ಅದಾನಿ- ಹಿಂಡನ್ಬರ್ಗ್ ಪ್ರಕರಣ; ಮಾಧ್ಯಮಗಳ ವರದಿಗಾರಿಕೆ ನಿರ್ಬಂಧಕ್ಕೆ ಸುಪ್ರೀಂ ನಿರಾಕರಣೆ
ಹೊಸದಿಲ್ಲಿ:ಅದಾನಿ ಗುಂಪಿನ ಕಂಪೆನಿಗಳು ಶೇರು ಮಾರುಕಟ್ಟೆಯಲ್ಲಿ ಹಸ್ತಕ್ಷೇಪ ನಡೆಸಿ ತಮ್ಮ ಶೇರುಗಳ ಬೆಲೆಗಳನ್ನು ಕೃತಕವಾಗಿ ಏರಿಸಿಕೊಂಡಿವೆ ಎಂಬ ಆರೋಪಗಳ ಬಗ್ಗೆ ವರದಿ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಬೇಕು ಎಂದು ಕೋರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ಈ ಅರ್ಜಿಯನ್ನು ವಕೀಲ ಎಮ್.ಎಲ್. ಶರ್ಮಾ ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್ ಮುಂದೆ ಮಂಡಿಸಿದ್ದರು.
“ನಾವು ಮಾಧ್ಯಮಗಳಿಗೆ 66 ಯಾವತ್ತೂ ಯಾವುದೇ ನಿರ್ಬಂಧ ವನ್ನು ಹೇರಲು ಹೋಗುವುದಿಲ್ಲ' ಎಂದು ಹೇಳಿದ ನ್ಯಾ. ಚಂದ್ರಚೂಡ್, ಈ ಪ್ರಕರಣದ ತೀರ್ಪನ್ನು ನ್ಯಾಯಾಲಯವು ಶೀಘ್ರದಲ್ಲೇ ನೀಡುವುದು ಎಂದರು.
ಕೃತಕವಾಗಿ ಬೆಲೆ ಏರಿಸಲಾಗಿರುವ ಶೇರುಗಳನ್ನು ಅಡವಿಟ್ಟು ಕೈಗಾರಿಕೋದ್ಯಮಿ ಗೌತಮ್ ಅದಾನಿ ನೇತೃತ್ವದ ಅದಾನಿ ಗುಂಪಿನ ಕಂಪೆನಿಗಳು ಭಾರೀ ಮೊತ್ತದ ಸಾಲಗಳನ್ನು ಪಡೆದುಕೊಂಡಿವೆ ಹಾಗೂ ಅವುಗಳು ತಪ್ಪು ಲೆಕ್ಕಗಳನ್ನು ಕೊಡುತ್ತಿವೆ ಎಂಬುದಾಗಿ ಅಮೆರಿಕದ ಹಿಂಡನ್ಬರ್ಗ್ ರಿಸರ್ಚ್ ಕಂಪೆನಿಯು ಜನವರಿ 24ರಂದು ವರದಿ ಮಾಡಿದ ಬಳಿಕ, ಅವರ ಕಂಪೆನಿಗಳ ಶೇರುಗಳ ಬೆಲೆಗಳು ಭಾರೀ ಪ್ರಮಾಣದಲ್ಲಿ ಕುಸಿದಿವೆ.
ವರದಿ ಹೊರಬಿದ್ದ ಬಳಿಕ, ಅದಾನಿ ಗುಂಪಿನ ಕಂಪೆನಿಗಳ ಮಾರುಕಟ್ಟೆ ಬಂಡವಾಳ 136 ಬಿಲಿಯ ಡಾಲರ್ (ಸುಮಾರು 11.26 ಲಕ್ಷ ಕೋಟಿ ರೂಪಾಯಿ)ನಷ್ಟು ಇಳಿದಿದೆ. ಶರ್ಮಾ ಮತ್ತು ಇನ್ನೋರ್ವ ವಕೀಲ ವಿಶಾಲ್ ತಿವಾರಿ ಸಲ್ಲಿಸಿರುವ ಎರಡು ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ.
ಹಿಂಡನ್ಬರ್ಗ್ ರಿಸರ್ಚ್ನ ಸ್ಥಾಪಕ ನ್ಯಾತನ್ ಆ್ಯಂಡ ಸನ್ ಮತ್ತು ಭಾರತದಲ್ಲಿರುವ ಅವರ ಪ್ರತಿನಿಧಿಗಳ ವಿರುದ್ಧ ಮೊಕದ್ದಮೆ ದಾಖಲಿಸಿ ತನಿಖೆ ನಡೆಸುವಂತೆ ಭಾರತೀಯ ಶೇರು ವಿನಿಮಯ ಮಂಡಳಿ (ಸೆಬಿ) ಮತ್ತು ಕೇಂದ್ರ ಗೃಹ ಸಚಿವಾಲಯಕ್ಕೆ ನಿರ್ದೇಶನಗಳನ್ನು ನೀಡುವಂತೆ ತನ್ನ ಅರ್ಜಿಯಲ್ಲಿ ಶರ್ಮಾ ಕೋರಿದ್ದರೆ, ಹಿಂಡನ್ಬರ್ಗ್ ವರದಿಯ ಬಗ್ಗೆ ತನಿಖೆ ಮಾಡಲು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಬೇಕು ಎಂಬುದಾಗಿ ತನ್ನ ಅರ್ಜಿಯಲ್ಲಿ ತಿವಾರಿ ಮನವಿ ಮಾಡಿದ್ದರು.