ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್ ಡೌನ್ ಇಡೀ ದಿನ ಸಡಿಲಿಕೆ ಮಾಡಬೇಕು. ತಕ್ಷಣ ಬಸ್ ಸಂಚಾರ ಆರಂಭಿಸಬೇಕು. ಎಲ್ಲರಿಗೆ ಲಸಿಕೆ ನೀಡಬೇಕು. ಲಸಿಕೆ ಹೆಸರಿನಲ್ಲಿ ವ್ಯಾಪಾರ ನಡೆಸಬಾರದು. ಕೋರೋನಾ ಸೋಂಕಿ ನಿಂದ ಮೃತಪಟ್ಟ ಕುಟುಂಬಕ್ಕೆ ಕನಿಷ್ಠ 5ಲಕ್ಷ ಪರಿಹಾರ ನೀಡಬೇಕು ಎಂದು ಮಾಜಿ ಶಾಸಕ ಐವನ್ ಡಿಸೋಜ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ .
ಜಿಲ್ಲೆಯಲ್ಲಿ ಲಾಕ್ಡೌನ್ ನಿಯಮ ಸಡಿಲಿಕೆ ಬಗ್ಗೆ ಸಮರ್ಪಕವಾದ ತೀರ್ಮಾನ ಕೈಗೊಳ್ಳುವ ಜಿಲ್ಲಾಡಳಿತ ವಿಫಲವಾಗಿರುವುದರಿಂದ ಜಿಲ್ಲೆಯ ಜನತೆ ತೊಂದರೆ ಅನುಭವಿಸುತ್ತಿದ್ದಾರೆ. ಜಿಲ್ಲೆಯ ಎಲ್ಲಾ ಅಂಗಡಿ ಮಳಿಗೆಗಳನ್ನು ತೆರೆದು ವ್ಯಾಪಾರಕ್ಕೆ ಅವಕಾಶ ಕಲ್ಪಿಸಬೇಕು . ಮದುವೆ ಅಂತ್ಯಸಂಸ್ಕಾರಕ್ಕೆ ನಿಗದಿಪಡಿಸಿದ ಮಾನ ದಂಡವನ್ನು ಸಡಿಲಿಸಬೇಕು. ಮದುವೆಗೆ ಕನಿಷ್ಠ ನೂರು ಜನರಿಗೆ ಅವಕಾಶ ನೀಡಬೇಕು. ಮನೆಮನೆಗೆ ಲಸಿಕೆಯನ್ನು ಉಚಿತವಾಗಿ ನೀಡಬೇಕು. ಈ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸುವುದಾಗಿ ಐವನ್ ಡಿಸೋಜ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಶಶಿಧರ ಹೆಗ್ಡೆ ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್ ಕಾಂಗ್ರೆಸ್ ಮುಖಂಡರಾದ ಪಿ ಭಾಸ್ಕರ್ ರಾವ್ ಯೂಸುಫ್ ಉಚ್ಚಿಲ್ ಮೊದಲಾದವರು ಉಪಸ್ಥಿತರಿದ್ದರು.