ಗುಜರಾತ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ; ತೀಸ್ತಾ ಸೆಟಲ್ವಾಡ್ಗೆ ಮಧ್ಯಂತರ ರಕ್ಷಣೆ
ಹೊಸದಿಲ್ಲಿ: 2002ರ ಗುಜರಾತ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ತಕ್ಷಣವೇ ಶರಣಾಗಬೇಕೆಂದು ಸಾಮಾಜಿಕ ಹೋರಾಟ ಗಾರ್ತಿ ತೀಸ್ತಾಸೆಟಲ್ವಾಡ್ ಅವರಿಗೆ ಗುಜರಾತ್ ಹೈಕೋರ್ಟ್ ನೀಡಿದ ಆದೇಶಕ್ಕೆ ಸುಪ್ರೀಂ ಕೋರ್ಟ್ ಶನಿವಾರ ತಡೆಯಾಜ್ಞೆ ನೀಡಿದ್ದು, ಅವರಿಗೆ ಏಳು ದಿನಗಳ ಮಧ್ಯಂತರ ರಕ್ಷಣೆ ಯನ್ನು ನೀಡಿದೆ.
ಜಾಮೀನು ಕೋರಿ ತಾನು ಸಲ್ಲಿಸಿದ್ದ ಮನವಿಯನ್ನು ಗುಜರಾತ್ ಹೈಕೋರ್ಟ್ ತಿರಸ್ಕರಿಸಿದ ಬೆನ್ನಲ್ಲೇ ತೀಸ್ತಾ ಸೆಟಲ್ವಾಡ್ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಗುಜರಾತ್ ಗಲಭೆಗೆ ಸಂಬಂಧಿಸಿದಪಕರಣ ಗಳಲ್ಲಿ ಸುಳ್ಳು ಪುರಾವೆಗಳನ್ನು ಸೃಷ್ಟಿಸಿದ ಹಾಗೂ ಸ್ಪಾಕ್ಷಿಗಳಿಗೆ ನ್ಯಾಯಾಲಯದಲ್ಲಿ ಸುಳ್ಳುಹೇಳು ವಂತೆ ಬೋಧಿಸಿದ ಆರೋಪಗಳನ್ನು ಆಕೆ ಎದುರಿಸುತ್ತಿದ್ದಾರೆ. ಇಂದು ಬೆಳಗ್ಗೆ ಗುಜರಾತ್ ಹೈಕೋರ್ಟ್ ಆಕೆಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು ಹಾಗೂ ತಕ್ಷಣವೇ ಶರಣಾಗುವಂತೆ ಆದೇಶಿಸಿತ್ತು.
ಇದೇ ಪ್ರಕರಣದಲ್ಲಿ ಬಂಧಿತರಾಗಿದ್ದ ಸೆಟಲ್ವಾಡ್ಗೆ 2022ರ ಸೆಪ್ಟೆಂಬರ್ನಲ್ಲಿ ಸುಪ್ರೀಂಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ಆನಂತರ ಆಕೆ ಸಬರಮತಿ ಜೈಲಿನಿಂದ ಬಿಡುಗಡೆಗೊಂಡಿದ್ದರು. ನಿಯಮಿತವಾದ ಜಾಮೀನು ನೀಡುವಂತೆ ಕೋರಿ ಅವರು ಗುಜರಾತ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಗುಜರಾತ್ ಹೈಕೋರ್ಟ್ ಶನಿವಾರ ತಿರಸ್ಕರಿಸಿತ್ತು.
ಆ ಬಳಿಕ ಸೆಟಲ್ವಾಡ್ ಸುಪ್ರೀಂಕೋರ್ಟ್ ಮೆಟ್ಟಲೇರಿದ್ದರು. ಆಕೆಯ ಜಾಮೀನು ಅರ್ಜಿಯ ತುರ್ತು ವಿಚಾರಣೆ ನಡೆಸಿದ ನ್ಯಾಯಾಲಯವು ಏಳು ದಿನಗಳವರೆಗೆ ಆಕೆಯನ್ನು ಬಂಧಿಸದಂತೆ ಮಧ್ಯಂತರ ರಕ್ಷಣೆಯನ್ನು ನೀಡಿದೆ.
2002 ರ ಗುಜರಾತ್ ಗಲಭೆಗೆ ಸಂಬಂಧಿಸಿ ಸಾಕ್ಷ್ಯಗಳನ್ನು ಸೃಷ್ಟಿಸಿದ ಆರೋಪದ ಪ್ರಕರಣದಲ್ಲಿ ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ಗೆ ಗುಜರಾತ್ ಹೈಕೋರ್ಟ್ ಶನಿವಾರ ಜಾಮೀನು ನಿರಾಕರಿಸಿದೆ. ತಕ್ಷಣ ಪೊಲೀಸರಿಗೆ ಶರಣಾಗುವಂತೆ ಪ್ರಸಕ್ತ ಮಧ್ಯಂತರ ಜಾಮೀನಿನಲ್ಲಿ ಹೊರಗಿರುವ ಅವರಿಗೆ ನ್ಯಾಯಾಲಯ ಆದೇಶಿಸಿದೆ.
ಈ ತೀರ್ಪಿಗೆ 30 ದಿನಗಳ ಕಾಲ ತಡೆ ನೀಡುವಂತೆ ಸೆಟಲ್ವಾಡ್ ವಕೀಲ ಮಿಹಿ ಠಾಕೂರ್ ನ್ಯಾಯಾಲಯಕ್ಕೆ ಮನವಿ ಮಾಡಿದರು. ಆದರೆ, ಈ ಮನವಿಯನ್ನು ನ್ಯಾಯಾಧೀಶ ನಿರ್ಝರ್ ದೇಸಾಯಿ ತಿರಸ್ಕರಿಸಿದರು.
ತೀಸ್ತಾ ಸೆಟಲ್ವಾಡ್, ಗುಜರಾತ್ ಮಾಜಿ ಪೊಲೀಸ್ ಮಹಾನಿರ್ದೇಶಕ ಆರ್.ಬಿ. ಶ್ರೀಕುಮಾರ್ ಮತ್ತು ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ರಾಜ್ಯ ಸರಕಾರವನ್ನು ಅಸ್ಥಿರಗೊಳಿಸುವ ಉದ್ದೇಶದಿಂದ ಸುಳ್ಳು ಸಾಕ್ಷ್ಯವನ್ನು ಸೃಷ್ಟಿಸಿದ್ದರು ಎಂಬುದಾಗಿ ಪ್ರಾಸಿಕ್ಯೂಶನ್ ಆರೋಪಿಸಿದೆ.
2002ರ ಗುಜರಾತ್ ಗಲಭೆಯಲ್ಲಿ 1,000ಕ್ಕೂ ಅಧಿಕ
ಮಂದಿ ಮೃತಪಟ್ಟಿದ್ದಾರೆ.ಮೃತಪಟ್ಟವರಲ್ಲಿ ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಗಲಭೆ ನಡೆದಾಗ ಪ್ರಧಾನಿ ನರೇಂದ್ರ ಮೋದಿ ಗುಜರಾತ್ನ ಮುಖ್ಯಮಂತ್ರಿಯಾಗಿದ್ದರು.
ಸೆಟಲ್ವಾಡ್ ಮತ್ತು ಶ್ರೀಕುಮಾರ್ರನ್ನು ಕಳೆದ ವರ್ಷದ ಜೂನ್ 26ರಂದು ಬಂಧಿಸ ಲಾಗಿತ್ತು. ಅವರ ಜಾಮೀನು ಅರ್ಜಿಗಳನ್ನು ಸೆಷನ್ಸ್ ನ್ಯಾಯಾಲಯವು ಜುಲೈ 30ರಂದು ತಿರಸ್ಕರಿಸಿತ್ತು.ಬಳಿಕ ಅವರು ಜಾಮೀನಿಗಾಗಿ ಹೈಕೋರ್ಟ್ಗೆ ಹೋಗಿದ್ದರು. ಬಳಿಕ, ಹೈಕೋರ್ಟ್ ವಿಚಾರಣೆಗಳ ನಡುವಿನ ಸುದೀರ್ಘ ಅಂತರವನ್ನು ಪ್ರಶ್ನಿಸಿ ಸೆಟಲ್ವಾಡ್ ಸುಪ್ರೀಂ ಕೋರ್ಟ್ಗೆ ಹೋಗಿದ್ದರು. ಅವರಿಗೆ ಸೆಪ್ಟೆಂಬರ್ 2ರಂದು ಮಧ್ಯಂತರ ಜಾಮೀನು ಸಿಕ್ಕಿತ್ತು. ಬಳಿಕ, ನವೆಂಬರ್ 25ರಂದು ಗುಜರಾತ್ ಹೈಕೋರ್ಟ್ ಶ್ರೀಕುಮಾರ್ ಗೂ ಎರಡು ತಿಂಗಳ ಮಧ್ಯಂತರ ಜಾಮೀನು ನೀಡಿತ್ತು.
ಜೂನ್ 15ರಂದು ನಡೆದ ಕಡೆಯ ವಿಚಾರಣೆಯಲ್ಲಿ, ಗುಜರಾತ್ ಸರಕಾರವು ಸೆಟಲ್ವಾಡ್ ಜಾಮೀನು ಅರ್ಜಿಯನ್ನು ವಿರೋಧಿಸಿತು. ಪುರಾವೆಗಳನ್ನು ನಾಶಪಡಿಸುವ ಅವರ ಸಾಮರ್ಥ್ಯವು ಅವರ ವಿರುದ್ಧದ ಅತ್ಯಂತ ಮಹತ್ವದ ಅಂಶವಾಗಿದೆ ಎಂದು ಅದು ವಾದಿಸಿತು.
“ಸೆಟಲ್ವಾಡ್ ಒಂದು ನಿರ್ದಿಷ್ಟ ರಾಜಕೀಯ ಪಕ್ಷದ ನಿರ್ದಿಷ್ಟ ರಾಜಕಾರಣಿಗಳ ಕೈಯಲ್ಲಿರುವ ಸಾಧನವಾಗಿದ್ದರು' ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಮಿತೇಶ್ ಅಮೀನ್ ನ್ಯಾಯಾಲಯದಲ್ಲಿ ವಾದಿಸಿದರು. ಅವರು 2020ರಲ್ಲಿ ನಿಧನರಾಗಿರುವ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ರನ್ನು ಉದ್ದೇಶಿಸಿ ಈ ಮಾತನ್ನು ಹೇಳಿದ್ದಾರೆ. 2002ರಲ್ಲಿ ಮೋದಿ ಸರಕಾರವನ್ನು ಅಸ್ಥಿರಗೊಳಿಸಲು ಪಟೇಲ್, ಸೆಟಲ್ವಾಡ್ಗೆ 30 ಲಕ್ಷ ರೂ. ನೀಡಿದ್ದರು ಎಂದು ಗುಜರಾತ್ ಸರಕಾರ ಹೇಳಿಕೊಂಡಿದೆ.