗಳಲ್ಲಿ 1,000 ಹಾಸಿಗೆಗಳನ್ನು ಮೀಸಲಿಟ್ಟ ಜಮಾಅತೆ ಇಸ್ಲಾಮೀ ಹಿಂದ್ ;10 ಸಾವಿರ ಸ್ವಯಂ ಸೇವಕರು ಸಕ್ರಿಯ
ಕೇರಳ: ಕೇರಳದಲ್ಲಿ ಕೊರೋನಾವನ್ನು ಎದುರಿಸಲು ಮುಖ್ಯಮಂತ್ರಿ ಪಿಣರಾಯಿ ಸರಕಾರ ಪ್ರಶಂಸಾರ್ಹ ಕ್ರಮಗಳನ್ನು ಕೈಗೊಳ್ಳುತ್ತಿರುವುದರ ನಡುವೆಯೇ ವಿವಿಧ ಧಾರ್ಮಿಕ ಸಂಘಟನೆಗಳೂ ಸರಕಾರದೊಂದಿಗೆ ಕೈಜೋಡಿಸುತ್ತಿವೆ. ವಿಶೇಷವಾಗಿ ಜಮಾಅತೆ ಇಸ್ಲಾಮಿ ಹಿಂದ್ ಕೇರಳ ಘಟಕವು ದೊಡ್ಡ ಮಟ್ಟದಲ್ಲಿ ನೆರವಿಗೆ ಧಾವಿಸಿದ್ದು, ತನ್ನ ಅಧೀನದ ಟ್ರಸ್ಟ್'ನಿಂದ ನಡೆಸಲ್ಪಡುತ್ತಿರುವ ಆಸ್ಪತ್ರೆಯನ್ನೇ ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ ಸಜ್ಜುಗೊಳಿಸಿದೆ ಮತ್ತು ಇದು ಸರಕಾರಕ್ಕೆ ಆನೆಬಲ ಒದಗಿಸಿದಂತಾಗಿದೆ.
ಕೋಝಿಕೋಡ್ ನಲ್ಲಿರುವ ಶಾಂತಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 300 ಹಾಸಿಗೆಗಳ ಸೌಲಭ್ಯವಿದ್ದು, ಅದನ್ನು ಚಿಕಿತ್ಸೆಗೆ ಪೂರಕವಾಗಿ ಬಳಸಿಕೊಳ್ಳಲು ಸರಕಾರಕ್ಕೆ ಅನುವು ಮಾಡಿ ಕೊಡಲಾಗುತ್ತಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಕೇರಳ ಘಟಕದ ಮಾಧ್ಯಮ ತಂಡದ ಸದಸ್ಯ ಟಿ.ಶಾಕಿರ್ ಹೇಳಿದ್ದಾರೆ.
ಕೇರಳದಾದ್ಯಂತ ಇರುವ ಐದು ಆಸ್ಪತ್ರೆಗಳಲ್ಲಿ 1,000 ಹಾಸಿಗೆಗಳನ್ನು ಈ ಚಿಕಿತ್ಸೆಗಾಗಿ ಜಮಾಅತ್ ಒದಗಿಸಲಿದ್ದು, ಐಸೋಲೇಷನ್ ಮತ್ತು ಕ್ವಾರಂಟೈನ್'ಗಾಗಿ ಸರಕಾರವು ಜಮಾಅತ್ ನ 90 ಶಾಲಾ ಕಟ್ಟಡಗಳು, 25 ಕಾಲೇಜು ಕಟ್ಟಡಗಳು ಮತ್ತು 400 ಮದರಸಾಗಳನ್ನು ಬಳಸಿಕೊಳ್ಳಬಹುದು” ಎಂದು ಅವರು ಹೇಳಿದ್ದಾರೆ. ಹಾಗೆಯೇ, ಕೊರೋನಾ ವಿರೋಧಿ ಹೋರಾಟದಲ್ಲಿ ಜಮಾಅತ್ ನ 10 ಸಾವಿರ ಸ್ವಯಂ ಸೇವಕರು ಸಕ್ರಿಯರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.