ಅರುಣಾಚಲ: ಎಲ್ ಎಸಿ ಬಳಿ ಭಾರತ-ಚೀನಾ ಯೋಧರ ಘರ್ಷಣೆ; ಉಭಯ ಸೇನೆಗಳ ಯೋಧರಿಗೆ ಗಾಯ, ಎಲ್ ಎಸಿ ದಾಟಲು ಚೀನಿ ಪಡೆಗಳ ಯತ್ನ ವಿಫಲಗೊಳಿಸಿದ ಭಾರತೀಯ ಯೋಧರು
ಹೊಸದಿಲ್ಲಿ: ಅರುಣಾಚಲ ಪ್ರದೇಶದ ತವಾಂಗ್ ಸಮೀಪದ ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್ಎಸಿ)ಯಲ್ಲಿ ಭಾರತೀಯ ಸೇನಾ ಪಡೆ ಹಾಗೂ ಚೀನಾ ಸೇನಾ ಪಡೆಗಳ ನಡುವೆ ಸಂಕ್ಷಿಪ್ತ ಅವಧಿಯ ಘರ್ಷಣೆ ನಡೆದಿದೆ ಎಂದು ಸರಕಾರಿ ಮೂಲಗಳು ಸೋಮವಾರ ತಿಳಿಸಿವೆ.
ಡಿಸೆಂಬರ್ 9ರಂದು ನಡೆದ ಈ ಘರ್ಷಣೆಯಲ್ಲಿ ಉಭಯ ಸೇನಾ ಪಡೆಗಳ ಕೆಲವು ಯೋಧರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಎರಡೂ ಸೇನಾ ಪಡೆಗಳು ಈ ಪ್ರದೇಶದಿಂದ ಕೂಡಲೇ ಹಿಂದೆ ಸರಿದಿವೆ ಎಂದು ಮೂಲಗಳು ತಿಳಿಸಿವೆ.
ಅರುಣಾಚಲ ಪ್ರದೇಶದ ತವಾಂಗ್ ವಲಯದಲ್ಲಿ ಈ ಘರ್ಷಣೆ ನಡೆದಿದೆ. ಚೀನಾ ಸೇನಾ ಪಡೆ ವಾಸ್ತವ ಗಡಿ ನಿಯಂತ್ರಣ ರೇಖೆಯನ್ನು ದಾಟಿತ್ತು. ಇದನ್ನು ಭಾರತೀಯ ಸೇನಾ ಪಡೆಯ ಯೋಧರು ದೃಢ ನಿಶ್ಚಯದೊಂದಿಗೆ ಪ್ರತಿರೋಧಿಸಿದರು ಎಂದು ಮೂಲಗಳು ತಿಳಿಸಿವೆ. ಪೂರ್ವ ಲಡಾಖ್ನಲ್ಲಿ ಘರ್ಷಣೆ ನಡೆದ ಬಳಿಕ ಭಾರತೀಯ ಸೇನಾ ಪಡೆ ಹಾಗೂ ಚೀನಾ ಸೇನಾ ಪಡೆಗಳ ನಡುವೆ ಇದೇ ಮೊದಲ ಬಾರಿಗೆ ಘರ್ಷಣೆ ನಡೆಯುತ್ತಿದೆ.
ಗಲ್ವಾನ್ ಕಣಿವೆಯಲ್ಲಿ 2020 ಜೂನ್ನಲ್ಲಿ ಉಭಯ ಪಡೆಗಳ ನಡುವೆ ಘರ್ಷಣೆ ನಡೆದಿತ್ತು. ಈ ಘರ್ಷಣೆಯಲ್ಲಿ 20 ಭಾರತೀಯ ಯೋಧರು ದೇಶಕ್ಕಾಗಿ ಪ್ರಾಣ ಅರ್ಪಿಸಿದ್ದರು. ಚೀನಾದ 40 ಯೋಧರು ಮೃತಪಟ್ಟಿದ್ದರು ಅಥವಾ ಗಾಯಗೊಂಡಿದ್ದರು. ಈ ಘಟನೆ ಪ್ಯಾಂಗಾಂಗ್ ಸರೋವರದ ದಕ್ಷಿಣ ದಂಡೆಯಲ್ಲಿ ನಡೆದ ಮುಖಾಮುಖಿ ಸೇರಿದಂತೆ ಉಭಯ ಸೇನಾ ಪಡೆಗಳ ನಡುವಿನ ಸರಣಿ ಮುಖಾಮುಖಿಗೆ ಕಾರಣವಾಗಿತ್ತು.
ಉಭಯ ಸೇನಾ ಪಡೆಗಳ ಕಮಾಂಡರ್ ಗಳ ನಡುವೆ ಹಲವು ಸಭೆಗಳು ನಡೆದ ಬಳಿಕ ಭಾರತದ ಸೇನಾ ಪಡೆ ಹಾಗೂ ಚೀನಾ ಸೇನಾ ಪಡೆಗಳು ಲಡಾಖ್ನ ಗೋಗ್ರಾ-ಹಾಟ್ ಸ್ಟಿಂಗ್ಸ್ ಸೇರಿದಂತೆ ಪ್ರಮುಖ ಸ್ಥಳಗಳಿಂದ ಪಡೆಯನ್ನು ಹಿಂದೆಗೆದುಕೊಂಡಿದ್ದವು.
ಗಡಿ ಕುರಿತ ವಿಭಿನ್ನ ಗ್ರಹಿಕೆಯ ಕಾರಣದಿಂದ 2006ರಿಂದ ಇಂತಹ ಮುಖಾಮುಖಿ ನಡೆಯುತ್ತಿವೆ ಎಂದು ಸರಕಾರದ ಮೂಲಗಳು ತಿಳಿಸಿವೆ.
ಅರುಣಾಚಲ ಪ್ರದೇಶದ ತವಾಂಗ್ ವಲಯದ ವಾಸ್ತವ ಗಡಿ ನಿಯಂತ್ರಣ ರೇಖೆಯ ನಿರ್ದಿಷ್ಟ ಪ್ರದೇಶದ ಕುರಿತು ವಿಭಿನ್ನ ಗ್ರಹಿಕೆಗಳಿವೆ. ಎರಡೂ ಕಡೆ ಗಸ್ತು ನಡೆಸುತ್ತಿರುವ ಸೇನಾ ಪಡೆಗಳು ಇದು ತಮ್ಮ ಪ್ರದೇಶವೆಂದು ಪ್ರತಿಪಾದಿಸುತ್ತಿವೆ. ಇದು 2006ರಿಂದ ಮುಂದುವರಿದುಕೊಂಡು ಬಂದಿದೆ. 2022 ಡಿಸೆಂಬರ್ 9ರಂದು ಚೀನಾ ಸೇನಾ ಪಡೆ ತವಾಂಗ್ ವಲಯದಲ್ಲಿರುವ ವಾಸ್ತವ ಗಡಿ ನಿಯಂತ್ರಣ ರೇಖೆಯನ್ನು ದಾಟಿತ್ತು. ಇದನ್ನು ಭಾರತೀಯ ಸೇನಾ ಪಡೆಯ ಯೋಧರು ದೃಢ ನಿಶ್ಚಯದೊಂದಿಗೆ ಪ್ರತಿರೋಧಿಸಿದರು ಎಂದು ಮೂಲಗಳು ತಿಳಿಸಿವೆ. ಈ ಘಟನೆ ಹಿನ್ನೆಲೆಯಲ್ಲಿ ಶಾಂತಿ ಹಾಗೂ ಸೌಹಾರ್ದದ ರಚನಾತ್ಮಕ ಕಾರ್ಯ ವಿಧಾನವನ್ನು ಅನುಸರಿಸಲು ಈ ಪ್ರದೇಶದ ಭಾರತೀಯ ಕಮಾಂಡರ್ ಅವರು ಚೀನಾದ ಕಮಾಂಡರ್ ಅವರೊಂದಿಗೆ ಧ್ವಜಸಭೆ ನಡೆಸಿದ್ದಾರೆ ಎಂದು ಸರಕಾರದ ಮೂಲಗಳು ತಿಳಿಸಿವೆ.