ಕಾರವಾರ:ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ಬೆಳೆ ಮತ್ತು ಸ್ವರಕ್ಷಣೆ ಆಯುಧಗಳನ್ನು ಅನುಜ್ಞಪ್ತಿದಾರರಿಂದ ಪೊಲೀಸ್ ಠಾಣೆಯಲ್ಲಿ ಠೇವಣಿ ಇರಿಸಲಾಗಿದ್ದು ಜಿಲ್ಲೆಯ ವಿವಿಧ ತಾಲೂಕುಗಳ ಗ್ರಾಮ ಪಂಚಾಯ್ತಿ ಉಪ ಚುನಾವಣೆಗಳು ನಡೆಯುತ್ತಿರುವುದರಿಂದ ಆ ಮತ ಕ್ಷೇತ್ರ ವ್ಯಾಪ್ತಿಯ ಆಯುಧಗಳನ್ನು ಮೇ 31ರವರೆಗೆ ಠೇವಣಿ ಇರಿಸಿಕೊಳ್ಳಲು ಜಿಲ್ಲಾಧಿಕಾರಿ ಡಾ.ಹರೀಶ್ಕುಮಾರ್ ಕೆ. ಆದೇಶಿಸಿದ್ದಾರೆ.
ಲೋಕಸಭೆ ಚುನಾವಣೆ ಪ್ರಕ್ರಿಯೆ ಮುಗಿದ ಬಳಿಕ ಮೇ 27ರಂದು ಪ್ರಸ್ತುತ ಠೇವಣಿ ಇಡಲಾಗಿರುವ ಅನುಜ್ಞಪ್ತಿದಾರರ ಆಯುಧಗಳನ್ನು ಹಿಂದಿರುಗಿಸಬೇಕಿದೆ. ಆದರೆ ಜಿಲ್ಲೆಯ ಅಂಕೋಲ ತಾಲೂಕು ಹೊನ್ನೆಬೈಲ್, ಕುಮಟಾ ತಾಲೂಕು ಗೋಕರ್ಣ ಪಂಚಾಯ್ತಿಯ ತದಡಿ ಬೆಲೆಖಾನ, ಹೊನ್ನಾವರ ತಾಲೂಕು ಹಡಿನಬಾಳ ಪಂಚಾಯ್ತಿಯ ಮುಟ್ಟಾ, ಶಿರಸಿಯ ಬಿಸಲಕೊಪ್ಪ ಪಂಚಾಯ್ತಿಯ ಮಳಲಗಾಂವ, ಇಸಳೂರ ಪಂಚಾಯ್ತಿಯ ಚಿಪಗಿ, ಗುಡ್ನಾಪುರ ಪಂಚಾಯ್ತಿಯ ಅಜ್ಜರಣಿ, ಸಿದ್ದಾಪುರ ತಾಲೂಕು ತಾರೆಹಳ್ಳಿ, ಕಾನಸೂರು, ಜೋಯಿಡಾ ತಾಲೂಕು ಪ್ರಧಾನಿ ಈ ವ್ಯಾಪ್ತಿಯಲ್ಲಿ ಚುನಾವಣೆ ನಡೆಯುತ್ತಿದ್ದು ಈ ವ್ಯಾಪ್ತಿಯ ಆಯುಧಗಳನ್ನು ಮೇ 31ರವರೆಗೂ ಠೇವಣಿ ಮುಂದುವರಿಸುವಂತೆ ಆದೇಶದಲ್ಲಿ ತಿಳಿಸಿದ್ದಾರೆ.
ಚುನಾವಣಾ ನೀತಿ ಸಂಹಿತೆ ಮುಗಿದ ವಾರದೊಳಗೆ ಆಯುಧಗಳನ್ನು ಹಿಂದಿರುಗಿಸಲು ಅವಕಾಶವಿದೆ. ಆದರೆಅನುಜ್ಞಪ್ತಿಗಳು ನವೀಕರಣವಾಗಿಲ್ಲದೇ ಇದ್ದಲ್ಲಿ ಅಂತಹ ಆಯುಧಗಳನ್ನು ನವೀಕರಣವಾಗುವವರೆಗೆ ಪೊಲೀಸ್ಠಾಣೆಯಲ್ಲೇ ಇರಿಸಿಕೊಳ್ಳುವಂತೆ ಆದೇಶದಲ್ಲಿ ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ.