ಇಂಫಾಲ: ಮೂರು ತಿಂಗಳಿನಿಂದಲೂ ನಡೆಯುತ್ತಿರುವ ಜನಾಂಗೀಯ ಸಂಘರ್ಷವನ್ನು ಶೀಘ್ರ ಬಗೆಹರಿಸದಿದ್ದರೆ ಅದು ದೇಶದ ಭದ್ರತಾ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ರಾಜ್ಯಕ್ಕೆ ಎರಡು ದಿನಗಳ ಭೇಟಿ ನೀಡಿರುವ ಪ್ರತಿಪಕ್ಷ ಮೈತ್ರಿಕೂಟ ಇಂಡಿಯಾದ ನಿಯೋಗವು ಕಳವಳ ವ್ಯಕ್ತಪಡಿಸಿದೆ.
ರಾಜ್ಯಪಾಲರ ಭೇಟಿಯ ಬಳಿಕ ರಾಜಭವನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ ಅಧೀರ ರಂಜನ್ ಚೌಧುರಿ ಅವರು, 'ರಾಜ್ಯಪಾಲರು ನಮ್ಮ ಅಭಿಪ್ರಾಯಗಳನ್ನು ಆಲಿಸಿದರು ಮತ್ತು ಸಹಮತ ವ್ಯಕ್ತಪಡಿಸಿದರು. ಹಿಂಸಾಚಾರದ ಕುರಿತು ನೋವು ವ್ಯಕ್ತಪಡಿಸಿದ ಅವರು ಜನರ ಸಂಕಷ್ಟಗಳನ್ನು ವಿವರಿಸಿದರು. ಸಮುದಾಯಗಳ ನಡುವಿನ ಅಪನಂಬಿಕೆಯನ್ನು ಹೋಗಲಾಡಿಸಲು ಮೈತೈ ಮತ್ತು ಕುಕಿ ಜನರೊಂದಿಗೆ ಮಾತನಾಡಲು ಸರ್ವಪಕ್ಷ ನಿಯೋಗವೊಂದು ಮಣಿಪುರಕ್ಕೆ ಭೇಟಿ ನೀಡುವುದು ಅಗತ್ಯವಾಗಿದೆ ಎಂದು ಅವರು ಸಲಹೆ ನೀಡಿದರು. ನಾವು ಅದನ್ನು ಒಪ್ಪಿಕೊಳ್ಳುತ್ತೇವೆ'ಎಂದು ತಿಳಿಸಿದರು.
ಸಂಸದರು ಮಣಿಪುರ ಕುರಿತು ತಮ್ಮ ಅವಲೋಕನಗಳನ್ನು ಸಂಸತ್ತಿನಲ್ಲಿ ಮಂಡಿಸಲಿದ್ದಾರೆ ಮತ್ತು ಅವಕಾಶ ಸಿಕ್ಕಿದಾಗ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲು ಪ್ರಯತ್ನಿಸಲಿದ್ದಾರೆ ಎಂದರು.
“ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಣಿಪುರದಲ್ಲಿ ಎಸಗಿರುವ ಲೋಪಗಳ ಬಗ್ಗೆ ನಾವು ಸಂಸತ್ತಿನಲ್ಲಿ ಮಾತನಾಡುತ್ತೇವೆ ಮತ್ತು ವಿಷಯದ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಸುವಂತೆ ಕೇಂದ್ರವನ್ನು ಕೋರಿಕೊಳ್ಳುತ್ತೇವೆ' ಎಂದರು.
ಮಣಿಪುರದಲ್ಲಿ ಪರಿಸ್ಥಿತಿ ದಿನೇದಿನೇ ಹದಗೆಡುತ್ತಿದೆ ಎಂದು ಚೌಧುರಿ ಪ್ರತಿಪಾದಿಸಿದರು.ಎರಡು ದಿನಗಳ ಭೇಟಿಯಲ್ಲಿ ತಮ್ಮ ಅನುಭವವನ್ನು ಬಿಚ್ಚಿಟ್ಟ ಅವರು, 'ಕಣಿವೆಯಲ್ಲಿನ ಜನರು (ಮೈತೈಗಳು) ಕುಕಿಗಳು ವಾಸವಿರುವ ಬೆಟ್ಟಗಳ ಕಡೆಗೆ ಮತ್ತು ಕುಕಿಗಳು ಕಣಿವೆಯತ್ತ ತೆರಳಲು ಸಾಧ್ಯವಾಗದ ಸ್ಥಿತಿ ಸೃಷ್ಟಿಯಾಗಿದೆ. ಪಡಿತರ, ಮೇವು, ಹಾಲು,ಶಿಶು ಆಹಾರ ಮತ್ತು ಎಲ್ಲ ಇತರ ಅಗತ್ಯ ವಸ್ತುಗಳ ತೀವ್ರ ಕೊರತೆಯಿದೆ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಡಕುಂಟಾಗಿದೆ. ಇವೆಲ್ಲವನ್ನೂ ನಾವು ರಾಜ್ಯಪಾಲರಿಗೆ ವಿವರಿಸಿದ್ದು,ಈ ಸಮಸ್ಯೆಗಳನ್ನು ಸಾಮೂಹಿಕವಾಗಿ ಪರಿಹರಿಸುವ ಅಗತ್ಯವಿದೆ ಎಂದು ಅವರು ಹೇಳಿದರು' ಎಂದು ತಿಳಿಸಿದರು. ನಿಯೋಗವು ರವಿವಾರ ಮಧ್ಯಾಹ್ನ ದಿಲ್ಲಿಗೆ ಮರಳಿತು.