ಕಾರವಾರ : ಕೋವಿಡ್-19 ಸವಾಲುಗಳ ನಡುವೆ ಯಶಸ್ವಿಯಾಗಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಿದ ಶಿರಸಿ ಹಾಗೂ ಕಾರವಾರ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಹಾಗೂ ರ್ಯಾಂಕ್ ಮೂಲಕ ಜಿಲ್ಲೆಯ ಕೀರ್ತಿಯನ್ನು ರಾಜ್ಯ ಮಟ್ಟದಲ್ಲಿ ಬೆಳಗಿದ ವಿದ್ಯಾರ್ಥಿಗಳಿಗೆ ಜಿಲ್ಲಾ ಪಂಚಾಯತ ಅಧ್ಯಕ್ಷೆ ಜಯಶ್ರೀ ಮೋಗೆರ ಅಭಿನಂದನೆ ಸಲ್ಲಿಸಿದರು.
ಮಂಗಳವಾರ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜರುಗಿದ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಆತಂಕಗಳ ನಡುವೆ ಪರೀಕ್ಷೆ ಬರೆದು, ಮೊದಲ ರ್ಯಾಂಕ್ ಪಡೆಯುವ ಮೂಲಕ ರಾಜ್ಯದಲ್ಲಿ ಜಿಲ್ಲೆಯ ಶೈಕ್ಷಣಿಕ ಯಶಸ್ಸು ತೋರಿದ ವಿದ್ಯಾರ್ಥಿಗಳ ಸಾಧನೆ ಶ್ಲಾಘನೀಯವಾಗಿದೆ ಎಂದರು.
ಪ್ರವಾಹ ಕಾಮಗಾರಿಗಳನ್ನು ವಿಳಂಭವಾಗದಂತೆ ಸಕಾಲದಲ್ಲಿ ಕೈಗೊಳ್ಳತ್ತಕ್ಕದ್ದು ಮತ್ತು ಪ್ರಕೃತಿ ವಿಕೋಪದಿಂದ ರೈತರ ಬೆಳೆನಾಶವಾಗಿದ್ದನ್ನು ತಾರತಮ್ಯವಿಲ್ಲದೆ ಸಮೀಕ್ಷೆ ನಡೆಸಬೇಕೆಂದು ತಿಳಿಸಿದರು.
ಅದೇರೀತಿ ಕೋವಿಡ್-19 ಸಂದರ್ಭದಲ್ಲಿ ಜಿಲ್ಲೆಯ ಎಲ್ಲಾ ಕೋವಿಡ್ ಕೇಂದ್ರಗಳಲ್ಲಿ ಯಾವುದೇ ತಾರತಮ್ಯವಿಲ್ಲದಂತೆ ರೋಗಿಗಳಿಗೆ ಸೂಕ್ತವಾದ ಆಹಾರ ಮತ್ತು ಚಿಕಿತ್ಸೆ ನೀಡುವಂತಾಗಬೇಕಲ್ಲದೇ ಇದರ ಕುರಿತು ಜನರಲ್ಲಿ ಜಾಗೃತೆ ಮೂಡಿಸಬೇಕೆಂದು ಆರೋಗ್ಯ ಇಲಾಖೆಗೆ ಸೂಚಿಸಿದರು.
ತೋಟಗಾರಿಕೆ ಇಲಾಖೆಯ ಪ್ರಗತಿಯನ್ನು ಪರಿಶೀಲಿಸಿದ ಅಧ್ಯಕ್ಷರು ಬೆಳೆ ಸಮೀಕ್ಷೆಯಲ್ಲಿ ದಾಖಲಾದ ಬೆಳೆಗಳಿಗೆ ಮೊದಲ ಆದ್ಯತೆ ನೀಡಿ ಪರಿಹಾರ ವಿತರಿಸಬೇಕೆಂದರು. ಇದಕ್ಕೆ ಪ್ರತಿಕ್ರಿಯಿಸಿದ ತೋಟಗಾರಿಕೆ ಇಲಾಖೆ ಅಧಿಕಾರಿಯು ಕೋವಿಡ್-19 ಲಾಕ್ಡೌನ್ ಕಾರಣದಿಂದ ಹಾನಿಯಾದ ಹೂ ಬೆಳೆದ ರೈತರಿಗೆ ಬೆಳೆ ಸಮೀಕ್ಷೆ ಪ್ರಕಾರ ದಾಖಲಾದ 23.51 ಹೆಕ್ಟರ್ ವಿಸ್ತೀರ್ಣದ 541 ರೈತರಿಗೆ 5.87944 ಲಕ್ಷ ಮೊತ್ತದ ಪರಿಹಾರ ಧನ ವಿತರಿಸಲಾಗಿದೆ ಮತ್ತು ಬೆಳೆ ಸಮೀಕ್ಷೆ ಹೊರತು ಪಡಿಸಿ 54.08 ಹೆಕ್ಟರ್ ವಿಸ್ತೀರ್ಣದ 1297 ರೈತರಿಗೆ 13.52 ಲಕ್ಷ ಮೊತ್ತದ ಪರಿಹಾರ ಧನಕ್ಕಾಗಿ ಅನುದಾನದ ಬೇಡಿಕೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು. ಅಲ್ಲದೇ ಹಣ್ಣು ಮತ್ತು ತರಕಾರಿ ಬೆಳೆದ ರೈತರಿಗೆ ಪರಿಹಾರ ಧನ ವಿತರಿಸಲು 689.20 ಹೆಕ್ಟರ್ ವಿಸ್ತೀರ್ಣದ 1666 ರೈತರಿಗೆ 103.46 ಲಕ್ಷ ಮೊತ್ತದ ಅನುದಾನ ಬೇಕಾಗುತ್ತದೆ. ಸರ್ಕಾರದ ನಿರ್ಧಾರದ ಮೇರೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಾಮಾಜಿಕ ನ್ಯಾಯ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಸವರಾಜ ದೊಡ್ಮನಿ ಅವರು ಮಾತನಾಡಿ, ಮಳೆ ಪರಿಸ್ಥಿತಿ ಅವಲೋಕಿಸಿ ಶಿರಸಿ ತಾಲೂಕಿನ ಬದನಗೋಡ ಕೆರೆ ಕುರಿತು ಪರಿಶೀಲಿಸಿ ಕ್ರಮ ವಹಿಸುವಂತೆ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಯು ಪ್ರವಾಹದಿಂದ ಹಾನಿಗೊಳಗಾದ ಬದನಗೋಡ ಕೆರೆ ಪುನರ್ಜೀವನ ಕಾಮಗಾರಿಗೆ ಈಗಾಗಲೇ ಗುತ್ತಿಗೆದಾರರನ್ನು ಕೂಡ ನೇಮಿಸಲಾಗಿರುತ್ತದೆ. ಕೆರೆ ಕಾಮಗಾರಿಯೂ ಪ್ರಗತಿಯಲ್ಲಿದ್ದು, ಯಾವುದೇ ಅಹಿತಕರ ಘಟನೆಗಳಾಗದಂತೆ ಕ್ರಮ ವಹಿಸಲಾಗುವುದೆಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಸಂತೋಷ ರೇಣಕೆ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಚೈತ್ರಾ ಕೊಟಾರಕರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿ ಮತ್ತು ಸಿಬ್ಬಂಧಿ ಹಾಜರಿದ್ದರು.