ವಾಯುಭಾರ ಕುಸಿತ; ಉತ್ತರಕನ್ನಡ ಜಿಲ್ಲೆಯಲ್ಲಿ ವರುಣನ ಅರ್ಭಟ
• ಮುರುಢೇಶ್ವರದಲ್ಲಿ ಸಮುದ್ರದಲೆಗೆ ಕೊಚ್ಚಿ ಹೋದ ಗೂಡಂಗಡಿಗಳು
ಭಟ್ಕಳ: ವಾಯುಭಾರ ಕುಸಿತದಿಂದಾಗಿ ಉತ್ತರಕನ್ನಡ ಜಿಲ್ಲೆಯ ಕರಾವಳಿ ತೀರದ ಜನರು ಹೈರಾಣಾಗಿದ್ದಾರೆ. ನಿರಂತವಾಗಿ ಬೀಳುತ್ತಿರುವ ಬಿರುಗಾಳ ಮಳೆಗೆ ಅರಬ್ಬಿ ಸಮುದ್ರ ಅರ್ಬಟಿಸುತ್ತಿದೆ. ಇದರಿಂದಾಗಿ ತೀರಪ್ರದೇಶದ ಜನರು ಆತಂಕಿತಗೊಂಡಿದ್ದಾರೆ.
ಕಳೆದ ಎರಡು ದಿನಗಳಿಂದ ಸತತವಾಗಿ ಬೀಳುತ್ತಿರುವ ಮಳೆಯಿಂದಾಗಿ ಮುರುಢೇಶ್ವರ ಸಮುದ್ರದಲ್ಲಿ ನೀರು ಉಕ್ಕಿ ಹರಿಯುತ್ತಿದ್ದು ತೀರದಲ್ಲಿರುವ ಗೂಡಂಗಡಿಗಳು, ತಳ್ಳುಗಾಡಿಗಳು ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದು ತಮ್ಮ ತಮ್ಮ ವಸ್ತುಗಳು ಕಾಪಾಡಿಕೊಳ್ಳಲು ಜನರು ಹರಸಾಹಸ ಪಡುತ್ತಿದ್ದಾರೆ.
ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಎಚ್ಚರಿಕೆಯ ಕ್ರಮವನ್ನು ಜರಗಿಸಿದ್ದು ಮೀನುಗಾರಿಕೆಗೆ ತೆರಳದಂತೆ ಮೀನುಗಾರರಿಗೆ ಸೂಚನೆಯನ್ನು ನೀಡಿದೆ.
ವಾಯುಭಾರ ಕುಸಿತ ಹಿನ್ನಲೆ ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ವರುಣನ ಅಬ್ಬರ ಹೆಚ್ಚಾಗಿದೆ. ಮಲೆನಾಡು ಭಾಗದಲ್ಲಿ ಬಾರಿ ಮಳೆಯಿಂದಾಗಿ ಶರಾವತಿ ನದಿ ಉಕ್ಕಿ ಹರಿಯುತ್ತಿದ್ದು ಹೊನ್ನಾವರ ಬಂದರು ಸಂಪೂರ್ಣ ಜಲಾವೃತವಾಗಿದೆ. ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗುತ್ತಿರುವುದರಿಂದ ಕರಾವಳಿ ಮೀನುಗಾರಿಕೆ ಸ್ಥಗಿತ ಗೊಂಡಿದೆ. ಕಾರವಾರ ಹೊನ್ನಾವರ, ತದಡಿ ಬಂದರುಗಳು ಸೇರಿದಂತೆ ಕರ್ನಾಟಕ, ಗೋವಾ ಮೀನುಗಾರಿಕಾ ಬೋಟ್ ಗಳು ಲಂಗುರು ಹಾಕಿವೆ. ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಇನ್ನೂ ಮೂರು ದಿನಗಳ ಕಾಲ ಮೆಳೆಯಾಗಲಿದೆ ಎಂಬ ಮಾಹಿತಿ ಹವಮಾನ ಇಲಾಖೆ ನೀಡಿದೆ. ಉತ್ತರಕನ್ನಡ ಜಿಲ್ಲಾಡಳಿತ ಆರೆಂಜ್ ಅಲರ್ಟ್ ಘೋಷಿಸಿದೆ.
ಮಳೆ ಗಾಳಿಯಿಂದಾಗಿ ಭಟ್ಕಳ ತಾಲೂಕಿನಾದ್ಯಂತ ಹಲವು ಕಡೆಗಳಲ್ಲಿ ಮರ, ವಿದ್ಯುತ್ ಕಂಬಗಳು ಉರುಳಿ ಬಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಬೆಳ್ನಿಯ ಕೃಷ್ಣನಂದ ನಾರಾಯಣ ಮೇಸ್ತಿಯವರ ಆಟೋ ರಿಕ್ಷಾದ ಮೇಲೆ ತೆಂಗಿನ ಮರ ಬಿದ್ದು ಆಟೋ ಸಂಪೂರ್ಣವಾಗಿ ಜಖಂ ಗೊಂಡಿದೆ. ಕಾಯ್ಕಿಣಿ ಗ್ರಾಮದ ಬಿದ್ರಮನೆ ಮಜರೆಯ ನಿವಾಸಿಗಳಾದ ಮಾದೇವಿ ಲಿಂಗಯ್ಯ ನಾಯ್ಕ, ಮಂಜಮ್ಮ ಮಂಜುನಾಥ ನಾಯ್ಕ ಇವರ ವಾಸಿಸುವ ಮನೆಯ ಮೇಲೆ ಮರಬಿದ್ದು ಸಂಪೂರ್ಣವಾಗಿ ಎರಡು ಮನೆಗಳು ಹಾನಿಯಾಗಿರುತ್ತವೆ. ಅಲ್ಲದೆ ಹೆಬಳೆ ಪಂಚಾಯತ್ ವ್ಯಾಪ್ತಿಯ ತೆಂಗಿನಗುಂಡಿಯಲ್ಲಿ ವಿದ್ಯುತ್ ಕಂಬ ಉರುಳಿಬಿದ್ದಿದ್ದು ಜನ-ಜಾನುವಾರುಗಳಿಗೆ ಯಾವುದೇ ಪ್ರಾಣಹಾನಿ ಸಂಭವಿಸಿರುವುದಿಲ್ಲ.
ಜಾಲಿ ಸಮುದ್ರತೀರದಲ್ಲಿ ಅತಿಯಾದ ಬಿರುಗಾಳಿಯಿಂದಾಗಿ ಹಲವು ಮನೆಗಳ ಹಂಚುಗಳು ಗಾಳಿಗೆ ಹಾರಿ ಹೋಗಿರುವ ಕುರಿತಂತೆ ವರದಿಯಾಗಿದೆ.