ಮುಂಡಗೋಡ: ದನಗಳ ಮೈತೊಳೆಯಲು ಹೋಗಿ ಯುವಕನೋರ್ವ ನಿಯಂತ್ರಣ ತಪ್ಪಿ ನೀರಲ್ಲಿ ಮುಳಗಿ ಸಾವನೊಪ್ಪಿದ ಘಟನೆ ತಾಲೂಕಿನ ಯರೇಬೈಲ್ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಮೃತಪಟ್ಟ ಯುವಕರನನ್ನು ಯರೇಬೈಲ್ ಗ್ರಾಮದ ದ್ಯಾಮಣ್ಣ ವಿರುಪಾಕ್ಷಪ್ಪ ತಿಪ್ಪಣ್ಣನವರ(22) ಎಂದು ತಿಳಿದು ಬಂದಿದೆ. ಈತ ಗ್ರಾಮದ ಪಕ್ಕದಲ್ಲಿರುವ ಹಳ್ಳಕ್ಕೆ ಜಾನುವಾರುಗಳ ಮೈ ತೊಳೆಯಲು ತೆಗದುಕೊಂಡು ಹೋಗಿದ್ದನು. ಹಳ್ಳದಲ್ಲಿ ಹರಿಯುತ್ತಿರುವ ನೀರಿನಲ್ಲಿ ನಿಂತು ಎತ್ತುಗಳ ಮೈ ತೊಳೆಯುತ್ತಿರುವಾಗ ಎತ್ತುಗಳಿಗೆ ಕಟ್ಟಿದ ಹಗ್ಗ ಕಾಲಿಗೆ ಸಿಲುಕಿ ನಿಯಂತ್ರಣ ತಪ್ಪಿ ನೀರಲ್ಲಿ ಬಿದ್ದು ತೇಲಿಕೊಂಡು ಹೋಗಿದ್ದಾನೆ. ತಕ್ಷಣವೇ ಗ್ರಾಮಸ್ಥರು ಹಳ್ಳದಲ್ಲಿ ಹುಡುಕಾಟ ನಡೆಸಿದರು ಆತನ ಪತ್ತೆಯಾಗಲಿಲ್ಲ. ನಂತರ ಬೋಟ್ ಮೂಲಕ ಸ್ಥಳಿಯರು ಹಾಗೂ ಅಗ್ನಿಶಾಮಕ ದಳದವರು ಹಳ್ಳದಲ್ಲಿ ಹುಡುಕಾಟ ನಡೆಸಿದ 2-3ತಾಸಿನ ನಂತರ ಮೃತದೇಹ ಪತ್ತೆಯಾಯಿತು.
ತಹಸೀಲ್ದಾರ ಶ್ರೀಧರ ಮುಂದಲಮನಿ, ಪಿಎಸ್ಐ ಪ್ರೇಮನಗೌಡ ಪಾಟೀಲ, ಆರ್ಎಫ್ಓ ಸುರೇಶ ಕುಳ್ಳೊಳ್ಳಿ, ಅಗ್ನಿಶಾಮಕ ದಳದ ಸಿಬ್ಬಂದಿ, ನಂದಿಕಟ್ಟಾ ಗ್ರಾ.ಪಂ. ಪಿಡಿಒ ವೆಂಕಪ್ಪ ಲಮಾಣಿ ಇನ್ನಿತರರು ಘಟನಾ ಸ್ಥಳಕ್ಕೆ ಆಗಮಿಸಿದ್ದರು.
ದ್ಯಾಮಣ್ಣನ ಸಾವಿನಿಂದ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತು. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ