ಸೂರತ್: ಗುಜರಾತ್ ಸೂರತ್ ನಗರದ ಕಾರ್ಖಾನೆಯೊಂದರಲ್ಲಿ ಶೌಚಗುಂಡಿಗೆ ಇಳಿದ ನಾಲ್ವರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ ದಾರುಣ ಘಟನೆ ಬುಧವಾರ ನಡೆದಿದೆ.
ಪಾಲಸಾನಾ-ಕಟೋದರಾ ರಸ್ತೆಯಲ್ಲಿ ಮಂಗಳವಾರ ಸಂಜೆ ಈ ಘಟನೆ ನಡೆದಿದೆ.ಶೌಚಗುಂಡಿ ಸ್ವಚ್ಛಗೊಳಿಸುತ್ತಿದ್ದ ಸಂದರ್ಭ ಇಬ್ಬರು ಕಾರ್ಮಿಕರು ಮೂರ್ಛ ತಪ್ಪಿ ಬಿದ್ದರು.
ಕೂಡಲೇ ಅವರನ್ನು ರಕ್ಷಿಸಲು ಯತ್ನಿಸಿದ ಇನ್ನಿಬ್ಬರು ಕಾರ್ಮಿಕರಿಗೂ ಬಳಲಿಕೆಯುಂಟಾಗಿ ಅವರು ಕೂಡ ಕುಸಿದುಬಿದ್ದರೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಶೌಚಗುಂಡಿಯಿಂದ ನಾಲ್ವರನ್ನೂ ಮೇಲಕ್ಕೆ ತಂದು ಆಸ್ಪತ್ರೆಗೆ ಸಾಗಿಸಲಾಯಿತು. ಆಗಲೇ ಅವರೆಲ್ಲರೂ ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದರೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮೃತಪಟ್ಟವರಲ್ಲಿ ತಂದೆ-ಮಗ ಸೇರಿದ್ದಾರೆಂದು ಅವರು ಹೇಳಿದ್ದಾರೆ.
ಮೃತರನ್ನು ರಾಜು ಸಿಂಗ್ ಭೋದಾನಿಯಾ(33), ಆತನ ಪುತ್ರ ಕಮಲೇಶ್(16), ಶಹಬಾಝ್ ಶೇಕ್ (20) ಹಾಗೂ ದೀಪಕ್ ಉಮಾಶಂಕರ್ (27) ಎಂದು ಗುರುತಿಸಲಾಗಿದೆ.
ಮೃತಪಟ್ಟ ನಾಲ್ವರು ಕಾರ್ಮಿಕರು ಬಿಹಾರದವರೆಂದು ಅವರು ಹೇಳಿದ್ದಾರೆ. ಕಳೆದ ಶುಕ್ರವಾರ ಗುಜರಾತ್ನ ಭಾವನಗರದಲ್ಲಿ ಸರಕಾರಿ ಪ್ರಯೋಗಾಲಯವೊಂದರ ಶೌಚಗುಂಡಿಗೆ ಇಳಿದ ನೈರ್ಮಲ್ಯ ಕಾರ್ಮಿಕನೊಬ್ಬ ಅಸ್ವಸ್ಥಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದನು.
2022ರ ಮಾರ್ಚ್ನಿಂದ 2023ರ ಎಪ್ರಿಲ್ ವರೆಗೆ ಗುಜರಾತ್ನ ವಿವಿಧೆಡೆ ಶೌಚಗುಂಡಿನ ಸ್ವಚ್ಛತಾ ಕಾರ್ಯದ ವೇಳೆ ಎಂಟು ಮಂದಿ ಸಾವನ್ನಪ್ಪಿದ್ದರು.