ತೆಲಂಗಾಣ: ಸರಕಾರಿ ವಸತಿ ಶಾಲೆಯಲ್ಲಿ ದಲಿತ ವಿದ್ಯಾರ್ಥಿನಿ ಆತ್ಮಹತ್ಯೆ
ಹೈದರಾಬಾದ್: ತೆಲಂಗಾಣದ ನಾಗಕರ್ನೂಲು ಜಿಲ್ಲೆಯಲ್ಲಿಯ ಸಮಾಜ ಕಲ್ಯಾಣ ಇಲಾಖೆ ಅಧೀನದ ವಸತಿ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಓದುತ್ತಿದ್ದ ದಲಿತ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ.
ಸೋಮವಾರ ಈ ಘಟನೆ ನಡೆದಿದ್ದು, ಶಾಲೆಯ ವಿರುದ್ದ ಪ್ರತಿಭಟನೆ ಭುಗಿಲೆದ್ದಿತ್ತು. ಶಾಲೆಯ ಪ್ರಾಂಶುಪಾಲರು ಮತ್ತು ಸಿಬ್ಬಂದಿಯ ಕಿರುಕುಳ ತಮ್ಮ ಪುತ್ರಿಯ ಆತ್ಮಹತ್ಯೆಗೆ ಕಾರಣ ಎಂದು ಮೃತ ನಿಖಿತಾ(13)ಳ ಹೆತ್ತವರು ಆರೋಪಿಸಿದ್ದಾರೆ. ಅಮ್ರಾಬಾದ ಪೊಲೀಸರು ಶಂಕಾಸ್ಪದ ಸಾವು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ನಿಖಿತಾ ತನ್ನ ಸ್ನೇಹಿತೆಯರೊಂದಿಗಿನ ತಪ್ಪು ತಿಳುವಳಿಕೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಶಾಲಾ ಆಡಳಿತ ಮಂಡಳಿಯು ಹೇಳಿರುವುದನ್ನು ಮಾಧ್ಯಮಗಳು ಉಲ್ಲೇಖಿಸಿವೆ. ಆದರೆ ನಿಖಿತಾ ಶಾಲೆಯ ಪ್ರಾಂಶುಪಾಲರು ಮತ್ತು ಸಿಬ್ಬಂದಿಯಿಂದ ಕಿರುಕುಳಕ್ಕೊಳಗಾಗಿದ್ದಳು ಎಂದು ಹೆತ್ತವರು ಮತ್ತು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ನಿಖಿತಾಳ ಸಾವಿನ ಹಲವಾರು ಗಂಟೆಗಳ ಬಳಿಕವಷ್ಟೇ ಹೆತ್ತವರಿಗೆ ಮಾಹಿತಿ ನೀಡಲಾಗಿತ್ತು ಎಂದೂ ಅವರು ದೂರಿದ್ದಾರೆ.
ಸೋಮವಾರ ಮಧ್ಯಾಹ್ನ ಎರಡು ಗಂಟೆಗೆ ನಿಖಿತಾ ಮೃತಪಟ್ಟಿದ್ದಳು, ಆದರೆ ಸಂಜೆ ಏಳು ಗಂಟೆಯ ಸುಮಾರಿಗೆ ಹೆತ್ತವರಿಗೆ ಮಾಹಿತಿ ನೀಡಲಾಗಿತ್ತು. ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸುವಾಗ ಮಧ್ಯರಾತ್ರಿ ಕಳೆದಿತ್ತು ಎಂದು ಬಿಎಸ್ಪಿ ನಾಯಕ ಶ್ರೀನಿವಾಸಲು ಹೇಳಿದರು. ಪೊಲೀಸರು ಪ್ರತಿಭಟನಾಕಾರರ ವಿರುದ್ಧ ಲಾಠಿ ಪ್ರಹಾರ ನಡೆಸಿದರು ಎಂದೂ ಅವರು ಆರೋಪಿಸಿದರು.