ಕಾರವಾರ: ನಗರದಲ್ಲಿ ಭಾನುವಾರ ನಡೆದ ಸೌಹಾರ್ದ ಕ್ರಿಕೆಟ್ ಪಂದ್ಯದಲ್ಲಿ ‘ಡಿ.ಸಿ. ಇಲೆವೆನ್’ ತಂಡವು, ‘ಪ್ರೆಸ್ ಇಲೆವೆನ್’ ತಂಡವನ್ನು ಮೂರು ರನ್ಗಳಿಂದ ಸೋಲಿಸಿ ರೋಚಕವಾಗಿ ಪ್ರಶಸ್ತಿ ಗೆದ್ದುಕೊಂಡಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ನೇತೃತ್ವದ ತಂಡವು ನಿಗದಿತ 12 ಓವರ್ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 104 ರನ್ ಗಳಿಸಿತು. ಸವಾಲನ್ನು ಬೆನ್ನತ್ತಿದ ಜಿಲ್ಲಾಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಟಿ.ಬಿ.ಹರಿಕಂತ್ರ ನಾಯಕತ್ವದ ‘ಪ್ರೆಸ್ ಇಲೆವೆನ್’ ತಂಡವು ಆರಂಭಿಕ ಆಘಾತ ಕಂಡಿತು. ನಂತರ ಚೇತರಿಸಿಕೊಂಡರೂ 12 ಓವರ್ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 102 ರನ್ ಗಳಿಸಲಷ್ಟೇ ಸಾಧ್ಯವಾಯಿತು. ‘ಪಂದ್ಯದ ಆಟಗಾರ’ನಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ‘ಉತ್ತಮ ಬ್ಯಾಟ್ಸ್ಮನ್’ ಆಗಿ ಪತ್ರಕರ್ತ ದರ್ಶನ್ ನಾಯ್ಕ ಹಾಗೂ ‘ಉತ್ತಮ ಬೌಲರ್’ ಆಗಿ ಪಿ.ಎಸ್.ಐ ಸಂಪತ್ ಕುಮಾರ್ ಪ್ರಶಸ್ತಿ ಪಡೆದುಕೊಂಡರು. ಪಂದ್ಯಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶ ಟಿ.ಗೋವಿಂದಯ್ಯ ಚಾಲನೆ ನೀಡಿದರು