ಬೆಂಗಳೂರು: ಎಸ್ಸಿಪಿ ಮತ್ತು ಟಿಎಸ್ಪಿ ಯೋಜನೆಗೆ ಮೀಸಲಿಟ್ಟ ಅನುದಾನವನ್ನು ಇತರ ಉದ್ದೇಶಕ್ಕೆ ಬಳಸಲಾಗುತ್ತಿದೆ ಎಂದು ಕೆಲವರು ದಿಕ್ಕು ತಪ್ಪಿಸುತ್ತಿದ್ದಾರೆ. ಆದರೆ, ಯಾವುದೇ ಸಂದರ್ಭದಲ್ಲಿ ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಿಟ್ಟ ಹಣವನ್ನು ಇತರ ಉದ್ದೇಶಗಳಿಗೆ ಬಳಸುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಈ ಸಂಬಂಧ ಗುರುವಾರ ಪ್ರಕಟನೆ ನೀಡಿರುವ ಸಿಎಂ ಕಾರ್ಯಾಲಯ, ಎಸ್ ಸಿಪಿ- ಟಿಎಸ್ ಕಾಯ್ದೆ 2013ರ ಸೆಕ್ಷನ್ 7(ಡಿ) ಅಡಿಯಲ್ಲಿ ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಿಟ್ಟ ಅನುದಾನ ಅನ್ಯ ಉದ್ದೇಶಕ್ಕೆ ಬಳಕೆ ಮಾಡಲು ಅವಕಾಶವಿದ್ದ ಆ ಸೆಕ್ಷನ್ 7 (ಡಿ) ರದ್ದು ಮಾಡಲಾಗಿದೆ. ಎಸ್ಪಿ-ಟಿಎಸ್ಪಿ ಯೋಜನೆಯಡಿ ಮೀಸಲಿಟ್ಟ ಒಟ್ಟು 11,144 ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ಒದಗಿಸಿದೆ. ಇಷ್ಟು ಹಣವನ್ನು ಕಡ್ಡಾಯವಾಗಿ ಪರಿಶಿಷ್ಟ ಕುಟುಂಬಗಳಿಗಾಗಿ ಬಳಕೆ ಮಾಡಬೇಕೆಂದು ಸೂಚನೆ ನೀಡಲಾಗಿದೆ ಎಂದು ತಿಳಿಸಿದೆ. ಎಸ್ಪಿ-ಟಿಎಸ್ ಅನುದಾನವನ್ನು ಗೃಹಲಕ್ಷ್ಮಿ-5,075 ಕೋ.ರೂ., ಅನ್ನಭಾಗ್ಯ-2,779 ಕೋ.ರೂ., ಗೃಹಜ್ಯೋತಿ-2,410 ಕೋ.ರೂ., ಶಕ್ತಿ-812 ಕೋ.ರೂ. ಹಾಗೂ ಯುವನಿಧಿ-67 ಕೋಟಿ ರೂ. ಸೇರಿದಂತೆ ಒಟ್ಟು 11,144 ಕೋಟಿ ರೂ.ಗಳನ್ನು ಪರಿಶಿಷ್ಟ ಕುಟುಂಬಗಳಿಗೆ ಗ್ಯಾರಂಟಿ ಯೋಜನೆಗಳಿಗೆ ಒದಗಿಸಲಾಗಿದೆ ಎಂದು ಪ್ರಕಟನೆಯಲ್ಲಿ ಮಾಹಿತಿ ನೀಡಲಾಗಿದೆ.