ಕಾರವಾರ : ಸಾಕ್ಷರತೆ ಎಂಬುವುದು ಒಬ್ಬರಿಗೆ ಮಾತ್ರ ಸೀಮಿತವಲ್ಲ, ಅದು ಎಲ್ಲರ ಸ್ವತ್ತು ಎಂದು ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಚೈತ್ರಾ ಕೋಠಾರಕರ ಅವರು ಹೇಳಿದರು.
ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಮಂಗಳವಾರ ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಹಮ್ಮಿಕೊಳ್ಳಲಾದ ಅಂತರಾಷ್ಟ್ರೀಯ ಸಾಕ್ಷರತಾ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಓದುವುದು, ಬರೆಯುವುದು ಮಾತ್ರ ಸಾಕ್ಷರತವಲ್ಲಾ, ವಿಜ್ಞಾನ, ತಂತ್ರಜ್ಞಾನ ಹಾಗೂ ಇಂಟರನೆಟ್ ಬಳಕೆಯನ್ನು ಸದ್ಬಳಿಕೆ ಮಾಡುವುದು ಕೂಡ ಸಾಕ್ಷರತೆ ಆಗಿದೆ ಎಂದರು.
ಜಿಲ್ಲೆಯಲ್ಲಿ ಪ್ರಸ್ತುತ ಶೇ.85 ರಷ್ಟು ಸಾಕ್ಷರತಾ ಪ್ರಮಾಣವಿದ್ದು, ಮುಂದಿನ ದಿನಮಾನದಲ್ಲಿ ಅದನ್ನು ಶೇ.100ಕ್ಕೆ ಸಾಕ್ಷರತೆ ಪ್ರಮಾಣ ಹೆಚ್ಚಿಸುವ ವಿಶ್ವಾಸ ವ್ಯಕ್ತಪಡಿಸಿದರು. ಈ ಸಾಕ್ಷರತಾ ಪ್ರಮಾಣ ಹೆಚ್ಚಿಸುವಲ್ಲಿ ಎಲ್ಲ ವರ್ಗದ ಅಧಿಕಾರಿಗಳು ಇದರಲ್ಲಿ ಕೈ ಜೋಡಿಸಿದರೆ ಮಾತ್ರ ಸಾಕ್ಷರತೆ ಹೆಚ್ಚಾಗುವುದು ಎಂದು ಅವರು ಅಭಿಪ್ರಾಯ ಪಟ್ಟರು.
ಇಡೀ ಜಿಲ್ಲೆಯಲ್ಲಿ ಡಿಜಿಟಲ್ ತರಗತಿಗಳ ಮಾದರಿಯನ್ನಾಗಿ ಮಾಡುವ ಉದ್ದೇಶವಿತ್ತು, ಆದರೆ ಮಹಾಮಾರಿ ಕೊರೋನಾ ಕಾಯಿಲೆಯಿಂದಾಗಿ ಇದು ಸಾಧ್ಯವಾಗಲಿಲ್ಲ. ಮುಂದಿನ ದಿನಗಳಲ್ಲಿ ಡಿಜಿಟಲ್ ತರಗತಿಗಳಿಗೆ ಹೆಚ್ಚು ಒತ್ತು ಕೊಟ್ಟು ಸಾಕ್ಷರತೆ ಪ್ರಮಾಣ ಹೆಚ್ಚಿಸಲು ಪ್ರಯತ್ನಿಸಲಾಗುವುದು ಎಂದರು.
ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ನಾಗೇಶ ರಾಯ್ಕರ ಮಾತನಾಡಿ, 1966ರಲ್ಲಿ ಮೊದಲ ಬಾರಿಗೆ ಯುನೆಸ್ಕೋದಲ್ಲಿ ಈ ಸಾಕ್ಷರತೆ ದಿನಾಚರಣೆಯನ್ನು ಆಚರಿಸಲಾಯಿತು. ಬಳಿಕ 1967ರ ಬಳಿಕ ಜಗತ್ತಿನಾದ್ಯಂತ ಆಚರಣೆಗೆ ಬಂದಿದ್ದು, 1988 ರಿಂದ ಭಾರತದಲ್ಲಿ ಸೆಪ್ಟಂಬರ 8ರಂದು ವಿಶ್ವ ಸಾಕ್ಷರತಾ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.
ಪ್ರಸ್ತುತ ದಿನಮಾನದಲ್ಲಿ ಪುರುಷ ಮತ್ತು ಮಹಿಳೆಯರಲ್ಲಿ ಶೇ.13ರಷ್ಟು ಸಾಕ್ಷರತಾ ಪ್ರಮಾಣದಲ್ಲಿ ವ್ಯತ್ಯಾಸವಿದ್ದು, ಅದನ್ನು ಸರಿದೂಗಿಸಬೇಕಿದೆ ಹಾಗೂ ಸಮಾಜದಲ್ಲಿ ಸಾಕ್ಷರತೆಗಾಗಿ ಹಗಲಿರುಳು ಕಾರ್ಯನಿರ್ವಹಿಸಬೇಕಾಗಿದೆ. ಸರಕಾರವು ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿ ಮಾಡಲು ವಿವಿಧ ಕಾರ್ಯಕ್ರಮಗಳಡಿಯಲ್ಲಿ ಸಾಕ್ಷರತೆಗಾಗಿ ಹಲವು ಯೋಜನೆಗಳನ್ನು ರೂಪಿಸಿದೆ ಎಂದು ಅವರು ತಿಳಿಸಿದರು.
ಜಿಲ್ಲಾ ಪಂಚಾಯತನ ಮುಖ್ಯ ಲೆಕ್ಕಾಧಿಕಾರಿ ಡಾ.ಸಂಗೀತ ಭಟ್ ಮಾತನಾಡಿ, ವಿದ್ಯೆಯೆಂಬುದು ಬರೆದಿಟ್ಟಿದ್ದನ್ನೆಲ್ಲಾ ಓದುವುದಲ್ಲ, ಅದನ್ನು ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಂಡಾಗಲೇ ನಿಜವಾದ ಸಾಕ್ಷರತೆ ಆಗುತ್ತದೆ ಎಂದು ಹೇಳಿದರು.
ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿ ಮಾಡಬೇಕಾದರೆ ಪುರುಷ ಮತ್ತು ಮಹಿಳೆಯರಲ್ಲಿರುವ ಸಾಕ್ಷರತೆ ಪ್ರಮಾಣದ ವ್ಯತ್ಯಾಸವನ್ನು ಸರಿದೂಗಿಸಬೇಕಿಸಿದ್ದು, “ಒಬ್ಬ ಪುರುಷನಿಗೆ ವಿದ್ಯೆ ಕಲಿಸಿದರೆ ಅವನು ಮಾತ್ರ ಕಲಿಯುತ್ತಾನೆ, ಆದರೆ ಅದೇ ವಿದ್ಯೆಯನ್ನು ಮಹಿಳೆಗೆ ಕಲಿಸಿದರೆ ಅವಳು ಎಲ್ಲರಿಗೂ ಅಕ್ಷರದಾನ ಮಾಡಿಸುತ್ತಾಳೆ ಎಂಬ ತತ್ವಜ್ಞಾನಿಯೊಬ್ಬರ ಮಾತುಗಳನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಸಾಕ್ಷರತಾ ಪ್ರಮಾಣ ವಚನ ಸ್ವೀಕಾರ ಮಾಡುವುದರ ಮೂಲಕ ಸಾಂಕೇತಿಕವಾಗಿ ನವಸಾಕ್ಷರರಿಗೆ ಪುಸ್ತಕ ವಿತರಿಸಲಾಯಿತು. ಶಿಕ್ಷಕಿಯರು ನಾಡಗೀತೆ ಹಾಗೂ ರೈತಗೀತೆ ಹೇಳಿದರು, ಮಂಗಲಲಕ್ಷ್ಮಿ ಪಾಟೀಲ ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿದರು, ಶೈಲಾ ಸಾಳುಂಕೆ ನಿರೂಪಸಿದರು, ದಿಲೀಪ್ ನಾಯ್ಕ ವಂದಿಸಿದರು. ಜಿಲ್ಲಾ ಪಂಚಾಯತ್ ಸಿಬ್ಬಂದಿಗಳು ಸೇರಿದಂತೆ ಶಿಕ್ಷಕ ಮತ್ತು ಶಿಕ್ಷಕಿಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.