ಹೊಸದಿಲ್ಲಿ: ಬಿಬಿಸಿ ಇಂಡಿಯಾ ವಿರುದ್ಧ ಆದಾಯ ತೆರಿಗೆ (ಐಟಿ) ಇಲಾಖೆಯ 'ಸರ್ವೇ' ಕಾರ್ಯಾಚರಣೆ ಎರಡನೇ ದಿನವಾದ ಬುಧವಾರವೂ ಮುಂದುವರಿದಿದೆ. ಇಲಾಖೆಯ ಅಧಿಕಾರಿಗಳು ವಿದ್ಯುನ್ಮಾನ ಮತ್ತು ಕಾಗದ ರೂಪಗಳಲ್ಲಿರುವ ಸಂಸ್ಥೆಯ ಹಣಕಾಸು ಮಾಹಿತಿಗಳ ಪ್ರತಿಗಳನ್ನು ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಬಿಬಿಸಿ ಇಂಡಿಯಾ ವಿರುದ್ಧ ತೆರಿಗೆ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆಯ ಭಾಗವಾಗಿ ಆದಾಯ ತೆರಿಗೆ ಇಲಾಖೆಯು ಮಂಗಳವಾರ ಬಿಬಿಸಿಯ ದಿಲ್ಲಿ ಮತ್ತು ಮುಂಬೈ ಕಚೇರಿಗಳು ಮತ್ತು ಸಂಬಂಧಿತ ಕನಿಷ್ಠ ಎರಡು ಸ್ಥಳಗಳಲ್ಲಿ ಮಂಗಳವಾರ ಶೋಧ ಕಾರ್ಯಾಚರಣೆಯನ್ನು ಆರಂಭಿಸಿತ್ತು.
ಮಂಗಳವಾರ ಪೂರ್ವಾಹ್ನ 11:30ರ ಸುಮಾರಿಗೆ ಬಿಬಿಸಿ ಕಚೇರಿಯನ್ನು ತಲುಪಿದ್ದ ಐಟಿ ಅಧಿಕಾರಿಗಳು ಬುಧವಾರವೂ ಅಲ್ಲಿಯೇ ಇದ್ದರು ಎಂದು ಬೆಳವಣಿಗೆಗಳನ್ನು ಬಲ್ಲ ಮೂಲಗಳು ತಿಳಿಸಿವೆ.
ಬಿಬಿಸಿಯ ಹಣಕಾಸು ಮತ್ತು ಇತರ ವಿಭಾಗಗಳ ಸಿಬ್ಬಂದಿಯನ್ನು ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ. ಮಂಗಳವಾರ ರಾತ್ರಿ ಅಧಿಕಾರಿಗಳು ಇತರ ಸಿಬ್ಬಂದಿ ಮತ್ತು ಪತ್ರಕರ್ತರು ಕಚೇರಿಯಿಂದ ನಿರ್ಗಮಿಸಲು ಅವಕಾಶ ನೀಡಿದ್ದರು.
ಕಾರ್ಯಾಚರಣೆಯ ಅಂಗವಾಗಿ ಕೆಲವು ಕಂಪ್ಯೂಟರ್ ಪೆರಿಫೆರಲ್ಗಳು ಮತ್ತು ಮೊಬೈಲ್ ಫೋನ್ಗಳ ಯಥಾಪ್ರತಿಗಳನ್ನು ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.