ಭಟ್ಕಳ:ಮಹಿಳೆಯರು ಸಶಕ್ತ ಸ್ವಾಭಿಮಾನಿಗಳಾಗಿ ಬದಲಾಗಲು ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ತುಂಬಾ ಸಹಕಾರಿ ಎಂದು ತಾಲೂಕಾ ಪಂಚಾಯತ್ ಕಾರ್ಯನಿರ್ವಹಣಾದಿಕಾರಿ ಪ್ರಭಾಕರ ಚಿಕ್ಕನಮನೆ ಹೇಳಿದರು.
ಅವರು ತಾಲೂಕಾ ಪಂಚಾಯತ್ ಸಭಾ ಭವನದಲ್ಲಿ ಎರ್ಪಡಿಸಲಾಗಿದ್ದ
"ಮಹಿಳಾ ಕಾಯಕೋತ್ಸವ" ಸಮೀಕ್ಷೆ ಕುರಿತಾದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮಹಿಳಾ ಸಬಲೀಕರಣದ ದೃಷ್ಟಿಯಿಂದ ಉದ್ಯೋಗ ಖಾತರಿ ಯೋಜನೆಯಲ್ಲಿ ಮಹಿಳೆಯರು ಹೆಚ್ಚು ಪಾಲ್ಗತೊಳ್ಳಬೇಕು. ಆದರೆ ಗ್ರಾಮೀಣ ಪ್ರದೇಶದಲ್ಲಿ ಅತೀ ಹೆಚ್ಚು ಜನಕ್ಕೆ ಉದ್ಯೋಗ ಕಲ್ಪಿಸುವ ಈ ಯೋಜನೆಗೆ ಕೇವಲ ಶೇ.49ರಷ್ಟು ಮಹಿಳೆಯರು ಮಾತ್ರ ಪಾಲ್ಗೊಳ್ಳುತ್ತಿದ್ದಾರೆ. ಇದು ಯೋಜನೆಯ ಆಶಯಗಳಿಗೆ ತೊಡಕಾಗಿದೆ ಎಂದ ಅವರು ವಲಸೆ ತಡೆಗಟ್ಟುವ ಮತ್ತು ಸ್ಥಳೀಯವಾಗಿ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿ ಉದ್ಯೋಗ ನೀಡುವ ಈ ಯೋಜನೆಯಲ್ಲಿ ಆಂದೋಲನದ ರೀತಿಯಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸುವ ಮಹಿಳಾ ಕಾಯಕೋತ್ಸವ ಆಚರಿಸಲ್ಪಡುತ್ತಿದೆ ಎಂದರು.
ಜನವರಿ 16ರಿಂದ ಪ್ರತಿ ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಲಾಗುತ್ತಿದ್ದು ಸಂಪರ್ಕಿಸುವ ಟಾಸ್ಕ್ ಫೋರ್ಸ ಸಮಿತಿಯವರಿಗೆ ಸೂಕ್ತ ಸಹಕಾರ ನೀಡುವಂತೆಯೂ ಕರೆ ನೀಡಿದರು.
ವೇದಿಕೆಯಲ್ಲಿ ನರೇಗಾ ನಿರ್ದೇಶಕ ಎಂ.ಎ. ಅಗಸರ ಉಪಸ್ಥಿತರಿದ್ದು ಸೂಕ್ತ ಮಾಹಿತಿಗಳನ್ನು ನೀಡಿದರು. ನರೇಗಾ ಸಂಯೊಜಕ ಪದ್ಮಯ್ಯ ದೇವಾಡಿಗ ಕಾರ್ಯಾಗಾರವನ್ನು ನಡೆಸಿಕೊಟ್ಟರು. ತಾಲೂಕಾ ಪಂಚಾಯತ್ ವ್ಯವಸ್ಥಾಪಕ ಸುಧೀರ ಗಾಂವಕರ್ ಸ್ವಾಗತಿಸಿ, ವಂದಿಸಿದರು.