ಭಟ್ಕಳ: ಮುಂಗಾರು ಆರಂಭವಾಗುತ್ತಿದ್ದಂತೆಯೇ ಕೃಷಿಕರ ಮನದಲ್ಲಿ ಉಲ್ಲಾಸ ಮೂಡಿದರೆ, ಭಟ್ಕಳ ತಾಲೂಕಿನ ಕೃಷಿಕರು ಮುಂಗಾರಿಗಿಂತ ಮೊದಲೇ ಬೀಜೋಪಚಾರ ಮಾಡಿ ಮುಂಗಾರಿನ ಆರಂಭದಲ್ಲಿಯೇ ನಾಟಿ ಕಾರ್ಯ ಮಾಡುತ್ತಾ ಬಂದವರು. ಈ
ಬಾರಿಯೂ ಕೂಡಾ ಶಿರಾಲಿ, ಬೇಂಗ್ರೆ ಭಾಗದ ರೈತರು ಈ ಬಾರಿಯೂ ಕೂಡ ಮುಂಗಾರಿನ ಆರಂಭದಲ್ಲಿಯೇ ನಾಟಿ ಮಾಡಿದ್ದಾರೆ.
ಪ್ರತಿ ವರ್ಷವೂ ಕೂಡಾ ರೈತರು ಭೂಮಿ ಹದ ಮಾಡುವುದಕ್ಕೆ ಮಾತ್ರ ಯಂತ್ರವನ್ನು ಬಳಸಿ ನಾಟಿ ಕಾರ್ಯಕ್ಕೆ ಮಾನವ ಸಂಪನ್ಮೂಲವನ್ನು ಬಳಸಿದರೆ ಈ ಬಾರಿ ಮಾತ್ರ ಹೆಚ್ಚು ರೈತರು ನಾಟಿಗೂ ಕೂಡಾ ಯಂತ್ರವನ್ನು ಬಳಸಿರುವುದು ಕೊರೊನಾ ಕಾಲದಲ್ಲಿ ಕೃಷಿ ಕಾರ್ಯಕ್ಕೆ ಕೃಷಿ ಕೂಲಿಗೆ ಜನರಿಲ್ಲದೇ ಇರುವುದು ಸಾಕ್ಷಿಯಾಗಿದೆ.
ಭಟ್ಕಳ ತಾಲೂಕಿನಲ್ಲಿ ಭತ್ತ, ಕಬ್ಬು ಹಾಗೂ ಶೇಂಗಾವನ್ನು ಮುಂಗಾರು ಹಂಗಾಮಿನಲ್ಲಿ ಬೆಳೆಯುತ್ತಿದ್ದು ಈಗಾಗಲೇ ಮಾವಳ್ಳಿ ಹೋಬಳಿಯ ಬೈಲೂರು, ಮುರ್ಡೇಶ್ವರ, ಮಾವಿನಕಟ್ಟೆ, ಬೇಂಗ್ರೆ, ಕಾಯ್ಕಿಣಿ, ಶಿರಾಲಿ ಇತ್ಯಾದಿ ಪ್ರದೇಶಗಳಲ್ಲಿ 150 ರಿಂದ 200 ಹೆಕ್ಟೇರ್ ಭತ್ತದ ನಾಟಿ ಮುಗಿದಿದ್ದು ಸೂಸಗಡಿ ಹೋಬಳಿಯಲ್ಲಿ ಇನ್ನಷ್ಟೇ ನಾಟಿ ಕಾರ್ಯ ಆರಂಭವಾಗಬೇಕಾಗಿದೆ.
ಬಿತ್ತನೆ ಬೀಜ ಈಗಾಗಲೇ ವಿತರಣೇ ಮಾಡಲಾಗಿದ್ದು ಸೂಸಗಡಿ ಮತ್ತು ಮಾವಳ್ಳಿ ಹೋಬಳಿಯಲ್ಲಿ ರೈತರಿಗೆ ಎಂ.ಟಿ.ಯು., ಎಂ.ಓ.4, ಜಯ, ಹೈಬ್ರಿಡ್ ತಳಿ ವಿತರಣೆಯಾಗಿದೆ. ತಾಲೂಕಿನಲ್ಲಿ ಭತ್ತದ ಬೆಳೆಯ ಗುರಿ 2500 ಹೆಕ್ಟೇರ್, ಕಬ್ಬು 15 ಹೆಕ್ಟೇರ್, ಶೇಂಗಾ 10 ಹೆಕ್ಟೇರ್ ಬೆಳೆ ನಿರೀಕ್ಷಿಸಲಾಗಿದೆ.
ರೈತರಿಗೆ ವಿವಿಧ ಯೋಜನೆ ಅಡಿಯಲ್ಲಿ ಸಹಾಯ ಧನ ಲಭ್ಯವಿದ್ದು ರೈತರು ಇದರ ಸದುಪಯೋಗ ಪಡೆಯುವಂತೆಯೂ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಲೋಕೇಶಪ್ಪ ಅವರು ಕೋರಿದ್ದಾರೆ.