ಟಿಪ್ಪುಗಾಗಿ ಪ್ರಾಣ ತ್ಯಾಗಮಾಡಿದವರಲ್ಲಿ ಮುಸ್ಲಿಮರಿಗಿಂತ ಹಿಂದೂಗಳೇ ಅಧಿಕ-ಮೌಲಾನ ಇಲ್ಯಾಸ್
ಭಟ್ಕಳ: ಟಿಪ್ಪು ಹುತಾತ್ಮರಾದಾಗ ಮುಸ್ಲಿಮರಿಗಿಂತ ಹಿಂದೂಗಳೇ ಅಧಿಕ ಸಂಖ್ಯೆಯಲ್ಲಿ ತಮ್ಮ ಪ್ರಾಣವನ್ನು ತ್ಯಾಗಮಾಡಿದ್ದಾರೆ ಎಂದು ಖ್ಯಾತ ವಿದ್ವಾಂಸ ಹ.ಟಿಪ್ಪು ಸುಲ್ತಾನ್ ಗ್ರಂಥಕರ್ತ ಮೌಲಾನ ಮುಹಮ್ಮದ್ ಇಲ್ಯಾಸ್ ನದ್ವಿ ಹೇಳಿದರು.
ಅವರು ಶುಕ್ರವಾರ ನವಾಯತ್ ಕಾಲೋನಿಯ ರಾಬಿತಾ ಸೂಸೈಟಿ ಸಭಾಂಗಣದಲ್ಲಿ ಭಟ್ಕಳ ತಾಲೂಕು ಆಡಳಿತ, ತಾ.ಪಂ. ಪುರಸಭೆ ಭಟ್ಕಳ ಹಾಗೂ ಜಾಲಿ ಪ.ಪಂ ವತಿಯಿಂದ ಜರಗಿದ ಹಝರತ್ ಟಿಪ್ಪು ಸುಲ್ತಾನ್ ಜನ್ಮಾದಿನಾಚರಣೆ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದರು.
ಭಾರತ ದೇಶದ ಖ್ಯಾತಿ ತಾಜಮಹಾಲ್, ಗೋಲಗುಂಬಝ್, ಲಾಲ್ ಕಿಲಾಗಳಿಂದಾಗದೆ ಮೈಸೂರು ಹುಲಿ ವೀರಾ ಟಿಪ್ಪುವಿನಿಂದಾಗಿ ಈ ದೇಶಕ್ಕೆ ಖ್ಯಾತಿ ಬಂದಿದೆ ಎಂದ ಅವರು ಮುಸ್ಲಿಮರಿಗಿಂತ ಹಿಂದೂಗಳೇ ಅಧಿಕ ಸಂಖ್ಯೆಯಲ್ಲಿ ಟಿಪ್ಪುವಿನ ಫ್ಯಾನ್ ಆಗಿದ್ದಾರೆ ಟಿಪ್ಪು ಈ ದೇಶದ ಹೀರೋ ಎಂದರು. ಅತ್ಯಂತ ಧರ್ಮಸಹಿಷ್ಣುವಾಗಿದ್ದ ಟಿಪ್ಪು ಮಸೀದಿ ಪಕ್ಕದಲ್ಲೇ ಮಂದಿರವನ್ನು ನಿರ್ಮಿಸಿದ್ದರು. ಈಗಲೂ ಶ್ರೀಂಗೇರಿ ಮಠದಲ್ಲಿ ಇದರ ದಾಖಲೆಗಳು ಕಾಣಸಿಗುತ್ತವೆ ಎಂದರು.
ಅಂಜುಮನ್ ಪದವಿ ಮಹಾವಿದ್ಯಾಲಯದ ವಿಶ್ರಾಂತ ಪ್ರಾಂಶುಪಾಲ ಸಾಹಿತಿ ಡಾ.ಸೈಯ್ಯದ್ ಝಮಿರುಲ್ಲಾ ಷರೀಫ್ ಮಾತನಾಡಿ, ಟಿಪ್ಪು ಸುಲ್ತಾನ್ ಮತೀಯವಾದಿ ಎಂಬ ಟಿಪ್ಪು ವಿರೋಧಿಗಳ ವಾದದಲ್ಲಿ ಯಾವುದೇ ಹುರುಳಿಲ್ಲ. ಜಗತ್ತು ಅವರನ್ನು ಅತ್ಯಂತ ಗೌರವದಿಂದ ಕಾಣುತ್ತಿದೆ. ಟಿಪ್ಪುವಿನ್ ಕಟ್ಟರ್ ವಿರೋಧಿಗಳಾದ ಬ್ರಿಟೀಷರು ಟಿಪ್ಪುವಿನ ಯುದ್ದತಂತ್ರಗಳನ್ನು ಈಗಲೂ ಅಳವಡಿಸಿಕೊಳ್ಳುತ್ತಿದ್ದಾರೆ. ನಾಸಾವು ಟಿಪ್ಪು ಸುಲ್ತಾನ್ ರ ಪೇಟಿಂಗ್ ಮಾಡಿ ಅವರನ್ನು ಆಧುನಿಕ ಕ್ಷಿಪಣಿಯ ಜನಕ ಎಂದು ಕರೆದಿದ್ದಾರೆ ಟಿಪ್ಪುವನ್ನು ವಿರೋಧಿಸುವ ಭರದಲ್ಲಿ ಇಲ್ಲಿ ನಡೆಯುತ್ತಿರುವ ರಾಜಕೀಯ ಸಲ್ಲ ಎಂದರು.
ಭಟ್ಕಳ ಪುರಸಭೆಯ ಅಧ್ಯಕ್ಷ ಮುಹಮ್ಮದ್ ಸಾದಿಕ್ ಮಟ್ಟಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತ ಎಂ.ಎನ್.ಮಂಜುನಾಥ್, ತಹಸಿಲ್ದಾರ್ ವಿ.ಎನ್.ಬಾಡ್ಕರ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಸಿ.ಟಿ.ನಾಯ್ಕ, ತಂಝೀಮ್ ಪ್ರಧಾನ ಕಾರ್ಯದರ್ಶಿ ಮುಹಿದ್ದೀನ್ ಅಲ್ತಾಫ್ ಖರೂರಿ, ಜಿ.ಪಂ.ಅಧ್ಯಕ್ಷ ಜಯಶ್ರೀ ಮೊಗೇರ್, ಜಾಲಿ ಪ.ಪಂ.ಅಧ್ಯಕ್ಷ ಅಬ್ದುಲ್ ರಹೀಮ್ ಶೇಖ್, ಸ್ಥಾಯಿ ಸಮಿತಿ ಅಧ್ಯಕ್ಷ ಮುಹಮ್ಮದ್ ಆದಂ, ಅಶ್ಫಾಖ್ ಕೆ.ಎಂ. ಮತ್ತಿತರರು ಉಪಸ್ಥಿತರಿದ್ದರು.