ಕಾರವಾರ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿವೃತ್ತ ನೌಕರರ ಪಿಂಚಣಿ ಸಂಬಂಧಿಸಿದ ಸಮಸ್ಯೆಗಳನ್ನು ಶೀಘ್ರ ಇತ್ಯರ್ಥಪಡಿಸುವಂತೆ ಜಿಲ್ಲಾಧಿಕಾರಿ ಡಾ.ಹರೀಶ್ಕುಮಾರ್ ಕೆ. ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ನಿವೃತ್ತ ಸರ್ಕಾರಿ ನೌಕರರ ಪಿಂಚಣಿ ಕುಂದು ಕೊರತೆ ಅಹವಾಲುಗಳ ಸ್ವೀಕೃತಿ ಮತ್ತು ಇತ್ಯರ್ಥಪಡಿಸುವ ಸಂಬಂಧಿಸಿದ ಪಿಂಚಣಿ ಅದಾಲತ್ ಉದ್ಘಾಟಿಸಿ ಅವರು ಮಾತನಾಡಿದರು.
ಪಿಂಚಣಿ ಗೊಂದಲಗಳಿಗೆ ಸಂಬಂಧಿಸಿದಂತೆ ಕೆಲವು ಹಳೆಯ ಸಮಸ್ಯೆಗಳೂ ಇವೆ. ನಿವೃತ್ತ ನೌಕರರ ಹಿತ ಕಾಪಾಡುವುದು ಬಹುಮುಖ್ಯ. ಈ ಹಿನ್ನೆಲೆ ಸಮಸ್ಯೆ ಇರುವ ಪಿಂಚಣಿ ಸಮಸ್ಯೆಗಳನ್ನು ಶೀಘ್ರವೇ ಇತ್ಯರ್ಥಪಡಿಸುವಂತೆ ಅವರು ಸಂಬಂಧಿಸಿದ ಅಧಿಕಾರಿಗೆ ಸೂಚಿಸಿದರು.
ಪಿಂಚಣಿ ಅದಾಲತ್ಗೆ ಸಂಬಂಧಿಸಿದಂತೆ ಒಟ್ಟು 49 ಅರ್ಜಿಗಳು ಸ್ವೀಕೃತವಾದವು. ಜಿಲ್ಲಾಧಿಕಾರಿಗಳು ಪಿಂಚಣಿ ಅದಾಲತ್ನಲ್ಲಿ ಪಿಂಚಣಿದಾರರ ಕುಂದುಕೊರತೆಗಳನ್ನು ಆಲಿಸಿ, ಕೆಲವು ಪ್ರಕರಣಗಳನ್ನು ಸ್ಥಳದಲ್ಲಿಯೇ ಇತ್ಯರ್ಥಪಡಿಸಿದರು.
ವೇದಿಕೆಯಲ್ಲಿ ಭೂ ಅಭಿವೃದ್ಧಿ ಬ್ಯಾಂಕ್ನ ಮುಖ್ಯ ವ್ಯವಸ್ಥಾಪಕರಾದ ಎಮ್.ಪಿಂಜಾರ್, ಪ್ರಭಾರ ಜಿಲ್ಲಾ ಖಜಾನಾಧಿಕಾರಿ ವಾಸಂತಿ ಮಾಳವಣಕರ, ಪಿಂಚಣಿ ಸಣ್ಣ ಉಳಿತಾಯ ಮತ್ತು ಆಸ್ತಿ-ಋಣ ನಿರ್ವಹಣೆ ಇಲಾಖೆಯ ಸಹಾಯಕ ನಿರ್ದೇಶಕ ಎಮ್.ಆರ್.ನಾಯ್ಕ ಉಪಸ್ಥಿತರಿದ್ದರು. ಪಿಂಚಣಿ ಅದಾಲತ್ನಲ್ಲಿ ಪಿಂಚಣಿ ಪಾವತಿಸುವ ಎಲ್ಲಾ ಬ್ಯಾಂಕ್ ವ್ಯವಸ್ಥಾಪಕರು, ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳು, ನಿವೃತ್ತ ನೌಕರರು ಹಾಜರಿದ್ದರು.