ಗುರ್ಗಾಂವ್: ರಾಜಸ್ಥಾನದ ಭರತಪುರ ಜಿಲ್ಲೆಯ ನಿವಾಸಿಗಳಾದ ನಾಸಿರ್ ಮತ್ತು ಜುನೈದ್ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಮೋನು ಮನೇಸರ್ನನ್ನು ಬೆಂಬಲಿಸಿ ಆಯೋಜಿಸಲಾಗಿದ್ದ “ಹಿಂದೂ ಮಹಾಪಂಚಾಯತ್, ಪ್ರಕರಣವು ಗೋರಕ್ಷಕರ ವಿರುದ್ಧ ಷಡ್ಯಂತ್ರವಾಗಿದೆ ಎಂದು ಬಣ್ಣಿಸಿದೆ. ಪ್ರಕರಣದಲ್ಲಿ ಸಿಬಿಐ ತನಿಖೆಗೆ ಅದು ಆಗ್ರಹಿಸಿದೆ.
ಪಂಚಾಯತ್ ನಲ್ಲಿ ಹಲವಾರು ಭಾಷಣಕಾರರು ಬಜರಂಗ ದಳದ ಸದಸ್ಯ ಹಾಗೂ ಗುರ್ಗಾಂವ್ನಲ್ಲಿ ಹರ್ಯಾಣ ಸರಕಾರದ ಗೋ ರಕ್ಷಣಾ ಪಡೆಯ ಪ್ರಮುಖನಾಗಿರುವ ಮೋನು ಮನೇಸ ಬಂಧನದ ವಿರುದ್ಧ ರಾಜಸ್ಥಾನ ಪೊಲೀಸರಿಗೆ ಕಠಿಣ ಎಚ್ಚರಿಕೆಯನ್ನು ನೀಡಿದರು.
ಮನೇಸರ್ದಲ್ಲಿ ಮೋನು ನಿವಾಸದ ಮೇಲೆ ರಾಜಸ್ಥಾನ ಪೊಲೀಸರ ತಂಡವು ದಾಳಿ ನಡೆಸಿದೆ ಎಂಬ ವರದಿಗಳ ನಡುವೆಯೇ ಮಹಾ ಪಂಚಾಯತ್ಗೆ ಆಗಮಿಸಿದ್ದ ಹಲವರು ಕೆಲ ಕಾಲ ದಿಲ್ಲಿ-ಗುರ್ಗಾಂವ್ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ತಡೆಯನ್ನೊಡ್ಡಿದ್ದರು. ಬಳಿಕ ಸ್ಥಳೀಯ ಪೊಲೀಸರು ಮತ್ತು ಪಂಚಾಯತ್ ಸದಸ್ಯರು ಮಧ್ಯ ಪ್ರವೇಶಿಸಿ ರಸ್ತೆಯನ್ನು ತೆರವುಗೊಳಿಸಿದರು.
'ಮೋನು ಮತ್ತು ಆತನ ತಂಡ ಗೋ ಕಳ್ಳಸಾಗಣೆ ಮಾಫಿಯಾವನ್ನು ಬಗ್ಗುಬಡಿದಿರುವುದರಿಂದ ಆತನ ವಿರುದ್ಧ ಸುಳ್ಳು ಎಫ್ಐಆರ್ ದಾಖಲಾಗಿದೆ. ಸಿಬಿಐ ತನಿಖೆಗೆ ನಾವು ಆಗ್ರಹಿಸುತ್ತಿದ್ದೇವೆ. ಯಾವುದೇ ಪುರಾವೆಯಿಲ್ಲದೆ ಪ್ರಕರಣ ವನ್ನು ದಾಖಲಿಸಲಾಗಿದೆ. ಘಟನೆ ನಡೆದಾಗ ಮೋನು ಖಾಸಗಿ ಹೋಟೆಲ್ ವೊಂದರಲ್ಲಿದ್ದ ಮತ್ತು ಆತ ಅದರ ಸಿಸಿಟಿವಿ ದೃಶ್ಯಾವಳಿಯನ್ನು ಶೇರ್ ಮಾಡಿ ಕೊಂಡಿದ್ದಾನೆ.
ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸುವ ಬದಲಿಗೆ ರಾಜಸ್ಥಾನ ಪೊಲೀಸರು ಕಾನೂನುಬಾಹಿರ ದಾಳಿಗಳ ಮೂಲಕ ಗೋರಕರಿಗೆ ಕಿರುಕುಳ ನೀಡುತ್ತಿದ್ದಾರೆ' ಎಂದು ಮಹಾಪಂಚಾಯತ್ನ ಸಂಘಟಕರಲ್ಲೋರ್ವರಾದ ಕುಲಭೂಷಣ ಭಾರದ್ವಾಜ್ ಹೇಳಿದರೆ, 'ಮೋನುವನ್ನು ಬಂಧಿಸಲು ರಾಜಸ್ಥಾನ ಪೊಲೀಸರು ಮನೇಸರಕ್ಕೆ ಕಾಲಿರಿಸಿದರೆ ಅವರು ಅದೇ ಕಾಲುಗಳಲ್ಲಿ ಮರಳುವುದಿಲ್ಲ. ಮೋನುವನ್ನು ಬಂಧಿಸಿದರೆ ನಾವು ಹೆದ್ದಾರಿ ನಿರ್ಬಂಧಿಸುತ್ತೇವೆ, ನಮ್ಮನ್ನು ಬಂಧಿಸಿದರೆ ಇಡಲು ಜೈಲು ಸಾಲುವುದಿಲ್ಲ ಎಂದು ಪಟೌಡಿಯ ಗೋರಕ್ಷಾ ದಳದ ಸದಸ್ಯ ನೀಲಂ ಎಚ್ಚುಕೆ ನೀಡಿದರು. ಸರಕಾರ ಮತ್ತು ಪೊಲೀಸರು ಗೋರಕ್ಷಕರಿಗೆ ನೀಡಿರುವ ಶಸ್ತ್ರಾಸ್ತ್ರ ಪರವಾನಿಗೆಯನ್ನು ರದ್ದುಗೊಳಿಸಬಾರದು ಮತ್ತು ಅವರಿಗೆ ಭದ್ರತೆಯನ್ನು ಒದಗಿಸಬೇಕು ಎಂದು ಮನೇಸರದ ಓಂ ಪ್ರಕಾಶ್ ಆಗ್ರಹಿಸಿದರು.
'ಜಾನುವಾರು ಕಳ್ಳ ಸಾಗಣೆಯನ್ನು ಅಂತ್ಯಗೊಳಿಸಲು ಹಗಲಿರುಳೂ ಶ್ರಮಿಸುತ್ತಿರುವ ನಮ್ಮದೇ ಪ್ರದೇಶದ ಮೋನು ಬಗ್ಗೆ ನಾವು ಹೆಮ್ಮೆ ಪಡಬೇಕು. ಆತ ಭೂಗತನಾಗಿದ್ದಾನೆ ಎಂದು ಮಾಧ್ಯಮಗಳು ವರದಿ ಮಾಡುತ್ತಿವೆ. ಕ್ಯಾ ಬಾತ್ ಕರತೆ ಹೋ? ಮೋನು ಶೇರ್ ಕಾ ಬಚ್ಚಾ ಹೈ, ಜಬ್ ಕಹೋಗೆ ತಬ್ ಲೇ ಆಯೇಂಗೆ' ಎಂದು ಸರಪಂಚರೋರ್ವರು ಹೇಳಿದರು.