ಕಾರವಾರ: ಪ್ರವಾಹ ಸಂತ್ರಸ್ಥರಿಗೆ ಮಂಗಳವಾರದೊಳಗೆ ಪರಿಹಾರವನ್ನು ವಿತರಿಸುವ ಕಾರ್ಯವಾಗಬೇಕೆಂದು ಎಲ್ಲಾ ತಾಲೂಕು ತಹಶೀಲ್ದಾರರಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೀಷ್ ಮೌದ್ಗಿಲ್ ಸೂಚಿಸಿದರು.
ವಿಡಿಯೋ ಕಾನ್ಫರೆನ್ಸ್ ಮೂಲಕ ರವಿವಾರ ಎಲ್ಲಾ ತಹಶೀಲ್ದಾರರೊಂದಿಗೆ ಸಭೆ ನಡೆಸಿದ ಅವರು, ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಮನೆ ಮತ್ತು ಜಾನುವಾರು ಹಾನಿಗೊಳಗಾದ ಸಂತ್ರಸ್ಥರಿಗೆ ಮಂಗಳವಾರ ತಪ್ಪಿದಲ್ಲಿ ಬುಧವಾರ ಪರಿಹಾರವನ್ನು ವಿತರಿಸುವ ಹಾಗೂ ಜೀವ ಹಾನಿಯಾದ ಕುಟುಂಬಗಳಿಗೆ ತಕ್ಷಣವೇ ಪರಿಹಾರ ನೀಡುವ ಕಾರ್ಯವಾಗಬೇಕು. ಈಗಾಗಲೇ ಜಿಲ್ಲಾಡಳಿತ ಹಣ ಬಿಡುಗಡೆ ಮಾಡಿದ್ದು, ಯಾವುದೇ ಕಾರಣಕ್ಕೂ ವಿಳಂಬ ಮಾಡದೆ ಪರಿಹಾರ ಹಣವನ್ನು ವಿತರಿಸಬೇಕೆಂದರು.
ವಿದ್ಯುತ್, ರಸ್ತೆ ಮತ್ತು ದೂವಾಣಿ ಸಂಪರ್ಕ ಕಳೆದುಕೊಂಡಂತಹ ಗ್ರಾಮಗಳ ಪಟ್ಟಿಯನ್ನು ಶೀಘ್ರ ತಯಾರಿಸಿ ಕೊಟ್ಟಲ್ಲಿ, ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು. ಉಳಿದ ಪ್ರದೇಶಗಳಲ್ಲಿ ಹೆಸ್ಕಾಂ ಸಂಪರ್ಕ ವ್ಯವಸ್ಥೆ ಸರಿಯಾಗಿಲ್ಲವೆಂಬ ಸಾಕಸ್ಟು ದೂರುಗಳು ಬರುತ್ತಿದ್ದು, ಹೆಸ್ಕಾಂ ಅಧಿಕಾರಿಗಳು ಶೀಘ್ರವಾಗಿ ಕಾರ್ಯಪ್ರವೃತ್ತರಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕೆಂದು ತಿಳಿಸಿದರು.
ಯಲ್ಲಾಪುರದಲ್ಲಿಯ ರಸ್ತೆ ಸಂಪರ್ಕ ಸರಿಯಾಗಿದ್ದಲ್ಲಿ ಗ್ಯಾಸ್ ಟ್ಯಾಂಕರ ಮತ್ತು ಜೀವನಾವಶ್ಯಕ ವಸ್ತುಗಳನ್ನು ಪೂರೈಸುವ ವಾಹನಗಳಿದ್ದಲ್ಲಿ ಆಧ್ಯತೆ ಮೇರೆಗೆ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಬೇಕೆಂದು ತಿಳಿಸಿದರು.
ಸಂತ್ರಸ್ಥರು ಗಂಜೀಕೇಂದ್ರಗಳಲ್ಲಿ ಉಳಿಯದೇ ಸಂಬಂಧಿಕರ ಮನೆಯಲ್ಲಿ ಉಳಿದರೂ ಕೂಡಾ ಪರಿಹಾರ ಪಡೆಯಲು ಅರ್ಹರಿದ್ದು, ಸಂತ್ರಸ್ಥರಿಗೆ ಪರಿಹಾರ ವಿತರಿಸುವ ಕಾರ್ಯ ಶಿಘ್ರವಾಗಬೇಕೆಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಕೆ. ಅಪರ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್ ಸೇರಿದಂತೆ ಇತರ ಅಧಿಕಾರಿಗಳು ಹಾಜರಿದ್ದರು. .