ನೋಹ್ ನ ಹೊಟೇಲ್ ನೆಲಸಮ; ಹರ್ಯಾಣ ಹಿಂಸಾಚಾರ ವೇಳೆ ಕಲ್ಲು ತೂರಾಟಕ್ಕೆ ಬಳಕೆ ಆರೋಪ; ಯಾರೊಬ್ಬರೂ ನನ್ನ ಮಾತು ಆಲಿಸಲಿಲ್ಲ: ಮಾಲಕನ ಅಳಲು
ನೂಹ್: ಹರ್ಯಾಣದ ನೂಹ್ ಜಿಲ್ಲಾಡಳಿತ ಅಕ್ರಮ ಕಟ್ಟಡಗಳ ಧ್ವಂಸ ಕಾರ್ಯಾಚರಣೆಯನ್ನು ನಾಲ್ಕನೇ ದಿನವಾದ ರವಿವಾರ ಕೂಡ ಮುಂದುವರಿಸಿದ್ದು, ಇಲ್ಲಿ ಕಲ್ಲು ತೂರಾಟಕ್ಕೆ ಬಳಸಿಕೊಳ್ಳಲಾಗಿದೆ ಎನ್ನಲಾದ ಹೊಟೇಲ್ ಒಂದನ್ನು ಬುಲ್ಡೋಜರ್ ಬಳಸಿ ನೆಲಸಮಗೊಳಿಸಿದೆ.
ಇಲ್ಲಿನ ಸಹರಾ ಹೊಟೇಲ್ನ ಛಾವಣಿಯಿಂದ ಕೆಲವು ದುಷ್ಕರ್ಮಿಗಳು ಧಾರ್ಮಿಕ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಇದರಿಂದ ಜುಲೈ 31ರಂದು ನೂಹನಲ್ಲಿ ಹಿಂಸಾಚಾರ ಆರಂಭ ವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ, ಅಧಿಕಾರಿಗಳು ವೀಡಿಯೊದಲ್ಲಿ ತೋರಿಸಿದ ಹೊಟೇಲ್ನ ಕಟ್ಟಡ ನನಗೆ ಸೇರಿದ್ದಲ್ಲ. ಆ ಕಟ್ಟಡ ನೂಹ ದಲ್ಲಿದೆ. ನಾನು ಕೂಡ ದೃಶ್ಯಾವಳಿಯನ್ನು ಅವರಿಗೆ ತೋರಿಸಿದ್ದೇನೆ. ಆದರೆ, ನನ್ನ ಮಾತು ಯಾರೂ ಆಲಿಸಲಿಲ್ಲ' ಎಂದು ರೆಸ್ಟೋರೆಂಟ್ ಮಾಲಕ ಜಮೆದ್ ತಿಳಿಸಿದ್ದಾರೆ.
ನಾನು ಈ ರೆಸ್ಟೋರೆಂಟ್ ಅನ್ನು ಬಾಡಿಗೆಗೆ ಪಡೆದು ಕಳೆದ 9 ವರ್ಷಗಳಿಂದ ನಡೆಸುತ್ತಿದ್ದೇನೆ. ಆಡಳಿತ ಅನ್ಯಾಯ ಎಸಗುತ್ತಿದೆ. ನೂಹನಲ್ಲಿ ಘರ್ಷಣೆ ಆರಂಭವಾದಾಗ, ರೆಸ್ಟೋರೆಂಟ್ ಮುಚ್ಚುವಂತೆ ನಾನು ನನ್ನ ಕೆಲಸಗಾರರಿಗೆ ಸೂಚಿಸಿದ್ದೆ. ಅಲ್ಲದೆ, ನಾನು ಹಾಗೂ ನನ್ನ ಸಿಬ್ಬಂದಿ ಹೊಟೇಲ್ನ ಹಿಂದೆ ಇರುವ ಕಾಲನಿಗೆ ತೆರಳಿದ್ದೆವು ಎಂದು ಅವರು ತಿಳಿಸಿದ್ದಾರೆ.
ಇಂಟರ್ನೆಟ್ ಸ್ಥಗಿತ:
ಹರ್ಯಾಣದ ನೋಹನಲ್ಲಿ ಕೋಮು ಹಿಂಸಾಚಾರ ಮುಂದುವರಿದಿದ್ದು, ಆಗಸ್ಟ್ 8ರ ವರೆಗೆ ಇಂಟರ್ನೆಟ್, ಎಸ್ಎಂಎಸ್ ಸೇವೆ ಸ್ಥಗಿತವನ್ನು ಮುಂದುವರಿಸಿ ಸರಕಾರ ಆದೇಶ ಹೊರಡಿಸಿದೆ. ಪಲ್ಪಾಲಾ ಜಿಲ್ಲೆಯಲ್ಲಿ ಆಗಸ್ಟ್ 7ರ ಸಂಜೆ 5 ಗಂಟೆ ವರೆಗೆ ನಿರ್ಬಂಧ ಇರಲಿದೆ ಎಂದು ಆದೇಶ ತಿಳಿಸಿದೆ.