ಚಂಡಿಗಡ: ಹರ್ಯಾಣದ ನೂಪ್ನಲ್ಲಿ ಸೋಮವಾರ ಸಂಜೆ ವಿಶ್ವಹಿಂದೂ ಪರಿಷತ್ನ ಶೋಭಾ ಯಾತ್ರೆ ಸಂದರ್ಭ ಭುಗಿಲೆದ್ದ ಹಿಂಸಾಚಾರ ರಾಜ್ಯದ ಇತರ ಜಿಲ್ಲೆಗಳಿಗೂ ಹರಡಿದ್ದು, ಗುರುಗ್ರಾಮದಲ್ಲಿ ದುಷ್ಕರ್ಮಿಗಳು ಮಸೀದಿ ಮೇಲೆ ದಾಳಿ ನಡೆಸಿ ಸಹಾಯಕ ಧರ್ಮಗುರು(ನಾಯಿಬ್ ಇಮಾಮ್) ಅವರನ್ನು ಗುಂಡಿಕ್ಕಿ ಹತ್ಯೆಗೈದಿದ್ದಾರೆ.
ಹಲವು ಅಂಗಡಿಗಳು ಹಾಗೂ ಕಾರುಗಳಿಗೆ ಬೆಂಕಿ ಹಚ್ಚಲಾಗಿದೆ ಅಥವಾ ಹಾನಿ ಉಂಟು ಮಾಡಲಾಗಿದೆ. ಸೋಹಾದಲ್ಲಿ ಸುಮಾರು 50 ಕಾರುಗಳಿಗೆ ಹಾನಿ ಉಂಟು ಮಾಡಲಾಗಿದೆ. ಹಲವು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ. ಅಥವಾ ಲೂಟಿಗೈಯಲಾಗಿದೆ. ನೂನಲ್ಲಿ ಕೂಡ ಮಂಗಳವಾರ ಇದೇ ಪರಿಸ್ಥಿತಿ ಕಂಡು ಬಂದಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಮವಾರದಿಂದ ಕೋಮುಹಿಂಸಾಚಾರಕ್ಕೆ ಬಲಿಯಾದವರ ಸಂಖ್ಯೆ 6ಕ್ಕೇರಿದೆ ಎಂದು ಹರ್ಯಾಣ ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಮೃತಪಟ್ಟವರಲ್ಲಿ ಇಬ್ಬರು ನೂಹ್ ನಗರದ ಸ್ಥಳೀಯರು ಹಾಗೂ ಇಬ್ಬರು ಗೃಹ ರಕ್ಷಕ ದಳದ ಸಿಬ್ಬಂದಿ ಎಂಬುದಾಗಿ ವರದಿಯಾಗಿದೆ. ಸ್ಥಳೀಯರಲ್ಲಿ ಒಬ್ಬರ ಗುರುತು ಪತ್ತೆಹಚ್ಚಲಾಗಿದೆ.
ಇನ್ನೊಬ್ಬರ ಗುರುತು ಇದುವರೆಗೆ ಪತ್ತೆ ಹಚ್ಚಿಲ್ಲ. ಹಿಂಸಾಚಾರ ಪೀಡಿತ ನೂಹ್ ಜಿಲ್ಲೆಯಲ್ಲಿ ಕರ್ಪೂ ಜಾರಿಗೊಳಿಸಲಾಗಿದೆ ಎಂದು ಹರ್ಯಾಣ ಗೃಹ ಸಚಿವ ಅನಿಲ್ ವಿಜ್ ತಿಳಿಸಿದ್ದಾರೆ.
ಗುರುಗ್ರಾಮದ ಸೆಕ್ಟರ್ 57ರಲ್ಲಿ ಮಂಗಳ ವಾರ ಮುಂಜಾನೆ ಗುಂಪೊಂದು ಮಸೀದಿಗೆ ಬೆಂಕಿ ಹಚ್ಚಿದೆ ಹಾಗೂ ಅಲ್ಲಿನ ಸಹಾಯಕ ಧರ್ಮಗುರು(ನಾಯಿಬ್ ಇಮಾಮ್) ಅವರನ್ನು ಗುಂಡಿಕ್ಕಿ ಹತ್ಯೆಗೈದಿದೆ.
ಮೃತಪಟ್ಟ ಸಹಾಯಕ ಧರ್ಮಗುರು ಅವರನ್ನು 19 ವರ್ಷ ವಯಸ್ಸಿನ ಸಾದ್ ಎಂದು ಪೊಲೀಸರು ಗುರುತಿಸಿದ್ದಾರೆ. ಬಂದೂಕು, ತಲವಾರು ಹಾಗೂ ಲಾಠಿಗಳನ್ನು
ಹಿಡಿದುಕೊಂಡು ಬಂದ ದುಷ್ಕರ್ಮಿಗಳು ಮಧ್ಯರಾತ್ರಿ ವೇಳೆ ಮಸೀದಿ ಮೇಲೆ ದಾಳಿ ನಡೆಸಿದರು ಎಂದು ಮಸೀದಿ ಸಮಿತಿಯ ಸದಸ್ಯ ಮುಹಮ್ಮದ್ ಅಸ್ಲಂ ಹೇಳಿದ್ದಾರೆ.
“ತೆರೆದ ಜಾಗದಲ್ಲಿ ನಮಾಝ್ ಮಾಡುವುದಕ್ಕೆ ಸಂಘ ಪರಿವಾರದ ಕಾರ್ಯಕರ್ತರು 2021- 22ರಲ್ಲಿ ಅಡ್ಡಿಪಡಿಸಿದ್ದರು. ಆದ್ದರಿಂದ ಗುರುಗಾಂವ್ ನಲ್ಲಿ ಯಾವುದೇ ಅಡ್ಡಿ, ಆಂತಕ, ಬೆದರಿಕೆ ಇಲ್ಲದೆ ನಮಾಝ್ ಮಾಡಲು ಇರುವ ಏಕೈಕ ಮಸೀದಿ ಇದಾಗಿತ್ತು. ಆದರೆ, ಕೋಮುಶಕ್ತಿಗಳು ಈ ಮಸೀದಿಗೆ ಕೂಡ ಬೆಂಕಿ ಹಚ್ಚಿವೆ' ಎಂದು ನಾಗರಿಕ ವೇದಿಕೆ ಗುರುಗಾಂವ್ ಏಕ್ತಾ ಮಂಚ್ ಅಲ್ತಾಫ್ ಅಹ್ಮದ್ ಹೇಳಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕರಾದ ಗಾರ್ಗಿ ಕಕರ್ ಅವರು ಗುರುಗ್ರಾಮದ ಸಿವಿಲ್ ಲೈನ್ಸ್ನಲ್ಲಿ ಚಾಲನೆ ನೀಡಿದ್ದ ಶೋಭಾ ಯಾತ್ರೆಗೆ ನೂಕ್ನ ಖೇಡ್ಲಾ ಮೋಡ್ನಲ್ಲಿ ಗುಂಪೊಂದು ತಡೆ ಒಡ್ಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಹಿಂಸಾಚಾರ ಹರ್ಯಾಣದ ಇತರ ಜಿಲ್ಲೆಗಳಿಗೂ ಹರಡಲು ಆರಂಭವಾದಾಗ ಹರ್ಯಾಣ ಆಡಳಿತ ನೂಹ್, ಗುರುಗ್ರಾಮ, ರೇವಾರಿ ಜಿಲ್ಲೆಗಳು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿತ್ತು. ಅಲ್ಲದೆ, ಈ ವಲಯಗಳಲ್ಲಿ ಇಂಟರ್ನೆಟ್ ಅನ್ನು ಆಗಸ್ಟ್ 2ರ ವರೆಗೆ ರದ್ದುಗೊಳಿಸಿದೆ. ಹಿಂಸಾಚಾರ ಪೀಡಿತ ಜಿಲ್ಲೆಗಳಲ್ಲಿ ಶಾಂತಿ ಕಾಪಾಡಲು ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಸ್)ಯ ಬೆಟಾಲಿಯನ್ಗಳನ್ನು ನಿಯೋಜಿಸಿದೆ.