'ಹೋರಾಟಗಾರರನ್ನು ಜೈಲಿಗೆ ಹಾಕಿ, ಅತ್ಯಾಚಾರಿ, ಕೊಲೆಗಡುಕರನ್ನು ರಕ್ಷಿಸುತ್ತಿರುವ ಸರಕಾರ'; ಬಿಲ್ಕಿಸ್ ಬಾನು ಜತೆ ಎಲ್ಲ ಸಮುದಾಯ ನಿಲ್ಲಬೇಕು; ಇರೋಮ್ ಶರ್ಮಿಳಾ ಚಾನು
ಬೆಂಗಳೂರು: ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ㅎ ಅತ್ಯಾಚಾರಮಾಡಿದ11 ಮಂದಿಅಪರಾಧಿಗಳನ್ನು ಗುಜರಾತ್ ಸರಕಾರ ಬಿಡುಗಡೆಗೊಳಿಸಿರುವುದು ಖಂಡನೀಯವಾಗಿದ್ದು, ಇದರ ವಿರುದ್ಧ ಎಲ್ಲ ಸಮುದಾಯ ಧ್ವನಿಗೂಡಿಸು ವುದು ಮಾತ್ರವಲ್ಲದೆ, ಆಕೆಯೊಂದಿಗೆ ನಿಲ್ಲಬೇಕು ಎಂದು ಮಣಿಪುರದ ಉಕ್ಕಿನ ಮಹಿಳೆ ಖ್ಯಾತಿಯ ಮಾನವ ಹಕ್ಕುಗಳ ಹೋರಾಟಗಾರ್ತಿ ಇರೋಮ್ ಶರ್ಮಿಳಾ ಚಾನು ಕರೆ ನೀಡಿದ್ದಾರೆ.
ಸೋಮವಾರ ನಗರದ ಕೆ.ಆರ್. ವೃತ್ತದ ಯುವಿಸಿ ಸಭಾಂಗಣದಲ್ಲಿ ಆಲ್ ಇಂಡಿಯಾ ಮಹಿಳಾ ಸಾಂಸ್ಕೃತಿಕ ಸಂಘಟನೆ ಕರ್ನಾಟಕ ರಾಜ್ಯ ಸಮಿತಿ ಹಮ್ಮಿಕೊಂಡಿದ್ದ 'ಬಿಲ್ಕಿಸ್ ಬಾನು ನಿಮ್ಮೊಂದಿಗೆ ನಾವಿದ್ದೇವೆ' ರಾಜ್ಯಮಟ್ಟದ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.
ಮಾನವ-ಪ್ರಜಾತಾಂತ್ರಿಕ ಹಕ್ಕುಗಳ ರಕ್ಷಣೆಗಾಗಿ ಧ್ವನಿ ಎತ್ತಿದ ಪ್ರಗತಿಪರರನ್ನು, ಹೋರಾಟಗಾರರನ್ನು ಜೈಲಿಗೆ ಹಾಕಿ, ಅತ್ಯಾಚಾರಿ, ಕೊಲೆಗಡುಕರನ್ನು ರಕ್ಷಿಸುತ್ತಿರುವ ಸರಕಾರದ ನಡೆಯನ್ನು ಎಲ್ಲರೂ ಖಂಡಿಸಬೇಕಾಗಿದೆ. ಅದರಲ್ಲೂ ಬಿಲ್ಲಿಸ್ ಬಾನು ಜೊತೆಗೆ ಇಡೀ ಜನಸಮುದಾಯ ನಿಲ್ಲುವ ಅವಶ್ಯಕತೆ ಇದೆ ಎಂದರು.
ಮಾಜಿ ಅಡ್ವಕೇಟ್ ಜನರಲ್ ರವಿವರ್ಮ ಕುಮಾರ್ ಮಾತನಾಡಿ, 75ರ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಒಂದೆಡೆ ದೇಶದ ಪ್ರಧಾನಿ ಹೆಣ್ಣುಮಕ್ಕಳ ರಕ್ಷಣೆ ಹಕ್ಕುಗಳ ಬಗ್ಗೆ ದೊಡ್ಡ-ದೊಡ್ಡ ಪದಗಳನ್ನು ಬಳಸಿ ಭಾಷಣ ಮಾಡಿದ್ದಾರೆ. ಇನ್ನೊಂದೆಡೆ ಅವರ ಮೂಗಿನಡಿಯಲ್ಲಿ ಗುಜರಾತ್ ಸರಕಾರ ಸನ್ನಡತೆ ಹೆಸರಿನಲ್ಲಿ 11 ಜನ ಅತ್ಯಾಚಾರಿಗಳಿಗೆ ಅದ್ದೂರಿ ಬಿಡುಗಡೆಯ ಅಮೃತವನ್ನು ಉಣಿಸಿತು ಎಂದು ಬೇಸರ ವ್ಯಕ್ತಪಡಿಸಿದರು.
ಗುಜರಾತ್ ಘೋರ ಕೋಮುಗಲಭೆಯಲ್ಲಿ ಪೂರ್ವ ನಿಯೋಜಿತ ಘಟನೆಯ ಭಾಗಿಯಾದ ಅತ್ಯಾಚಾರಿಗಳಿಗೆ ಅಂದಿನ ಗುಜರಾತ್ ಸರಕಾರ, ಪೊಲೀಸ್ ವ್ಯವಸ್ಥೆ ರಕ್ಷಣೆ ನೀಡಲು ಮುಂದಾದಾಗ,ಬಿಲ್ಕಿಸ್ ಬಾನುವಿನ ಎಡೆಬಿಡದ ಹೋರಾಟ, ಎನ್ಎಚ್ಆರ್ಸಿಯ ವರದಿಯಿಂದ ಪ್ರಕರಣವನ್ನು ಗುಜರಾತ್ ನಿಂದ ಮುಂಬೈ ಹೈಕೋರ್ಟ್ಗೆ ವರ್ಗಾಯಿಸಿ ಅತ್ಯಾಚಾರಿಗಳಿಗೆ, ಕೊಲೆಗಡುಕರಿಗೆ ಜೀವಾ ವಧಿ ಶಿಕ್ಷೆ ದೊರಕುವಂತಾಯಿತು ಎಂದ ಅವರು, ಈಗ ಇದನ್ನು ಗಾಳಿಗೆ ತೂರಿ ಗುಜರಾತ್ ಸರಕಾರ ಘೋರ ಅನ್ಯಾ ಯವೆಸಗಿದೆ ಎಂದು ಟೀಕಿಸಿದರು. ಇದು ಕೇವಲ ಒಬ್ಬ ಮಹಿಳೆಗೆ, ಮುಸ್ಲಿಮ್ ಹೆಣ್ಣುಮಗಳಿಗೆ ಆಗಿರುವ ಅನ್ಯಾಯವಲ್ಲ, ಇಡೀ ಮಾನವತೆಗೆ ಆಗಿರುವ ಮೋಸ. ಇದರ ವಿರುದ್ದ ಬಲಿಷ್ಠ ಹೋರಾಟಕ್ಕೆ ಜನಸಮುದಾಯ ಸಜ್ಜಾಗಬೇಕಿದೆ ಎಂದು ಅವರು ಹೇಳಿದರು.
ಹಿರಿಯ ನ್ಯಾಯವಾದಿ ಹೇಮಲತಾ ಮಹಿಷಿ ಮಾತನಾಡಿ, ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಸಂದರ್ಭ ಬಂದಿದ್ದು, ಅದು ನಮ್ಮ ಕರ್ತವ್ಯ. ಈಗ ನಾವು ಮೌನವಾಗಿದ್ದರೆ ಅನ್ಯಾಯಕ್ಕೆ ಅಪರಾಧಕ್ಕೆ ಸಮ್ಮತಿ ನೀಡಿದಂತೆ. ಯಾವುದೇ ಸರಕಾರ ಅಧಿಕಾರದಲ್ಲಿದ್ದಾಗ ಇಂತಹ ಘಟನೆ ನಡೆದರೆ ನಾವು ಒಕ್ಕೊರಲಿನಿಂದ ಖಂಡಿಸಬೇಕು ಎಂದರು.
ಎಐಎಂಎಸ್ಎಸ್ ರಾಜ್ಯಾಧ್ಯಕ್ಷೆ ಅಪರ್ಣಾ ಬಿ.ಆರ್. ಮಾತನಾಡಿದರು. ಸಮಾವೇಶದ ಅಧ್ಯಕ್ಷತೆಯನ್ನು ಎಐಎಂಎಸ್ ಎಸ್ ರಾಜ್ಯ ಉಪಾಧ್ಯಕ್ಷೆ ಎಂ.ಎನ್.ಮಂಜುಳಾ ವಹಿಸಿದ್ದರು. ಎಐಎಂಎಸ್ಎಸ್ ಶೋಭಾ ಎಸ್., ಶಾಂತಾ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.