ಕೆಲವು ಜಿಎಸ್ಟಿ ಅಪರಾಧಗಳು ಕ್ರಿಮಿನಲ್ ಮುಕ್ತ; ಜಿಎಸ್ಟಿ ಮಂಡಳಿ ಒಪ್ಪಿಗೆ; ಹೊಸ ತೆರಿಗೆಗಳಿಲ್ಲ
ಹೊಸದಿಲ್ಲಿ: ಸರಕು ಹಾಗೂ ಸೇವಾ ತೆರಿಗೆ (ಜಿಎಸ್ಟಿ) ಮಂಡಳಿಯ 48ನೇ ಸಭೆಯು ಶನಿವಾರ ಹೊಸದಿಲ್ಲಿಯಲ್ಲಿ ನಡೆದಿದ್ದು, ಜಿಎಸ್ಟಿಗೆ ಸಂಬಂಧಿಸಿದ ಅಪರಾಧಗಳ ಕುರಿತ ನಿಯಮಗಳಲ್ಲಿ ತುಸು ಸಡಿಲಿಕೆ ಮಾಡಲಾಗಿದೆ. ಆದರೆ ಆನ್ ಲೈನ್ ಗೇಮಿಂಗ್ ಮೇಲಿನ ತೆರಿಗೆ ಮಿತಿ ಹೆಚ್ಚಳ ಸೇರಿದಂತೆ ಪ್ರಮುಖ ಕಾರ್ಯಸೂಚಿಗಳ ಬಗ್ಗೆ ಯಾವುದೇ ನಿರ್ಧಾರವನ್ನು ಕೈಗೊಳ್ಳಲಾಗಿಲ್ಲವೆಂದು ತಿಳಿದುಬಂದಿದೆ.
ಜಿಎಸ್ಟಿ ಸಭೆಯ ಬಳಿಕ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮಯಾ ಭಾವದಿಂದಾಗಿ ಅಜೆಂಡಾದಲ್ಲಿದ್ದ 15 ವಿಷಯಗಳ ಪೈಕಿ ಕೇವಲ ಎಂಟರ ಕುರಿತು ನಿರ್ಧರಿಸಲು ಮಂಡಳಿಗೆ ಸಾಧ್ಯವಾಯಿತು ಎಂದು ಹೇಳಿದರು. ಜಿಎಸ್ಟಿಗಾಗಿ ಮೇಲ್ಮನವಿ ನ್ಯಾಯಾಧಿಕರಣ ಸ್ಥಾಪನೆಯ ಬಗ್ಗೆಯೂ ಪರಿಶೀಲನೆ ನಡೆಸಲು ಸಾಧ್ಯವಾಗಲಿಲ್ಲವೆಂದವರು ಹೇಳಿದರು. ಈ ಸಲ ಯಾವುದೇ ಹೊಸತೆರಿಗೆಗಳನ್ನು ಜಾರಿಗೊಳಿಸಲಾಗಿಲ್ಲ ಎಂದು ಸೀತಾರಾಮನ್ ತಿಳಿಸಿದರು. ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ (ಎಸ್ಯುವಿ) ಎಂದರೇನು ಮತ್ತು ಇಂತಹವರ್ಗಗಳ ವಾಹನಗಳಿಗೆ ಅನ್ವಯಿಸುವ ತೆರಿಗೆ ಕುರಿತು ಮಂಡಳಿಯು ಸ್ಪಷ್ಟಪಡಿಸಿದೆ ಎಂದೂ ಮಂಡಳಿಯ ಅಧ್ಯಕ್ಷೆಯೂ ಆಗಿರುವ ನಿರ್ಮಲಾ ತಿಳಿಸಿದರು.
ಬಳಿಕ ಕಂದಾಯ ಕಾರ್ಯದರ್ಶಿ ಸಂಜಯ ಮಲ್ಲೋತ್ರಾ ಮಾತನಾಡಿ, ಜಿಎಸ್ಟಿಗೆ ಸಂಬಂಧಿಸಿದ ಕೆಲವು ತಪ್ಪುಗಳನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸದಿರಲು ಜಿಎಸ್ಟಿ ಮಂಡಳಿ ಸಮ್ಮತಿಸಿದೆ ಎಂದು ತಿಳಿಸಿದರು.. ತಮ್ಮ ಕರ್ತವ್ಯವನ್ನು ನಿರ್ವಹಿಸದಂತೆ ಅಧಿಕಾರಿಗಳಿಗೆ ಅಡ್ಡಿಪಡಿಸುವುದು, ಪುರಾವೆಗಳನ್ನು ಉದ್ದೇಶಪೂರ್ವಕವಾಗಿ ತಿರುಚುವುದು, ಮಾಹಿತಿಯನ್ನು ಒದಗಿಸಲು ವಿಫಲರಾಗುವುದು ಈ ಮೂರು ಬಗೆಯ ಅಪರಾಧಗಳನ್ನು ಕ್ರಿಮಿನಲ್ ಸ್ವರೂಪದ್ದೆಂದು ಪರಿಗಣಿಸದಿರಲು ಸಭೆಯಲ್ಲಿ ನಿರ್ಧಾರವನ್ನು ಕೈಗೊಳ್ಳಲಾಯಿತೆಂದು ಅವರು ತಿಳಿಸಿದರು.
ನಕಲಿ ಇನ್ವಾಯ್ಸ್ ಸಲ್ಲಿಕೆ ಹೊರತುಪಡಿಸಿದಂತೆ ಇತರ ಅಪರಾಧಗಳ ಮೇಲೆ ಕಾನೂನುಕ್ರಮದ ಮಿತಿಯನ್ನು 1 ಕೋಟಿ ರೂ.ನಿಂದ ಎರಡು ಕೋ.ರೂ.ಗಳಿಗೆ ದ್ವಿಗುಣಗೊಳಿಸಿದೆ. ಬೇಳೆಕಾಳುಗಳ ಸಿಪ್ಪೆಯ ಮೇಲೆ ವಿಧಿಸಲಾಗುತ್ತಿದ್ದ ಶೇ.5ರಷ್ಟು ಜಿಎಸ್ಟಿಯನ್ನು ರದ್ದುಪಡಿಸಲಾಗಿದೆ ಎಂದು ಮಲ್ಲೋತ್ರಾ ತಿಳಿಸಿದರು.
ಪೆಟ್ರೋಲ್ನೊಂದಿಗೆ ಸಮ್ಮಿಶ್ರಣಗೊಳಿಸುವುದಕ್ಕಾಗಿ ತೈಲ ಸಂಸ್ಕರಣಾಗಾರಗಳಿಗೆ ಪೂರೈಕೆ ಮಾಡಲಾಗುವ ಎಥಿಲ್ ಅಲ್ಲೋಹಾಲ್ ಮೇಲೆ ವಿಧಿಸುವ ಜಿಎಸ್ಟಿಯನ್ನು ಶೇ.18ರಿಂದ ಶೇ.5ಕ್ಕೆ ಇಳಿಸಲಾಗಿದೆ.
ವೈದ್ಯಕೀಯ, ಆರೋಗ್ಯ ವಿಮೆಯ ನೋಕ್ಷೇಮ್ ಬೋನಸ್ ಮೇಲೆ ಯಾವುದೇ ರೀತಿಯ ತೆರಿಗೆಯನ್ನು ವಿಧಿಸಲಾಗುವುದಿಲ್ಲವೆಂದು ಅವರು ತಿಳಿಸಿದರು.
ಆನ್ಲೈನ್ ಗೇಮಿಂಗ್ ಮತ್ತು ಕ್ಯಾಸಿನೋಗಳ ಕುರಿತು ಮೇಘಾಲಯ ಮುಖ್ಯಮಂತ್ರಿ ಕಾನಾಡ್ ಸಂಗ್ಲಾ ಅಧ್ಯಕ್ಷತೆಯ ಸಮಿತಿಯು ಎರಡು ದಿನಗಳ ಹಿಂದಷ್ಟೇ ತನ್ನ ವರದಿಯನ್ನು ಸಲ್ಲಿಸಿರುವುದರಿಂದ ಅವುಗಳ ಮೇಲಿನ ಜಿಎಸ್ಟಿ ಕುರಿತು ಇಂದಿನ ಸಭೆಯಲ್ಲಿ ಚರ್ಚಿಸಲಾಗಲಿಲ್ಲ ಎಂದು ಹೇಳಿದ ಮಲ್ಲೋತ್ರಾ,ಸಮಿತಿಯ ವರದಿಯನ್ನು ಜಿಎಸ್ಟಿ ಮಂಡಳಿಯ ಸದಸ್ಯರಿಗೆ ವಿತರಿಸಲೂ ಸಾಧ್ಯವಾಗಿರಲಿಲ್ಲ ಎಂದರು.