ಬಳ್ಳಾರಿ : ತಾಯಿ ಮತ್ತು ಮಗುವಿನ ಸುರಕ್ಷತೆಗಾಗಿ ಹೆರಿಗೆಯನ್ನು ಸರ್ಕಾರಿ ಆಸ್ಪತ್ರೆಯಲ್ಲಿಯೇ ಮಾಡಿಸಬೇಕು. ಮಗುವಿನ ವಯಸ್ಸು 06 ತಿಂಗಳು ತುಂಬುವವರೆಗೆ ತಾಯಿಯ ಎದೆ ಹಾಲನ್ನು ಮಾತ್ರ ನೀಡಬೇಕು ಹಾಗೂ 12 ಮಾರಕ ರೋಗಗಳ ವಿರುದ್ಧದ ಲಸಿಕೆಗಳನ್ನು ವಯಸ್ಸಿನ ಅನುಸಾರ ತಪ್ಪದೇ ಹಾಕಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಎಲ್.ಜನಾರ್ಧನ ಹೇಳಿದರು.
ಬಳ್ಳಾರಿ ತಾಲೂಕಿನ ಬ್ಯಾಲಚಿಂತೆ ಗ್ರಾಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಂಟಿ ಸಹಭಾಗಿತ್ವದಲ್ಲಿ ಜರುಗುತ್ತಿರುವ ಆರೋಗ್ಯ ಮತ್ತು ಪೌಷ್ಟಿಕ ಸಮೀಕ್ಷೆಯ ಪರಿಶೀಲನೆ ವೇಳೆ ಗುರುವಾರ ಮನೆಗಳಿಗೆ ಭೇಟಿ ನೀಡಿ ಅವರು ಮಾತನಾಡಿದರು.
ಆರೋಗ್ಯ ಮತ್ತು ಪೌಷ್ಟಿಕ ಸಮೀಕ್ಷೆಯ ಪರಿಶೀಲನೆಯು ಬಳ್ಳಾರಿ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಜರುಗುತ್ತಿರುವ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗಗಳಾದ ಕ್ಷಯರೋಗ, ಕುಷ್ಟರೋಗ ಹಾಗೂ ಅಸಾಂಕ್ರಾಮಿಕ ರೋಗಗಳಾದ ಸಕ್ಕರೆ ಕಾಯಿಲೆ, ಮಧುಮೇಹ, ಕ್ಯಾನ್ಸರ್, ಪಾರ್ಶ್ವವಾಯು ಮುಂತಾದ ರೋಗಗಳ ವಿವರ ಪ್ರತಿ ಕುಟುಂಬದವರು ನೀಡಿ ಸಹಕರಿಸಬೇಕು ಎಂದರು.
ಮಗುವಿಗೆ ಎಲ್ಲ ಲಸಿಕೆಗಳ ಒದಗಿಸುವಿಕೆ, ಆಸ್ಪತ್ರೆ ಹೆರಿಗೆ ಪ್ರಮಾಣ, ಗರ್ಭಿಣಿ ಮಹಿಳೆಯರಲ್ಲಿ ರಕ್ತಹೀನತೆ, ಹೆಚ್ಚಿನ ಅಪಾಯದ ಗರ್ಭಧಾರಣೆ, ಕುಟುಂಬ ಯೋಜನೆ ವಿಧಾನಗಳ ಬಳಕೆ, ಮಾನಸಿಕ ಆರೋಗ್ಯ, ಕುಟುಂಬಗಳಲ್ಲಿನ ಅನುವಂಶಿಕ ಕಾಯಿಲೆಗಳ ಪರಿಶೀಲನೆ ಮೂಲಕ ಕುಟುಂಬದ ಎಲ್ಲಾ ಸದಸ್ಯರ ಆರೋಗ್ಯದ ವಿವರ ಮತ್ತು ಹೆರಿಗೆ ಮಾಡಿಸಿದ ಸ್ಥಳ ಹಾಗೂ ಆಯ್ಕೆ ವಿವರ, ಮಕ್ಕಳ ಶಾಲೆಯ ದಾಖಲೀಕರಣ, ಹದಿಹರೆಯದ ಹೆಣ್ಣು ಮಕ್ಕಳ ಋತುಚಕ್ರ ಮತ್ತು ವೈಯಕ್ತಿಕ ಶುಚಿತ್ವ ಕುರಿತ ಅನುಸರಿಸುವ ವಿಧಾನ ತಿಳಿಸಬೇಕು.
ಈ-ಸಂಜೀವಿನಿ ಓಪಿಡಿ ಆಪ್ಯ್ ಬಳಕೆ, ಚಿಕಿತ್ಸೆ ಪಡೆಯಲು ಬಯಸುವ ಆಸ್ಪತ್ರೆ ವಿವರ ಹಾಗೂ ಕುಟುಂಬದ ಪೌಷ್ಟಿಕ ಆಹಾರ ಸೇವನೆಯ ಪ್ರಮಾಣ ಮತ್ತು ಗುಣಮಟ್ಟ ಆಹಾರ ಪದ್ಧತಿ ಕುರಿತು ಸಮಿಕ್ಷೆಯ ಸಮಯದಲ್ಲಿ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸಿಡಗಿನಮೋಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪ್ರಹ್ಲಾದ, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶಕುಂತಲಾ, ಆಶಾ ಕಾರ್ಯಕರ್ತೆ ಸರೋಜಾ, ಅಂಗನವಾಡಿ ಕಾರ್ಯಕರ್ತೆ ಮರಿಲಿಂಗಮ್ಮ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.