ದಿನಂಪ್ರತಿ 115 ದಿನಗೂಲಿ ಕಾರ್ಮಿಕರ ಆತ್ಮಹತ್ಯೆ; ಲೋಕಸಭೆಯಲ್ಲಿ 2021ರ ಎನ್ಸಿಆರ್ಬಿ ದತ್ತಾಂಶ ಉಲ್ಲೇಖಿಸಿದ ಕೇಂದ್ರ ಸರಕಾರ
ಹೊಸದಿಲ್ಲಿ: 2021ರಲ್ಲಿ ಪ್ರತೀ ದಿನ ಸರಾಸರಿ 115 ದಿನಗೂಲಿ ಕಾರ್ಮಿಕರು ಹಾಗೂ 63 ಗೃಹಿಣಿಯರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕೇಂದ್ರ ಸರಕಾರ ಸಂಸತ್ತಿಗೆ ತಿಳಿಸಿದೆ.
ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದ ಮುಹಮ್ಮದ್ ಜಾವೇದ್ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೇಂದ್ರದ ಸಹಾಯಕ ಸಚಿವ ನಿತ್ಯಾನಂದ ರಾಮ್ ಅವರು ರಾಷ್ಟ್ರೀಯ ಅಪರಾಧ ದಾಖಲೆ ಬ್ಯುರೋದ ದತ್ತಾಂಶವನ್ನು ಉಲ್ಲೇಖಿಸಿದರು. ಒಟ್ಟು 20,231 ಸ್ವಉದ್ಯೋಗಿಗಳು 15,870 ವೇತನ ಪಡೆಯುತ್ತಿರುವರು, 13,714 ನಿರುದ್ಯೋಗಿಗಳು ಹಾಗೂ 13,089 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.
ದೇಶದಲ್ಲಿ ದಿನಗೂಲಿ ಕಾರ್ಮಿಕರ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವುದನ್ನು ತಡೆಯಲು ಕೇಂದ್ರ ಸರಕಾರ ತೆಗೆದುಕೊಂಡ ಕ್ರಮಗಳನ್ನು ತಿಳಿಸುವಂತೆ ಜಾವೇದ್ ಕೋರಿದರು. ಇದಕ್ಕೆ ರಾಯ್ ಅವರು, ಕೃಷಿ ಕ್ಷೇತ್ರದ ಕಾರ್ಮಿಕರು ಸೇರಿದಂತೆ ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಸೌಲಭ್ಯ ಒದಗಿಸಲು ಸರಕಾರ 2008ರಲ್ಲಿ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಕಾಯ್ದೆಯನ್ನು ಜಾರಿಗೆ ತಂದಿದೆ ಎಂದರು.
ಜೀವನ ಹಾಗೂ ಅಂಗವಿಕಲರಿಗೆ ರಕ್ಷಣೆ, ಆರೋಗ್ಯ ಹಾಗೂ ಹೆರಿಗೆ ಸೌಲಭ್ಯಗಳು, ವೃದ್ಧರ ರಕ್ಷಣೆ ಮತ್ತು ಕೇಂದ್ರ ಸರಕಾರ ನಿರ್ಧರಿಸಬಹುದಾದ ಯಾವುದೇ ಇತರ ಸೌಲಭ್ಯಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಅಸಂಘಟಿತ ಕಾರ್ಮಿಕರಿಗೆ ಸೂಕ್ತವಾದ ಕಲ್ಯಾಣ ಯೋಜನೆಗಳನ್ನು ರೂಪಿಸಲು ಈ ಕಾಯ್ದೆ ಅವಕಾಶ ನೀಡುತ್ತದೆ' ಎಂದು ಸಚಿವರು ತಿಳಿಸಿದರು.
ದಿನಗೂಲಿ ಕಾರ್ಮಿಕರಿಗೆ ಸರಕಾರ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆಯಂತಹ ಯೋಜನೆಗಳ ಅಡಿಯಲ್ಲಿ ಜೀವವಿಮೆ ಹಾಗೂ ಅಂಗವಿಕಲರಿಗೆ ವಿಮೆಯನ್ನು ಒದಗಿಸುತ್ತದೆ ಎಂದು ನಿತ್ಯಾನಂದ ರಾಮ್ ತಿಳಿಸಿದರು.