ಮಂಗಳೂರು: ಬೆಂಕಿ ಅನಾಹುತ: ವೃದ್ಧ ದಂಪತಿ ಸಜೀವ ದಹನ; ಬಂಟ್ವಾಳದ ಲೋರೆಟ್ಟೋದಲ್ಲಿ ಘಟನೆ
ಮಂಗಳೂರು: ಅಗ್ನಿ ದುರಂತವೊಂದರಲ್ಲಿ ದಂಪತಿ ಸಜೀವ ದಹನಗೊಂಡ ದುರ್ಘಟನೆ ಬಂಟ್ವಾಳ ತಾಲೂಕಿನ ಲೊರೆಟೊದ ತುಂಡುಪದವು ಎಂಬಲ್ಲಿ ರವಿವಾರ ಮಧ್ಯಾಹ್ನ ನಡೆದಿರುವುದು ವರದಿಯಾಗಿದೆ.
ತುಂಡುಪದವು ನಿವಾಸಿಗಳಾದ ಗಿಲ್ಬರ್ಟ್ ಕಾರ್ಲೊ(78) ಮತ್ತು ಅವರ ಪತ್ನಿ ಕ್ರಿಸ್ಟಿನ್ ಕಾರ್ಲೊ(70) ಬೆಂಕಿಗೆ ಆಹುತಿಯಾಗಿರುವ ದಂಪತಿ ಎಂದು ತಿಳಿದು ಬಂದಿದೆ.
ಮಧ್ಯಾಹ್ನ 1 ಗಂಟೆ ಸುಮಾರಿಗೆ ಗಿಲ್ಬರ್ಟ್ ಕಾರ್ಲೊ ಅವರ ಮನೆಯ ಸಮೀಪದಲ್ಲಿರುವ ಗುಡ್ಡದ ಮುಳಿಹುಲ್ಲಿಗೆ ಬಿದ್ದಿರುವ ಬೆಂಕಿ ಗಾಳಿಯ ತೀವ್ರತೆಗೆ ವ್ಯಾಪಿಸಿದೆ. ಇದನ್ನು ಗಮನಿಸಿದ ದಂಪತಿ ಬೆಂಕಿಯನ್ನು ನಂದಿಸಲು ಮುಂದಾಗಿ ದ್ದಾರೆ. ಈ ವೇಳೆ ವಯೋವೃದ್ಧರಾದ ಅವರಿಬ್ಬರು ಬೆಂಕಿಯ ಕೆನ್ನಾಲಗೆಗೆ ಸಿಲುಕಿದ್ದಾರೆ. ಬೊಬ್ಬೆ ಕೇಳಿ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಬೆಂಕಿಯನ್ನು ಗಮನಿಸಿ ಅಗ್ನಿಶಾಮಕ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬೆಂಕಿ ನಂದಿಸುವ ಹೊತ್ತಿನಲ್ಲಿ ಇಬ್ಬರು ಸಜೀವ ದಹನಗೊಂಡಿದ್ದರೆನ್ನಲಾಗಿದೆ. ವಿದೇಶದಲ್ಲಿ ಕೆಲಸದಲ್ಲಿದ್ದ ಗಿಲ್ಬರ್ಟ್ ಕಾರ್ಲೊ ನಿವೃತ್ತಿ ಪಡೆದು ಪತ್ನಿ ಕ್ರಿಸ್ಟಿನಾ ಕಾರ್ಲೊರೊಂದಿಗೆ ಊರಿನಲ್ಲಿ ಜೀವನ ನಡೆಸುತ್ತಿದ್ದರು.
ಒಂದೂವರೆ ವರ್ಷದ ಹಿಂದೆ ಅವರ ದಾಂಪತ್ಯ ಜೀವನದ ಸುವರ್ಣ ಸಂಭ್ರಮಾಚರಣೆ ನಡೆದಿತ್ತು. ಇವರಿಗೆ ಮೂವರು ಪುತ್ರಿಯರಿದ್ದಾರೆ. ಈ ಪೈಕಿ ಇಬ್ಬರು ವಿದೇಶದಲ್ಲಿ ಮತ್ತು ಒಬ್ಬರು ಮಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಘಟನೆಯ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.