ಭಟ್ಕಳ:ಉ.ಕ.ಜಿಲ್ಲೆಯ ಜನರು ಇಂದು ಆತಂಕದಲ್ಲಿದ್ದಾರೆ. ಒಬ್ಬರು ಇನ್ನೊಬ್ಬರೊಂದಿಗೆ ಮಾತನಾಡಲು ಹೆದರುತ್ತಿದ್ದಾರೆ. ತನ್ನದೆ ಸಮುದಾಯದ, ತನ್ನದೆ ಕುಟುಂಬದ ವ್ಯಕ್ತಿಯೊಂದಿಗೆ ಅಂತರ ಕಾಯ್ದುಕೊಂಡು ಬದುಕುವ ಸ್ಥಿತಿ ಇಂದು ನಿರ್ಮಾಣಗೊಂಡಿದ್ದು ಇದಕ್ಕೆಲ್ಲ ಶ್ರೀಮಂತ ರಾಷ್ಟ್ರಗಳಿಂದ ಮರಳಿ ಬಂದಿರುವ ಭಟ್ಕಳದ ಜನರ ಅಜಾಗೂರಕತೆ, ನಿರ್ಲಕ್ಷತನವೇ ಕಾರಣವಾಗಿದ್ದು ಈಗ ಇಡೀ ಉತ್ತರಕನ್ನಡ ಜಿಲ್ಲೆಯೆ ಬೆಲೆ ತೆರೆವಂತೆ ಮಾಡಿದೆ.
ಉತ್ತರ ಕನ್ನಡ ಜಿಲ್ಲೆಯ ದಕ್ಷಿಣ ತುದಿಯ ಭಟ್ಕಳ ತಾಲೂಕು ಕೊರೊನಾ ಕಾಯಿಲೆಯ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗುವ ಮೂಲಕ ಮತ್ತೆ ಸುದ್ದಿಯಲ್ಲಿದೆ. ಇಲ್ಲಿಯ ತನಕ ಒಟ್ಟೂ 7 ಪ್ರಕರಣಗಳು ಭಟ್ಕಳದಲ್ಲಿ ಪತ್ತೆಯಾಗಿದ್ದು ಭಟ್ಕಳ ಮೂಲಕ ವ್ಯಕ್ತಿಯೋರ್ವ ಮಂಗಳೂರಿನಲ್ಲಿ ದಾಖಲಾಗುವ ಮೂಲಕ 8 ಪ್ರಕರಣವಾದಂತಾಗಿದೆ.
ವಿದೇಶಗಳಲ್ಲಿ ಆಗಲೇ ಮಾರಣ ಹೋಮ ಆರಂಭಿಸಿದ್ದ ಕೊರೊನಾ ಸೋಂಕಿನ ಕುರಿತು ತಿಳಿದೂ ಕೂಡಾ ನಾವು ಜಾಗೃತಿ ಮಾಡದಿರುವುದು ಇಂದು ಜಿಲ್ಲೆಯ ಜನತೆ ಬೆಲೆ ತೆರಬೇಕಾಗಿ ಬಂದಿರುವುದಲ್ಲದೇ ಜಿಲ್ಲಾಡಳಿತಕ್ಕೆ ಭಟ್ಕಳವೇ ದೊಡ್ಡ ಸಮಸ್ಯೆಯಾಗಿರುವುದಕ್ಕೆ ಕಾರಣ ಎನ್ನಲಾಗಿದೆ.
ವಿದೇಶದಿಂದ ಬಂದವರು ಹಾಗೂ ಅವರ ಸಂಬಂಧಿಗಳು ಮೊದಲೇ ಜಾಗೃತರಾಗಿದ್ದಲ್ಲಿ ಸೋಂಕು ಇಷ್ಟೊಂದು ಹರಡುವುದಕ್ಕೆ ಕಾರಣವಾಗುತ್ತಿಲ್ಲವಾಗಿತ್ತು. ಸೋಂಕಿತರು ವಿದೇಶದಿಂದ ಬಂದು ಮನೆಯಲ್ಲಿರುವುದು, ಸಾರ್ವಜನಿಕ ಸಾರಿಗೆ ಬಳಸಿರುವುದು, ಸಾರ್ವಜನಿಕ ಪ್ರದೇಶಕ್ಕೆ ಭೇಟಿ ಕೊಡುವುದು ಮಾಡಿರುವುದು ಇಂದು ಎಲ್ಲರನ್ನೂ ಆತಂಕಕ್ಕೆ ನೂಕಿರುವುದು ಕಂಡು ಬಂದಿದೆ.
ಭಟ್ಕಳದಲ್ಲಿ ವಿದೇಶದಿಂದ ಬಂದಿದ್ದವರ ನಿರ್ಲಕ್ಷದಿಂದಲೇ ಮತ್ತೆ ನಾಲ್ವರಿಗೆ ಸೋಂಕು ಹರಡುವಂತಾಗಿಯಿತು. ಆ ನಂತರವೂ ಕೂಡಾ ಜಿಲ್ಲಾಡಳಿತ ಸೋಂಕು ತಗಲಿರುವು ಶಂಕೆ ಇರುವವರು ಮನೆಯಲ್ಲಿಯೇ ಒಬ್ಬಂಟಿಯಾಗಿರುವಂತೆ ಸೂಚಿಸಿದ್ದನ್ನು ಪಾಲಿಸದೇ ಇರುವುದು ತಮ್ಮ ಮನೆಯವರು, ಅಕ್ಕಪಕ್ಕದವರು, ಸ್ನೇಹಿತರಲ್ಲದೇ ಸಮುದಾಯವನ್ನೇ ಆತಂಕಕ್ಕೆ ದೂಡುವಂತೆ ಮಾಡಿತು. ಸ್ವಲ್ಪ ಜಾಗೃತಿಯನ್ನು ಮಾಡಿದ್ದರೂ ಸಹ ಇಂದು ಭಟ್ಕಳದಲ್ಲಿ ನಾವು ಇಂತಹ ಪರಿಸ್ಥಿತಿಯನ್ನು ಎದುರಿಸುವ ಪ್ರಸಂಗವೇ ಇಲ್ಲವಾಗಿತ್ತು.
ಅಲ್ಲದೇ ಇಡೀ ಜಿಲ್ಲೆಯಲ್ಲಿ ಭಟ್ಕಳಕ್ಕೆ ಮಾತ್ರ ಇಂತಹ ಘೋರವಾಗ ಹೆಲ್ತ್ ಎಮರ್ಜನ್ಸಿಯನ್ನು ಹಾಕುವ ಅಗತ್ಯತೆಯೇ ಇಲ್ಲವಾಗಿತ್ತು.
ಮನೆ ಮನೆ ಸರ್ವೆ: ಭಟ್ಕಳಕ್ಕೆ ವಿದೇಶದಿಂದ ಬಂದವರು, ಬೇರೆ ಬೇರೆ ಜಿಲ್ಲೆ, ರಾಜ್ಯದಿಂದ ಬಂದವರು ತಾವಾಗಿಯೇ ಬಂದು ನೋಂದಣಿ ಮಾಡಿಕೊಳ್ಳದೇ ಇರುವುದರಿಂದ ಆರೋಗ್ಯ ಕಾರ್ಯಕರ್ತರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಅಂತವರ ವಿವರವನ್ನು ಸಂಗ್ರಹಿಸುತ್ತಿದ್ದಾರೆ. ಒಟ್ಟು ಸುಮಾರು 9 ಸಾವಿರ ಮನೆಗಳಿಗೆ ತೆರಳಿ ವಿವರಗಳನ್ನು ಸಂಗ್ರಹಿಸುವ ಕಾರ್ಯ ಈಗಾಗಲೇ ಪ್ರಗತಿಯಲ್ಲಿದ್ದು ಇನ್ನೂ ಹೆಚ್ಚಿನ ಅಗತ್ಯತೆ ಕಂಡು ಬಂದರೆ ಸರ್ವೆ ಕಾರ್ಯವನ್ನು ಮುಂದುವರಿಸಲಾಗುವುದು ಎನ್ನುವುದನ್ನು ಜಿಲ್ಲಾಡಳಿತೆ ತಿಳಿಸಿದೆ. ಭಟ್ಕಳ ಪಟ್ಟಣ ಹಾಗೂ ಪಟ್ಟಣಕ್ಕೆ ಹೊಂದಿಕೊಂಡ ಜಾಲಿ ಪಟ್ಟಣ ಪಂಚಾಯತ್, ಕೆಲವು ಗ್ರಾಮ ಪಂಚಾಯತ್ಗಳಲ್ಲಿ ಅನೇಕ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದು ಜನರು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕಾಗಿದೆ.